ಮುಂಬೈಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ: ಖರ್ಗೆಗೆ ಗೋಯಲ್ ಚಾಲೆಂಜ್
ನವದೆಹಲಿ, ಆಗಸ್ಟ್ 09 2018: ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಯಾರಾದರೂ ಅನ್ಯಾಯವೆಸಗಿದ್ದರೆ ಅದು ಕಾಂಗ್ರೆಸ್ ಪಕ್ಷ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಆಕ್ರೋಶವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಚಿವ ಪಿಯೂಷ್ ಗೋಯೆಲ್ ಅವರು ಸವಾಲು ಹಾಕಿದರು. ಮುಂಬೈಯ ಯಾವುದಾದರೂ ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧಿಸಿ ಎಂದು ಚಾಲೆಂಜ್ ಹಾಕಿದರು. ಇದಕ್ಕೂ ಮುನ್ನ ರಾಜ್ಯಸಭಾ ಸದಸ್ಯರನ್ನು ಪರೋಕ್ಷವಾಗಿ ಟೀಕಿಸಿದ್ದ ಖರ್ಗೆ ಅವರು ಚುನಾವಣೆಯನ್ನು ಗೆಲ್ಲಲು ಸಾಧ್ಯವಾಗದವರೆಲ್ಲರೂ ಬುದ್ಧಿವಾದ ಹೇಳುತ್ತಿದ್ದಾರೆ ಎಂದು ಮೂದಲಿಸಿದ್ದರು.
ಸಚಿವ ಪಿಯೂಶ್ ಗೋಯೆಲ್ ವಿರುದ್ದ ಮಲ್ಲಿಕಾರ್ಜುನ ಖರ್ಗೆಯವರ ಮಾತುಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ ಅನಂತ್ ಕುಮಾರ್ ಅವರು, ಖರ್ಗೆಯವರು ಸಂಸತ್ತಿನ ಹಿರಿಯ ಹಾಗೂ ಅನುಭವಿ ಸದಸ್ಯರು. ಆದರೆ ಅವರು ಸದನದ ನೀತಿ ನಿಯಮಗಳ ಬಗ್ಗೆ ಅಜ್ಞಾನ ಹೊಂದಿದ್ದಾರೆ ಎಂದರು.
ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ರಾಜ್ಯಸಭಾ ಸದಸ್ಯರು. ರಾಜ್ಯಗಳ ಜನಪ್ರತಿನಿಧಿಗಳಿಂದ ಆಯ್ಕೆಯಾದ ಗೌರಯುತ ಸದಸ್ಯರಾಗಿದ್ದಾರೆ.
ಖರ್ಗೆಯವರಿಗೆ ಡಾ ಬಿ ಆರ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಪ್ರಾಥಮಿಕ ಜ್ಞಾನದ ಕೊರೆತೆ ಇದೆ ಎನ್ನಿಸುತ್ತದೆ. ಭಾರತದ ಯಾವುದೇ ಪ್ರಜೆ ಸಂಸತ್ತಿನ ಎರಡೂ ಸದನಗಳಿಗೂ ಹಾಗೂ ವಿಧಾನಸಭೆ ಮತ್ತು ಪರಿಷತ್ ಗೂ ಸದಸ್ಯರಾಗಬಹುದು. ಆದರೆ ಅವರ ಸದಸ್ಯತ್ವದ ಬಗ್ಗೆ ಟೀಕಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ತಮ್ಮ ಪಾಯಿಂಟ್ ಆಫ್ ಆರ್ಡರನಲ್ಲಿ ಪ್ರಸ್ತಾಪಿಸಿದರು.
ಈ ಕನಿಷ್ಠ ತಿಳುವಳಿಕೆಯನ್ನು ಹೊಂದಿರದ ಖರ್ಗೆಯವರು ಸಚಿವ ಪಿಯೂಶ್ ಗೋಯಲ್ ಹಾಗೂ ಸದನದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಪ್ರತಿನಿತ್ಯ ಡಾ ಬಿ ಆರ್ ಅಂಬೇಡ್ಕರ್ ಅವರ ಹೆಸರು ಹೇಳುವ ಕಾಂಗ್ರೆಸ್ ನ ಖರ್ಗೆಯವರು ಮೊದಲು ಅಂಬೇಡ್ಕರ್ ಅವರಿಗೆ ದ್ರೋಹವೆಸಗಿದ್ದು ಯಾರು ಎಂಬುದನ್ನು ಅರಿತುಕೊಳ್ಳಬೇಕು. ಭಾರತರತ್ನ ಅಂಬೇಡ್ಕರ್ ಅವರಿಗೆ ಯಾರಾದರೂ ಅನ್ಯಾಯವೆಸಗಿದ್ದರೆ ಅದು ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಅವರು ಲೋಕಸಭೆಗೆ ಸ್ಪರ್ಧಿಸಿದಾಗ ಪಂಡಿತ್ ನೆಹರು ಅವರು ಮಾಡಿದ್ದೇನು? ಕಾಂಗ್ರೆಸ್ ಮಾಡಿದ್ದೇನು ಎಂದು ಪ್ರಶ್ನಿಸಿದ ಅವರು. ಅಂಬೇಡ್ಕರ್ ವಿರುದ್ದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಕಾಂಗ್ರೆಸ್. ಸಂವಿಧಾನ ರಚನಾಕಾರ ಅಂಬೇಡ್ಕರ್ ಅವರನ್ನು ಅವಿರೋಧವಾಗಿ ಆಯ್ಕೆಮಾಡಬಹುದಾಗಿತ್ತು.
ಕೊನೆಗೆ ಜನ ಸಂಘ ಮತ್ತು ಬಿಜೆಪಿ ಸಂಸ್ಥಾಪಕ ಡಾ ಶ್ಯಾಮ ಪ್ರಸಾದ್ ಮುಖರ್ಜಿ ಮತ್ತಿತರರು ರಾಜ್ಯಸಭೆಗೆ ಅವರನ್ನು ಗೌರವಯುತವಾಗಿ ಆಯ್ಕೆಮಾಡಿದ್ದನ್ನು ಸ್ಮರಿಸಿಕೊಳ್ಳಬೇಕು ಎಂದರು.
ಸಂವಿಧಾನ ಕರ್ತೃ ಅವರಿಗೆ ಇಂತಹ ಮರ್ಯಾದೆ ನೀಡಿದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಪ್ರತಿದಿನ ಅವರ ಹೆಸರನ್ನು ಹೇಳುವುದಕ್ಕೂ ನಾಚಿಕೆಯಾಗಬೇಕು. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರಿಗೆ ಮೊದಲು ಭಾರತ ರತ್ನ ನೀಡಿದ ಕಾಂಗ್ರೆಸ್ ಸರಕಾರಕ್ಕೆ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲು ಆಗಲಿಲ್ಲ.
ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿದ್ದು ಅಟಲ್ ಜಿ ಮತ್ತು ಅಡ್ವಾಣಿ ಜಿ ನೇತೃತ್ವದ ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಅವರ ಸರಕಾರ ಎಂದು ಹೇಳಿದರು.
ಮಾಜಿ ಪ್ರಧಾನಿ ಡಾ ಮನಮೋಹನ ಸಿಂಗ್ ಅವರು ಅಸ್ಸಾಂ ರಾಜ್ಯದಿಂದ 6 ಬಾರಿ ರಾಜ್ಯಸಭಾ ಸದಸ್ಯರಾಗಿದ್ದಾರೆ. ಎರಡು ಬಾರಿ ಪ್ರಧಾನಿ ಹುದ್ದೆಗೇರಿದ ಅವರ ಬಗ್ಗೆ ಗೌರವವಿದೆ. ಆದರೆ ಸಚಿವ ಪಿಯೂಶ್ ಗೋಯಲ್ ಅವರ ಬಗ್ಗೆ ಎತ್ತಿದ ನಿಮ್ಮ ಪ್ರಶ್ನೆಯನ್ನೇ ಅವರಿಗೂ ಕೇಳಬಹುದೇ ಎಂದು ಖರ್ಗೆಯವರಿಗೆ ಪ್ರಶ್ನಿಸಿದರು.
ಇದೇ ವೇಳೆ ಖರ್ಗೆಯವರು ಶ್ರೀಯುತ ಪಿಯೂಶ್ ಗೋಯೆಲ್ ವಿರುದ್ದ ನೀಡಿದ ಎಲ್ಲಾ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಸದನದ ಕ್ಷಮೆಯಾಚಿಸುವಂತೆ ಆಗ್ರಹಿಸಿದರು.