ವಂದೇ ಮಾತರಂ ಹಾಡದ ಮುಸ್ಲಿಂ ಕೌನ್ಸಿಲರ್ ಗಳಿಗೆ ಬಹಿಷ್ಕಾರ
ಉತ್ತರ ಪ್ರದೇಶದಲ್ಲಿ ಈಗ ಯೋಗಿ ಆದಿತ್ಯನಾಥ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ಅಲ್ಲಿ ಭಾರತೀಯತೆಯ ಭಾವನೆಗಳಿಗೆ ಧಕ್ಕೆ ತರುವಂಥ ಯಾವುದೇ ಪ್ರಕರಣಗಳಾಗಲೀ ಕ್ರಮ ಖಾತ್ರಿ ಎಂಬಂತಹ ವಾತಾವರಣ ನಿರ್ಮಾಣವಾಗಿದೆ.
ಮೀರತ್, ಮಾರ್ಚ್ 31: ವಂದೇ ಮಾತರಂ ಹಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಪುರಸಭೆಯ ಏಳು ಕೌನ್ಸಿಲರ್ ಗಳನ್ನು ನಗರ ಸಭೆಯ ಸಭೆಯಿಂದ ಬಹಿಷ್ಕಾರ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳವಾರ ಬೆಳಗ್ಗೆ ಎಂದಿನಂತೆ ಕಲಾಪ ಆರಂಭವಾಗಿತ್ತು. ಕಲಾಪಕ್ಕೂ ಮೊದಲು ವಂದೇ ಮಾತರಂ ಹಾಡಲಾಯಿತು. ಆದರೆ, ಕೌನ್ಸಿಲ್ ಸಭೆಗೆ ಹಾಜರಾಗಿದ್ದ ಮುಸ್ಲಿಂ ಕೌನ್ಸಿಲರ್ ಗಳು ವಂದೇ ಮಾತರಂ ಹಾಡುತ್ತಿರುವಾಗ ಸಭೆಯಿಂದ ಹೊರನಡೆದಿದ್ದರು.
ಹಾಗೆ, ಅವರು ಸಭೆಯಿಂದ ಹೊರನಡೆಯುವಾಗ ಸಹ ಸದಸ್ಯರು ಅವರನ್ನು ತಡೆದರೂ ಅವರು ನಿಲ್ಲಲಿಲ್ಲ. ಹಾಗಾಗಿ, ಸಭಾಧ್ಯಕ್ಷರಾದ ಶ್ರೀಕಾಂತ್ ಅಹ್ಲುವಾಲಿಯಾ ಅವರು ಸದಸ್ಯರನ್ನು ಸಭೆಯಿಂದ ಬಹಿಷ್ಕಾರಗೊಳಿಸಿ ಆದೇಶ ನೀಡಿದರು.
ಹಿಂದಿನಿಂದಲೂ ಇಲ್ಲಿ ಇದೇ ಪದ್ಧತಿಯಿತ್ತು. ವಂದೇ ಮಾತರಂ ಹಾಡುವಾಗ ಆ ಹಾಡನ್ನು ಹಾಡಲು ಇಷ್ಟವಿಲ್ಲದವರು ಸಭೆಯಿಂದ ಹೊರನಡೆಯಬಹುದಾಗಿತ್ತು. ಹಾಡು ಮುಗಿದ ಮೇಲೆ ಸಭೆಗೆ ಹಿಂದಿರುಗಬಹುದಾಗಿತ್ತು.
ಆದರೆ, ಉತ್ತರ ಪ್ರದೇಶದಲ್ಲಿ ಈಗ ಯೋಗಿ ಆದಿತ್ಯನಾಥ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ಅಲ್ಲಿ ಭಾರತೀಯತೆಯ ಭಾವನೆಗಳಿಗೆ ಧಕ್ಕೆ ತರುವಂಥ ಯಾವುದೇ ಪ್ರಕರಣಗಳಾಗಲೀ ಕ್ರಮ ಖಾತ್ರಿ ಎಂಬಂತಹ ವಾತಾವರಣ ನಿರ್ಮಾಣವಾಗಿದೆ.