ಇರಾಕ್ ಗುಡ್ಡದಲ್ಲಿ ಅಯೋಧ್ಯಾಪತಿ ಶ್ರೀರಾಮಚಂದ್ರನ ಚಿತ್ರ
ಲಕ್ನೋ, ಜೂನ್ 26: ಅಯೋಧ್ಯಾ ಶೋಧ ಸಂಸ್ಥಾನದ ಸದಸ್ಯರು ಇತ್ತೀಚೆಗೆ ನಡೆಸಿದ ಅಧ್ಯಯನ ವರದಿಗಳ ಪ್ರಕಾರ, ಇರಾಕಿನ ಗುಡ್ಡವೊಂದರ ಗೋಡೆ ಮೇಲೆ ಸಿಕ್ಕಿರುವ ಚಿತ್ರವು ಶ್ರೀರಾಮಚಂದ್ರನನ್ನು ಹೋಲುತ್ತದೆ ಎಂದು ತಿಳಿದು ಬಂದಿದೆ.
ಸಿರ್ಸಾದ ಈ ಚಿತ್ರ ಸುಮಾರು ಕ್ರಿ. ಪೂ 2000 ರ ಆಸುಪಾಸಿನದ್ದು ಎಂದು ಅಂದಾಜಿಸಲಾಗಿದೆ. ದರ್ಬಾಂದ್ ಇ ಬೆಲುಲುದ ಕಡಿದಾದ ಗುಡ್ಡದಲ್ಲಿ ಕೆತ್ತಿರುವ ಈ ಚಿತ್ರವು ಇರಾಕಿನ ಹೊರೆನ್ ಶೇಖಾನ್ ಪ್ರದೇಶದಲ್ಲಿದೆ ಎಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.
ಚಿತ್ರ ಹೇಗಿದೆ?: ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಶ್ರೀರಾಮಚಂದ್ರನ ಜನಪ್ರಿಯ ಚಿತ್ರವನ್ನೇ ಹೋಲುತ್ತದೆ. ಬರಿ ಮೈಯಲ್ಲಿರುವ ರಾಜನೊಬ್ಬನ ಕೈಯಲ್ಲಿ ಬಿಲ್ಲು ಹಿಡಿದಿದ್ದಾನೆ, ಬಾಣದ ಬತ್ತಳಿಕೆಯನ್ನು ಹೊಂದಿದ್ದಾನೆ, ಸೊಂಟದ ಪಟ್ಟಿಗೆ ಸಣ್ಣಕತ್ತಿಯನ್ನು ಸಿಕ್ಕಿಸಿಕೊಂಡಿದ್ದಾನೆ. ಈತನ ಪಕ್ಕದಲ್ಲಿ ಕೈ ಮುಗಿದು ಭಕ್ತಿಭಾವದಿಂದ ಕುಳಿತ ಬಲಿಷ್ಠ ವ್ಯಕ್ತಿಯ ಚಿತ್ರವೊಂದಿದೆ, ಈ ಚಿತ್ರವನ್ನು ಹನುಮಾನ್ ಪ್ರತಿನಿಧಿಸುತ್ತದೆ ಎಂದು ಅಯೋಧ್ಯಾ ಶೋಧ ಸಂಸ್ಥಾನ ಸದಸ್ಯರು ಹೇಳಿದ್ದಾರೆ.
ಇರಾಕಿ ಇತಿಹಾಸಕಾರರ ಪ್ರಕಾರ, ಈ ಚಿತ್ರವು ಗುಡ್ಡಗಾಡು ಪ್ರದೇಶದ ಬುಡಕಟ್ಟು ನಾಯಕ ತರ್ದುನ್ನಿ ಅವರದ್ದಾಗಿದೆ. ಬೇರೆಡೆಗಳಲ್ಲೂ ಇಂಥ ಚಿತ್ರಗಳಿದ್ದು, ರಾಜ ಹಾಗೂ ಮೊಣಕಾಲೂರಿ ಕುಳಿತ ಕೈದಿಯನ್ನು ಹೋಲುತ್ತದೆ ಎಂದಿದ್ದಾರೆ.
ಇರಾಕಿನಲ್ಲಿ ಭಾರತದ ರಾಯಭಾರಿ ಪ್ರದೀಪ್ ಸಿಂಗ್ ರಾಜ್ ಪುರೋಹಿತ್ ಅವರ ನೇತೃತ್ವದ ಸಂಶೋಧಕರ ತಂಡವು ಉತ್ತರಪ್ರದೇಶದ ಸಾಂಸ್ಕೃತಿಕ ಇಲಾಖೆಯ ಸದಸ್ಯರು, ಎಬ್ರಿಲ್ ನ ಅಧಿಕಾರಿ, ಸುಲೈಮಾನಿಯಾ ವಿಶ್ವವಿದ್ಯಾಲಯದ ಚಂದ್ರಮೌಳಿ ಕರ್ಣ್, ಕುರ್ದಿಸ್ತಾನದ ರಾಜ್ಯಪಾಲರು ಈ ಸಂಶೋಧನಾ ತಂಡದಲ್ಲಿದ್ದರು.
ಭಾರತ ಹಾಗೂ ಮೆಸೊಪೊಟೋಮಿಯನ್ ಸಂಸ್ಕೃತಿ ನಡುವಿನ ಸಂಬಂಧಕ್ಕೆ ಇಂಥ ಸಂಶೋಧನೆಗಳು ಇಂಬು ನೀಡಲಿವೆ ಎಂದು ಅಯೋಧ್ಯಾ ಶೋಧ ಸಂಸ್ಥಾನದ ನಿರ್ದೇಶಕರಾದ ಯೋಗೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಕ್ರಿ. ಪೂ 4500 ರಿಂದ 1900 ಅವಧಿಯಲ್ಲಿ ಮೆಸೊಪಟೋಮಿಯಾವನ್ನು ಆಳಿದ ಸುಮೇರಿಯನ್ನರು, ಭಾರತದಿಂದ ವಲಸೆ ಹೋದವರು ಎಂದು ನಂಬಲಾಗಿದೆ. ಹೀಗಾಗಿ, ಸಿಂಧು ಕಣಿವೆ ನಾಗರೀಕತೆಗೂ ಮೆಸೊಪಟೋಮಿಯಾ ನಾಗರೀಕತೆಗೂ ಸಂಬಂಧ ಹುಡುಕುವ ಯತ್ನ ನಡೆದಿದೆ.