ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ನಿಧನ
ನವದೆಹಲಿ, ಏಪ್ರಿಲ್ 16: ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ (68) ಅವರು ಶುಕ್ರವಾರ ಬೆಳಿಗ್ಗಿನ ಜಾವ ದೆಹಲಿಯಲ್ಲಿ ನಿಧನರಾಗಿದ್ದಾರೆ. ಗುರುವಾರ ರಾತ್ರಿಯಷ್ಟೆ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.
ಕೊರೊನಾವೈರಸ್ ನಿಂದ ಮೃತಪಟ್ಟರೇ ಎಂಬುದು ಇನ್ನೂ ದೃಢಪಟ್ಟಿಲ್ಲ.
1974ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿ ಸೇರ್ಪಡೆಗೊಂಡ ರಂಜಿತ್ಸಿನ್ಹಾ ಅವರು ಐಟಿಬಿಪಿ, ರೈಲ್ವೆ ಬೋರ್ಡ್ ಸೇರಿದಂತೆ ದೇಶದ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು. ಸಾರ್ವಜನಿಕ ವಲಯದ ಬ್ಯಾಂಕಿನ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಸೆನ್ಸಾರ್ ಬೋರ್ಡ್ ನ ಸಿಇಒ ಆಗಿ ಕೆಲಸ ಮಾಡಿದ್ದರು. ಭಾರತ- ಟಿಬೆಟ್ ಗಡಿ ಭದ್ರತಾ ಪಡೆಯ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ನಿಮಗೆ ಬೇಕಾದ್ದು ಬರೆದುಕೊಳ್ಳಿ : ಸಿಬಿಐ ನಿರ್ದೇಶಕ ಸಿನ್ಹಾ
2012ರಲ್ಲಿ ಸಿಬಿಐ ನಿರ್ದೇಶಕರಾಗಿ ನೇಮಕವಾಗುವುದಕ್ಕೂ ಮುನ್ನ ರೈಲ್ವೆ ರಕ್ಷಣಾ ಪಡೆಯ ಮುಖ್ಯಸ್ಥರಾಗಿ, ಸಿಬಿಐನ ಪಾಟ್ನಾ ಹಾಗೂ ದೆಹಲಿಯಲ್ಲಿ ಹಲವು ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದರು.
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಆರೋಪಿಯಾಗಿದ್ದ ಮೇವು ಹಗರಣದ ತನಿಖೆ ನಡೆಸಿದ್ದ ಸಿನ್ಹಾ ಅವರು ಕೊನೆಗೆ ಲಾಲೂ ಅವರನ್ನು ರಕ್ಷಣೆ ಮಾಡುವ ಉದ್ದೇಶದಿಂದಲೇ ತನಿಖೆಯನ್ನು ದಿಕ್ಕು ತಪ್ಪಿಸಿದರೆಂಬ ಆರೋಪವನ್ನು ಹೊರಬೇಕಾಯಿತು. ಸುಮಾರು 38 ವರ್ಷಗಳ ಕರ್ತವ್ಯ ಪಾಲನೆ ನಂತರ ಸಿನ್ಹಾ ಅವರು ನಿವೃತ್ತಿಯಾಗಿದ್ದರು.