ವಿತ್ತ ಸಚಿವಾಲಯಕ್ಕೆ ಪತ್ರಕರ್ತರಿಗೆ ಪ್ರವೇಶ ನಿರ್ಬಂಧಕ್ಕೆ ಖಂಡನೆ
ನವದೆಹಲಿ, ಜು.10: ಕೇಂದ್ರ ಬಜೆಟ್ ತಯಾರಿ ಸಂದರ್ಭದಲ್ಲಿ ಸಚಿವಾಲಯದ ನಾರ್ತ್ ಬ್ಲಾಕ್ ನಲ್ಲಿ ಬಿಗಿ ಭದ್ರತೆ, ಪೂರ್ವನುಮತಿಯಿಲ್ಲದೆ ಪ್ರವೇಶ ನಿಷೇಧ, ನಿರ್ಬಂಧ ಜಾರಿಯಲ್ಲಿರುತ್ತದೆ. ಆದರೆ, ಈಗ ವರದಿಗಾರರಿಗೆ ವಿತ್ತ ಸಚಿವಾಲಯ ಪ್ರವೇಶ ನಿರ್ಬಂಧಿಸಿ ನೀಡಿರುವ ಆದೇಶವನ್ನು ಭಾರತದ ಸಂಪಾದಕರ ಸಂಘ(ಎಡಿಟರ್ಸ್ ಗಿಲ್ಡ್) ಖಂಡಿಸಿದೆ.
ಬಜೆಟ್ ನಲ್ಲಿ ಜೇಬಿಗೆ ಭಾರ ಯಾವುದು, ಹಗುರ ಯಾವುದು?
ಸಚಿವಾಲಯದ ಈ ಆದೇಶವು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಮತ್ತು ಇದರಿಂದ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಸ್ಥಾನ ಕುಸಿಯಬಹುದು. ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ಪೂರ್ವಾನುಮತಿಯಿಲ್ಲದೆ ಪ್ರವೇಶ ನಿರಾಕರಿಸಿರುವುದು ಸರಿಯಲ್ಲ. ಪತ್ರಕರ್ತರು ವಿತ್ತ ಸಚಿವಾಲಯ ಪ್ರವೇಶಿಸುವಾಗ ಸಂಯಮ ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂಬ ನಿಯಮವನ್ನು ಸಂಘವು ಒಪ್ಪುತ್ತದೆ, ಆದರೆ, ಸುದ್ದಿ ಸಂಗ್ರಹ ವೃತ್ತಿಪರ ಪತ್ರಕರ್ತರ ಕರ್ತವ್ಯವಾಗಿದೆ, ವರದಿಗಾರರು ಆತಿಥ್ಯ ಸ್ವೀಕರಿಸಲೆಂದು ಸರಕಾರಿ ಕಚೇರಿಗೆ ತೆರಳುವುದಲ್ಲ ಎಂದು ಎಡಿಟರ್ಸ್ ಗಿಲ್ಡ್ ಪ್ರಕಟಣೆ ಹೊರಡಿಸಿದೆ.
ಈ ಕುರಿತಂತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರಕರ್ತರೊಂದಿಗೆ ಚರ್ಚಿಸಿ ವ್ಯವಸ್ಥೆಯಲ್ಲಿ ಬದಲಾವಣೆ ತರುತ್ತಾರೆ ಎಂಬ ವಿಶ್ವಾಸವಿದೆ. ಈಗ ನೀಡಿರುವ ಆದೇಶವನ್ನು ಹಿಂಪಡೆಯುವಂತೆ ಸಂಪಾದಕರ ಸಂಘ ಮನವಿ ಸಲ್ಲಿಸಲಿದೆ ಎಂದು ಇಂಡಿಯನ್ ವುಮೆನ್ ಪ್ರೆಸ್ ಕಾರ್ಪ್, ಪ್ರೆಸ್ ಅಸೋಸಿಯೇಷನ್ ಹಾಗೂ ಪ್ರೆಸ್ ಕ್ಲಬ್ ಆಫ್ ಇಂಡಿಯಾ ನೀಡಿದ ಜಂಟಿ ಪ್ರಕಟಣೆಯಲ್ಲಿ ಹೇಳಲಾಗಿದೆ.