ಗಣರಾಜ್ಯೋತ್ಸವಕ್ಕೆ ಭಯೋತ್ಪಾದಕರಿಗಿಂತ ಹಕ್ಕಿಗಳಿಂದಲೇ ಅಪಾಯ!
ಭಯೋತ್ಪಾದಕರಿಗೆ ಹೋಲಿಸಿದರೆ ಗಣರಾಜ್ಯೋತ್ಸವ ದಿನಾಚರಣೆಗೆ ಪಕ್ಷಿಗಳು ಬಹುದೊಡ್ಡ ಅಪಾಯವಾಗಿ ಪರಿಣಮಿಸಿವೆ.
ನವದೆಹಲಿ, ಜನವರಿ 18: ಮಂಗಳವಾರ (ಜನವರಿ 17) ದಂದು ಭದ್ರತಾ ವ್ಯವಸ್ಥೆಯನ್ನು ಎಚ್ಚರಿಸಲು ಗುಪ್ತಚರ ಇಲಾಖೆ ಸಾಮಾನ್ಯ ಅಲರ್ಟ್ ಹೊರಡಿಸಿತ್ತು. ಆದರೆ ನಿಜವಾದ ಅಪಾಯ ಇರುವುದು ಪೂರ್ವ ದೆಹಲಿಯಲ್ಲಿ ರಾಶಿ ಬಿದ್ದಿರುವ ಕಸದಿಂದ. ಇಲ್ಲಿ ರಾಶಿ ಬಿದ್ದಿರುವ ಕಸ ಹಕ್ಕಿಗಳನ್ನು ಆಕರ್ಷಿಸುತ್ತಿದ್ದು , ಗಣರಾಜ್ಯೋತ್ಸವದ ದಿನ ಭಾರತೀಯ ವಾಯು ಸೇನೆಯ ಪ್ರದರ್ಶನಕ್ಕೆ ಅಪಾಯ ತಂದೊಡ್ಡಿದೆ.
ಪ್ರತೀ ವರ್ಷ ಇದೇ ವಿಚಾರ ಪುನರಾವರ್ತನೆಯಾಗುತ್ತಿದೆ. ಹಕ್ಕಿಗಳು ಹಾರಾಡದಂತೆ ತಡೆಯಲು ಆಡಳಿತ ವ್ಯವಸ್ಥೆ ಪ್ರತೀ ವರ್ಷ ಒದ್ದಾಡುತ್ತಲೇ ಬಂದಿದೆ. ಒಂದೊಮ್ಮೆ ಹಕ್ಕಿಗಳು ವಿಮಾನಕ್ಕೆ ಅಪ್ಪಳಿಸಿದಲ್ಲಿ ದೊಡ್ಡ ಮಟ್ಟಕ್ಕೆ ಹಾನಿಯಾಗಲಿದೆ.
ಪೂರ್ವ ದೆಹಲಿಯ ರಸ್ತೆಗಳಲ್ಲಿ ಗುಡ್ಡೆ ಬಿದ್ದಿರುವ ಕಸ ಅಧಿಕಾರಿಗಳ ತಲೆ ಕೆಡಿಸಿದೆ. ಈ ಪರಿಸ್ಥಿತಿಯಲ್ಲಿ ಕಸ ಹಕ್ಕಿಗಳನ್ನು ದೊಡ್ಡ ಮಟ್ಟಕ್ಕೆ ಆಕರ್ಷಿಸುತ್ತಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಇದು ಗಣರಾಜ್ಯೋತ್ಸವದ ದಿನ ನಡೆಯಲಿರುವ ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಮಾನಕ್ಕೆ ಒಂದು ಹಕ್ಕಿ ತಾಗಿದರೆ ಏನೂ ಸಮಸ್ಯೆ ಇಲ್ಲ. ಆದರೆ, ಹೆಚ್ಚಿನ ಹಕ್ಕಿಗಳು ಅಪ್ಪಳಿಸಿದಲ್ಲಿ ವಿಮಾನಕ್ಕೆ ದೊಡ್ಡ ಮಟ್ಟಕ್ಕೆ ಹಾನಿಯಾಗಲಿದೆ.
ಪೂರ್ವ ದೆಹಲಿಯ ರಸ್ತೆಗಳ ಮೇಲೆ ದಿನದಿಂದ ದಿನಕ್ಕೆ ಕಸಗಳ ರಾಶಿಯೇ ಬೀಳುತ್ತಿದೆ. ಜನವರಿ 8ರಂದು ಪೂರ್ವ ದೆಹಲಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ತಮ್ಮ ಮೂರು ತಿಂಗಳ ಬಾಕಿ ಸಂಬಳವನ್ನು ನೀಡಬೇಕು ಎಂಬ ಬೇಡಿಕೆಯ ಮೇಲೆ ಮುಷ್ಕರವನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿಲ್ಲ. ಹೀಗಾಗಿ ಕಸದ ರಾಶಿ ಬೆಳೆಯುತ್ತಲೇ ಇದೆ.
ಇಲ್ಲಿನ ಪೌರ ಕಾರ್ಮಿಕರು ಮುಷ್ಕರ ನಡೆಸುವುದು ಸಾಮಾನ್ಯ ವಿಚಾರ. 2015ರ ಜನವರಿ, ಅಕ್ಟೋಬರ್ ನಲ್ಲಿ ಈ ಹಿಂದೆ ಕಾರ್ಮಿಕರು ಮುಷ್ಕರ ನಡೆಸಿದ್ದರು. ನಂತರ ದೆಹಲಿ ಹೈ ಕೋರ್ಟ್ ಮಧ್ಯಪ್ರವೇಶದಿಂದ ಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದರು.(ಒನ್ಇಂಡಿಯಾ ಸುದ್ದಿ)