'ಮಸೂದ್ ಅಜರ್ ಭಾವಮೈದುನ ನಿಗಾದಲ್ಲಿದ್ದ ಜೈಶ್ ಕ್ಯಾಂಪ್ ಉಡೀಸ್'
Recommended Video
ನವದೆಹಲಿ, ಫೆಬ್ರವರಿ 26: ದೇಶದ ನಾನಾ ಭಾಗಗಳಲ್ಲಿ ಆತ್ಮಾಹುತಿ ದಾಳಿ ನಡೆಸಲು ಜೈಶ್-ಇ-ಮೊಹ್ಮದ್ ಸಿದ್ಧತೆ ನಡೆಸುತ್ತಿದೆ ಎಂದು ವಿಶ್ವಾಸಾರ್ಹ ಮೂಲಗಳಿಂದಲೇ ನಮಗೆ ಮಾಹಿತಿ ಬಂದಿತ್ತು. ಅದಕ್ಕಾಗಿಯೇ ಫಿದಾಯಿನ್ ಗಳ ತರಬೇತಿ ಕೂಡ ನಡೆಯುತ್ತಿತ್ತು ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮಂಗಳವಾರದಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇರುವ ಭಯೋತ್ಪಾದಕರ ತರಬೇತಿ ಕೇಂದ್ರಗಳು, ಅಡಗು ತಾಣಗಳ ಮೇಲೆ ಭಾರತ ವಾಯು ದಾಳಿ ನಡೆಸಿದೆ ಎಂಬುದನ್ನು ಖಚಿತ ಪಡಿಸಿದ್ದಾರೆ. ಪುಲ್ವಾಮಾದಲ್ಲಿ ಉಗ್ರ ದಾಳಿ ನಡೆದ ನಂತರ ಹೊಣೆ ಹೊತ್ತುಕೊಂಡಿದ್ದ ಜೈಶ್-ಇ-ಮೊಹ್ಮದ್ ಸಂಘಟನೆಯನ್ನು ಆ ಭಾಗದಲ್ಲಿ ನಿಶ್ಶೇಷ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಉಗ್ರರ ಮೂರು ನೆಲೆಗಳ ಮೇಲೆ ಕರಾರುವಾಕ್ ದಾಳಿ ನಡೆದಿದ್ದು ಹೇಗೆ?
ಜೈಶ್ ನಿಂದ ದಾಳಿಗಳಾಗಬಹುದು ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾದ ಮೇಲೆ ಮುಂಜಾಗ್ರತಾ ಕ್ರಮಗಳು ತೆಗೆದುಕೊಳ್ಳುವುದು ಬಹಳ ಮುಖ್ಯ. ಬಾಲ್ ಕೋಟ್ ನಲ್ಲಿ ಇರುವ ಜೈಶ್ ಇ ಮೊಹ್ಮದ್ ನ ಅತಿ ದೊಡ್ಡ ನೆಲೆಯ ಮೇಲೆ ಭಾರತವು ದಾಳಿ ನಡೆಸಿದೆ ಎಂದು ಗೋಖಲೆ ಅವರು ಮಾಹಿತಿ ನೀಡಿದ್ದಾರೆ.
ಜೈಶ್ ಇ ಮೊಹ್ಮದ್ ನ ಅತಿ ದೊಡ್ಡ ಕ್ಯಾಂಪ್
ಗುಪ್ತಚರ ಮಾಹಿತಿ ಅಧಾರದಲ್ಲಿ ಮಂಗಳವಾರ ನಸುಕಿನ ಜಾವ ಈ ಕಾರ್ಯಾಚರಣೆ ನಡೆದಿದೆ. ದೊಡ್ಡ ಸಂಖ್ಯೆಯಲ್ಲಿ ಜೈಶ್ ನ ಉಗ್ರಗಾಮಿಗಳು, ತರಬೇತುದಾರರು, ಹಿರಿಯ ಕಮ್ಯಾಂಡರ್ ಗಳು ಹಾಗೂ ಜಿಹಾದಿಗಳನ್ನು ಹೊಸಕಿ ಹಾಕಲಾಗಿದೆ. ಬಾಲ್ ಕೋಟ್ ನಲ್ಲಿನ ಅತಿ ದೊಡ್ಡ ತರಬೇತಿ ಕ್ಯಾಂಪ್ ನ ಮೇಲೆ ಭಾರತ ಈ ದಾಳಿ ನಡೆಸಿದೆ ಎಂದು ಅವರು ಹೇಳಿದ್ದಾರೆ.
ಮಸೂದ್ ಅಜರ್ ನ ಭಾವಮೈದುನ ಉಸ್ತುವಾರಿ
ಜೈಶ್ ಇ ಮೊಹ್ಮದ್ ನ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನ ಭಾವಮೈದುನ ಮೌಲಾನಾ ಯೂಸೂಫ್ ಅಜರ್ ಅಲಿಯಾಸ್ ಉಸ್ತಾದ್ ಘೋರಿ ಆ ನೆಲೆಯನ್ನು ನಡೆಸುತ್ತಿದ್ದ. ಗುರಿಯನ್ನು ಆಯ್ದುಕೊಳ್ಳುವಾಗ ನಮ್ಮ ಇಚ್ಛೆಯಿಂತೆ ಬೆಟ್ಟ ಪ್ರದೇಶ ಮೇಲ್ಭಾಗದ ಕಾಡುಗಳಲ್ಲಿ ದಾಳಿ ನಡೆಸಲಾಗಿದೆ. ನಾಗರಿಕರಿಗೆ ಯಾವುದೇ ಹಾನಿ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಪುಲ್ವಾಮಾ ಪ್ರತೀಕಾರ LIVE: ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್ಯ
ಜೈಶ್ ನೆಲೆಗಳು ಮಾತ್ರ ದಾಳಿಯ ಗುರಿ
ಭಯೋತ್ಪಾದನೆ ಎಂಬುದರ ವಿರುದ್ಧದ ಹೋರಾಟದಲ್ಲಿ ಭಾರತ ದೃಢವಾಗಿದೆ. ಜತೆಗೆ ಇದರ ವಿರುದ್ಧ ಎಲ್ಲ ಕ್ರಮಕ್ಕೂ ಬದ್ಧವಾಗಿದೆ. ಈ ಮುಂಜಾಗ್ರತಾ ಕಾರ್ಯಾಚರಣೆಯು ನಿರ್ದಿಷ್ಟವಾಗಿ ಜೈಶ್ ಇ ಮೊಹ್ಮದ್ ನೆಲೆಗಳನ್ನು ಮಾತ್ರ ಗುರಿಯಾಗಿ ಮಾಡಿಕೊಂಡಿತ್ತು. ನಾಗರಿಕರಿಗೆ ಯಾವುದೇ ತೊಂದರೆ ಆಗದಿರುವಂತೆ ಗುರಿ ನಿಗದಿ ಮಾಡಿಕೊಂಡಿದ್ದೆವು ಎಂದು ವಿಜಯ್ ಗೋಖಲೆ ತಿಳಿಸಿದ್ದಾರೆ.
ಹೆಚ್ಚಿನ ವಿವರ ನೀಡದ ವಿದೇಶಾಂಗ ಕಾರ್ಯದರ್ಶಿ
ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ದಾಳಿಯ ಬಗ್ಗೆ ಹೆಚ್ಚಿನ ವಿವರ ನೀಡಲಿಲ್ಲ. ಆದರೆ ಭಾರೀ ಸಂಖ್ಯೆಯಲ್ಲಿ ಭಯೋತ್ಪಾದಕರನ್ನು ಉಡಾಯಿಸಲಾಗಿದೆ ಎಂದಷ್ಟೇ ಹೇಳಿದ್ದಾರೆ. ಇನ್ನು, "ವಾಯು ದಾಳಿಯು ಕೆಲ ಸಮಯದ ಹಿಂದಷ್ಟೇ ನಡೆದಿದೆ. ನಾವು ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ" ಎಂದು ಹೇಳಿದ್ದಾರೆ.