2014ರಲ್ಲಿ ಭಾರತ: ಘಟನಾವಳಿಗಳತ್ತ ಒಂದು ಹಿನ್ನೋಟ
2014- ಭಾರತದಲ್ಲಿ ಹತ್ತು ಹಲವು ಸಾವು ನೋವು, ಹಗರಣಗಳು ಬೆಳಕಿಗೆ ಬಂದರೂ ಒಂದಷ್ಟು ಭರವಸೆ ಮೂಡಿಸಿದ ವರ್ಷ. ದೇಶದ ಹಲವು ಭಾಗಗಳಲ್ಲಿ ನಡೆದ ಚುನಾವಣೆಯಲ್ಲಿ ಕೇಸರಿ ಪಕ್ಷದ ದಿಗ್ವಿಜಯ, ಮೋದಿ ಅಲೆ, ಅಮಿತ್ ಶಾಗೆ ಉನ್ನತ ಹುದ್ದೆ, ಮಂಗಳನೆಡೆಗೆ ಸಾಗಿದ ಇಸ್ರೋ ನೌಕೆ, 16ನೇ ಲೋಕಸಭೆಯ ಗದ್ದಲ, ಬಿಜೆಪಿ ನಾಯಕರ ವಿವಾದಿತ ಹೇಳಿಕೆಗಳು ಎಲ್ಲವೂ ಪ್ರಮುಖ ಘಟನಾವಳಿಗಳಾಗಿ ದಾಖಲಾಗಿವೆ.
ದೇಶದಲ್ಲಿ ಅನೇಕ ಕಡೆ ಮಹಿಳೆಯರಿಗೆ ಆತಂಕ ತಂದ ಅತ್ಯಾಚಾರ ಪ್ರಕರಣಗಳು, ಉಗ್ರರ ದಾಳಿ, ಕ್ರೀಡಾಲೋಕದಲ್ಲಿ ಭಾರತದ ಕ್ರೀಡಾಪಟುಗಳ ವಿಕ್ರಮ, ವೈಜ್ಞಾನಿಕವಾಗಿ ವೈದ್ಯಕೀಯವಾಗಿ ಭಾರತದ ಸಾಧನೆ ಹೀಗೆ ಸಿಹಿ ಕಹಿಗಳ ಮಿಶ್ರಣವಾಗಿ 2014 ವರ್ಷವನ್ನು ಕಾಣಬಹುದು. [ವಿವಾದ ಸುದ್ದಿಗೆ ಗ್ರಾಸವಾದ ಸೆಲೆಬ್ರಿಟಿಗಳು]
ಮೋದಿ ಅವರು ಕೇಂದ್ರದಲ್ಲಿ ಅಧಿಕಾರ ಸ್ಥಾಪನೆ ಮೂಲಕ ತರುತ್ತಿರುವ ಬದಲಾವಣೆಯ ಗಾಳಿ ಮುಂದಿನ ವರ್ಷಗಳಲ್ಲಿ ಯಾವ ರೀತಿ ಫಲ ನೀಡುತ್ತದೋ ಕಾದು ನೋಡಬೇಕಿದೆ.
2014ರ ಭಾರತದಲ್ಲಿನ ಪ್ರಮುಖ ಘಟನಾವಳಿಗಳ ದೃಶ್ಯಾವಳಿ ಇಲ್ಲಿದೆ.. ಸಾವಕಾಶವಾಗಿ ನೋಡಿ..
ಮಂಗಳಯಾನ
ತನ್ನ ಮೊದಲ ಯತ್ನದಲ್ಲೇ ಮಂಗಳನ ಕಕ್ಷೆಗೆ ತನ್ನ ನೌಕೆಯನ್ನು ಯಶಸ್ವಿಯಾಗಿ ತಲುಪಿಸಿದ ಕೀರ್ತಿ ಭಾರತದ ಇಸ್ರೋ ಸಂಸ್ಥೆಗೆ ಸಿಕ್ಕಿತು.
ನವೆಂಬರ್ 5, 2013ರಲ್ಲಿ ಉಡಾವಣೆಗೊಂಡ 'ಮಂಗಳಯಾನ' ನೌಕೆ 307 ದಿನಗಳಲ್ಲಿ ಮಂಗಳನ ಹತ್ತಿರದ ಕಕ್ಷೆಗೆಯಶಸ್ವಿಯಾಗಿ ತಲುಪಿ ಹೊಸ ಇತಿಹಾಸ ಸೃಷ್ಟಿಸಿತು.ಸುಮಾರು 450 ಕೋಟಿ ರು ಬಜೆಟ್ ನ ಈ ಯೋಜನೆ ವಿಶ್ವದ ಅತಿ ಕಡಿಮೆ ಬಜೆಟ್ ನ ಬಾಹ್ಯಾಕಾಶ ಯೋಜನೆ ಎನಿಸಿದೆ. [ಮಂಗಳಲೋಕಕ್ಕೆ ಮಂಗಳಯಾನ; ನಡೆದುಬಂದ ದಾರಿ]ಲೋಕಸಭೆ ಚುನಾವಣೆ 2014
ಏಪ್ರಿಲ್ -ಮೇ ತಿಂಗಳಿನಲ್ಲಿ 16ನೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 282 ಸೀಟುಗಳನ್ನು ದಕ್ಕಿಸಿಕೊಂಡು ಬಿಜೆಪಿ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಿತು. ನರೇಂದ್ರ ಮೋದಿ ಅವರು ಪ್ರಥಮ ಬಾರಿಗೆ ಸಂಸತ್ ಪ್ರವೇಶಿಸಿದ್ದಲ್ಲದೆ ಪ್ರಧಾನಿ ಪಟ್ಟವನ್ನು ಅಲಂಕರಿಸಿದರು. ಭಾರತದ ಲೋಕಸಭೆ ಚುನಾವಣೆ ವಿಶ್ವದ ಪ್ರಮುಖ ಘಟನಾವಳಿ ಎನ್ನಲಡ್ಡಿಯಿಲ್ಲ. [ಲೋಕಸಭೆ ಚುನಾವಣೆ ಸಮರ ಸ್ವಾರಸ್ಯ]
ಕೈಲಾಶ್ ಸತ್ಯಾರ್ಥಿ ಅವರಿಗೆ ನೊಬೆಲ್
ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ(60) ಅವರಿಗೆ ನೊಬೆಲ್ ಶಾಂತಿ ಪಾರಿತೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಾಕಿಸ್ತಾನದ ಮಹಿಳಾ ಶಿಕ್ಷಣ ಕಾರ್ಯಕರ್ತೆ ಮಲಾಲ ಅವರಿಗೂ ನೊಬೆಲ್ ಶಾಂತಿ ಲಭಿಸಿತು. [ಕೈಲಾಶ್ ಸತ್ಯಾರ್ಥಿ ವ್ಯಕ್ತಿ ಪರಿಚಯ ಓದಿ]
ಪೊಲಿಯೋ ಮುಕ್ತ ಭಾರತ
ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಭಾರತವನ್ನು ಪೋಲಿಯೋ ಮುಕ್ತ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತು. 1994ರಲ್ಲಿ ಪೋಲಿಯೋ ನಿರ್ಮುಲನಾ ಅಭಿಯಾನವನ್ನು ಆರಂಭಿಸಿತ್ತು.
ಅಖಂಡ ಆಂಧ್ರಪ್ರದೇಶ ವಿಭಜನೆ, ತೆಲಂಗಾಣ ರಚನೆ
ಅಖಂಡ ಆಂಧ್ರಪ್ರದೇಶ ವಿಭಜನೆಗೊಂಡು ತೆಲಂಗಾಣ ರಾಜ್ಯ ಉದಯವಾಯಿತು. ರಾಜ್ಯ ವಿಭಜನೆ ವಿಧೇಯಕ 2014ಕ್ಕೆ ವಿವಾದದ ನಡುವೆ ಯುಪಿಎ ಸರ್ಕಾರ ಅಂಗೀಕಾರ ಪಡೆದುಕೊಂಡಿತು. 10 ವರ್ಷಗಳ ಹೈದರಾಬಾದ್ ಉಭಯ ರಾಜ್ಯಗಳ ರಾಜಧಾನಿಯಾಗಿರುತ್ತದೆ. [ತೆಲಂಗಾಣಕ್ಕೆ ಕ್ಯಾಬಿನೆಟ್ ಅಸ್ತು, ಹೈದರಾಬಾದ್ ರಾಜಧಾನಿ]
ಈಶಾನ್ಯ ರಾಜ್ಯ ಮೂಲದವರ ಮೇಲೆ ಹಲ್ಲೆ
ಜನವರಿ 29 ರಂದು 20 ವರ್ಷ ವಯಸ್ಸಿನ ಅರುಣಾಚಲ ಪ್ರದೇಶ ಮೂಲದ ವಿದ್ಯಾರ್ಥಿ ನಿಡೋ ತಾನಿಯಮ್ ದೆಹಲಿಯಲ್ಲಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಘಟನೆ ನಡೆಯಿತು. ಇದಾದ ನಂತರ ಬೆಂಗಳೂರು ಸೇರಿದಂತೆ ಹಲವೆಡೆ ಈಶಾನ್ಯ ರಾಜ್ಯದವರ ಮೇಲೆ ಹಲ್ಲೆ ನಡೆದ ಪ್ರಕರಣ ದಾಖಲಾಯಿತು.
ಕಾಮನ್ ವೆಲ್ತ್ ಕ್ರೀಡಾಕೂಟ ಪದಕ ಬೇಟೆ
ಗ್ಲಾಸ್ಗೋನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 15 ಚಿನ್ನ, 30 ಬೆಳ್ಳಿ, 19 ಕಂಚಿನ ಪದಕ ಗಳಿಸಿ ಐದನೇ ಸ್ಥಾನ ಗಳಿಸಿತು.
ಸುಚಿತ್ರಾ ಸೇನ್ ವಿಧಿವಶ
ಬೆಂಗಾಳಿ ನಟಿ ಸುಚಿತ್ರಾ ಸೇನ್(82) ಅವರು ಜನವರಿ 17 ರಂದು ಸಾವನ್ನಪ್ಪಿದರು. ವರ್ಷದ ಕೊನೆಯಲ್ಲಿ ನಿರ್ದೇಶಕ ಕೆ ಬಾಲಚಂದರ್ ಅಸುನೀಗಿದರು.
ಹುಡ್ ಹುಡ್ ಚಂಡಮಾರುತ
ವಿಶಾಖಪಟ್ಟಣಂ ಹುಡ್ ಹುಡ್ ಚಂಡಮಾರುತದ ದಾಳಿಗೆ ಸಿಲುಕಿ ನಲುಗಿತು. 100 ಜನ ಸಾವನ್ನಪ್ಪಿದರೆ ಸುಮಾರು 1.1 ಬಿಲಿಯನ್ ಡಾಲರ್ ನಷ್ಟ ಅನುಭವಿಸಿತು. ಒಡಿಶಾಗೂ ಹುಡ್ ಹುಡ್ ಬಿಸಿ ತಟ್ಟಿತ್ತು. [ಚಂಡಮಾರುತ ಸುದ್ದಿಗಳು]
ಜಿಎಸ್ ಎಲ್ ವಿ III ಯಶಸ್ವಿ ಉಡಾವಣೆ
ಭಾರತ ಅತ್ಯಂತ ಭಾರವುಳ್ಳ ರಾಕೆಟ್ ಜಿಎಸ್ ಎಲ್ ವಿ III ಡಿ.18ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಗೊಂಡಿತು.
ಸಚಿನ್ ತೆಂಡೂಲ್ಕರ್ ಆತ್ಮಕಥನ ಬಿಡುಗಡೆ
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಆತ್ಮಕಥನ Playing It My Way ನವೆಂಬರ್ 6 ರಂದು ಲೋಕಾರ್ಪಣೆಗೊಂಡಿತು.[ಸಚಿನ್ ಆತ್ಮಕಥೆ ಬಿಡುಗಡೆ]
ಸುನಂದಾ ಪುಷ್ಕರ್ ನಿಗೂಢ ಸಾವು
ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಸಾವಿನ ನಿಗೂಢತೆ ಇನ್ನೂ ಮುಂದುವರೆದಿದೆ. ನವದೆಹಲಿಯ ಹೊಟೆಲ್ ವೊಂದರಲ್ಲಿ ಜ.17ರಂದು ಸುನಂದಾ ಪುಷ್ಕರ್ ಸಾವನ್ನಪ್ಪಿದರು.[ಸುನಂದಾ ಪುಷ್ಕರ್ ಸುದ್ದಿ]
ಕಾಶ್ಮೀರದ ಪ್ರವಾಹ ಪರಿಸ್ಥಿತಿ
ಸುಮಾರು 277 ಜನರನ್ನು ಬಲಿ ತೆಗೆದುಕೊಂಡ, ಸಾವಿರಾರು ಮಂದಿಯನ್ನು ನಿರಾಶ್ರಿತರನ್ನಾಗಿಸಿದ ಪ್ರವಾಹ ಸೆಪ್ಟೆಂಬರ್ ನಲ್ಲಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿತು.[ಕಣಿವೆ ರಾಜ್ಯದಲ್ಲಿ ಕೋಲಾಹಲ]
ಬಿಲಾಸ್ ಪುರ ವೈದ್ಯಕೀಯ ಪ್ರಮಾದ
ಛತ್ತೀಸ್ ಗಢದ ಬಿಲಾಸ್ ಪುರದ ಉಚಿತ ವೈದ್ಯಕೀಯ ಶಿಬಿರದಲ್ಲಿ ನಡೆದ ಪ್ರಮಾದ ದೇಶವನ್ನು ಬೆಚ್ಚಿಬೀಳಿಸಿತ್ತು. ಸುಮಾರು 14 ಜನ ಮಹಿಳೆಯರನ್ನು ಬಲಿ ತೆಗೆದುಕೊಂಡ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸಾ ಶಿಬಿರದ ಬಗ್ಗೆ ತನಿಖೆ ಮುಂದುವರೆದಿದೆ. [ಛತ್ತೀಸ್ ಗಢ ದುರಂತ]
ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಕಪ್
ಐಪಿಎಲ್ ಮಾದರಿಯಲ್ಲಿ ಪ್ರಥಮ ಬಾರಿಗೆ ಆಯೋಜನೆಗೊಂಡ ಫುಟ್ಬಾಲ್ ಲೀಗ್ ಪ್ರಶಸ್ತಿಯನ್ನು ಸೌರವ್ ಗಂಗೂಲಿ ಮಾಲೀಕತ್ವದ ಅಟ್ಲೆಟಿಕೋ ಡಿ ಕೋಲ್ಕತ್ತಾ ತಂಡ ಗೆದ್ದುಕೊಂಡಿತು. ಸಚಿನ್ ತೆಂಡುಲ್ಕರ್ ಒಡೆತನದ ಕೇರಳ ಬ್ಲಾಸ್ಟರ್ ತಂಡವನ್ನು 1-0 ಅಂತರದಿಂದ ಡಿ. 20ರಂದು ಗಂಗೂಲಿ ತಂಡ ಮಣಿಸಿತು.
ಐಎನ್ ಎಸ್ ಸಿಂಧುರತ್ನ ದುರಂತ
ಐಎನ್ಎಸ್ ಸಿಂಧುರಕ್ಷಕ್ ಜಲಾಂತರ್ಗಾಮಿ ಅವಘಡದ ಬೆನ್ನಲ್ಲೇ ಮುಂಬೈ ಕರಾವಳಿ ಜಲಾಂತರ್ಗಾಮಿ ಐಎನ್ಎಸ್ ಸಿಂಧುರತ್ನ ಫೆ.26ರಂದು ದುರಂತಕ್ಕೀಡಾಗಿ ಇಬ್ಬರು ಅಧಿಕಾರಿಗಳನ್ನು ಬಲಿ ತೆಗೆದುಕೊಂಡಿತ್ತು. [ವರದಿ ಇಲ್ಲಿದೆ]
ಅಸ್ಸಾಂ ದುರಂತ
ಅಸ್ಸಾಂನ ಸೋನಿತ್ ಪುರ ಹಾಗೂ ಕೋಕ್ರಾಝಾರ್ ಜಿಲ್ಲೆಗಳಲ್ಲಿ ಡಿ.23ರಂದು ಬೋಡೋ ಉಗ್ರಗಾಮಿಗಳು ದಾಳಿ ನಡೆಸಿ ಮಹಿಳೆ ಮತ್ತು ಮಕ್ಕಳು ಸೇರಿದಂತೆ 68 ಜನರನ್ನು ಕೊಂದು ಹಾಕಿದ ಘಟನೆ ನಡೆಯಿತು.
ವಾಜಪೇಯಿ, ಮದನ್ ಮಾಳವೀಯಗೆ ಭಾರತರತ್ನ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಶಿಕ್ಷಣ ತಜ್ಞ ಮದನ್ ಮೋಹನ್ ಮಾಳವೀಯ ಅವರಿಗೆ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಕಚೇರಿಯಿಂದ ಅಧಿಕೃತವಾಗಿ ಈ ಬಗ್ಗೆ ಟ್ವೀಟ್ ಮಾಡಿದ್ದರು.[ವರದಿ ಇಲ್ಲಿ ಓದಿ]
ಜಯಲಲಿತಾ ಆಸ್ತಿವಿವಾದ ಪ್ರಕರಣ
ತಮಿಳುನಾಡಿನ ಜನತೆ ಪಾಲಿಗೆ 'ಅಮ್ಮ' ಎನಿಸಿರುವ ಜೆ. ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅಕ್ರಮ ಆಸ್ತಿ ಗಳಿಕೆ ಮಾಡಿದ್ದು ಸಾಬೀತಾಗಿ ಅಪರಾಧಿ ಎನಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಈಗ ಈ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡು ಚೆನ್ನೈ ಸೇರಿದ್ದಾರೆ. [ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]
ಬುರ್ದ್ವಾನ್ ಜಿಲ್ಲೆಯಲ್ಲಿ ಸ್ಫೋಟ
ಅಕ್ಟೋಬರ್ 2 ರಂದು ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕಗಳನ್ನು ಬಳಸಿ ಸ್ಫೋಟ ನಡೆಸಲಾಯಿತು. ಬಾಂಗ್ಲಾದೇಶಿ ಮೂಲದ ಉಗ್ರರು ಸಕ್ರಿಯರಾಗಿರುವುದು ಇದರಿಂದ ಬೆಳಕಿಗೆ ಬಂದಿತು.
ಕೆಕೆಆರ್ : ಐಪಿಎಲ್ ಚಾಂಪಿಯನ್ಸ್
ಇಂಡಿಯನ್ ಪ್ರಿಮಿಯರ್ ಲೀಗ್ ನ ಏಳನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬೆಂಗಳೂರಿನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಕಿಂಗ್ಸ್ XI ಪಂಜಾಬ್ ತಂಡವನ್ನು 3 ವಿಕೆಟ್ ಗಳಿಂದ ಸೋಲಿಸಿ ಕಪ್ ಎತ್ತಿತ್ತು.[ಐಪಿಎಲ್ ಸುದ್ದಿ]
ಸೈನಾ ನೆಹ್ವಾಲ್ ರಿಂದ ಇತಿಹಾಸ ನಿರ್ಮಾಣ
ಒಲಿಂಪಿಕ್ಸ್ ಪ್ರಶಸ್ತಿ ವಿಜೇತ ಸೈನಾ ನೆಹ್ವಾಲ್ ಅವರು ಚೀನಾ ಸೂಪರ್ ಸೀರಿಸ್ ಓಪನ್ ಬಾಡ್ಮಿಂಟನ್ ಗೆದ್ದ ಮೊದಲ ಭಾರತೀಯ ಪಟು ಎನಿಸಿದರು. ಜಪಾನಿನ ಅಕಾನೆ ಯಮಗುಚಿ ಅವರನ್ನು ನ. 16ರಂದು 21-12, 22-20 ರಲ್ಲಿ ಸೈನಾ ಸೋಲಿಸಿದರು.
ಅಂಬಾಸಡರ್ ಕಾರುಗಳ ಯುಗಾಂತ್ಯ
ಅಂಬಾಸಡರ್ ಕಾರುಗಳ ನಿರ್ಮಾಣವನ್ನು ನಿಲ್ಲಿಸಿರುವುದಾಗಿ ಹಿಂದೂಸ್ತಾನ್ ಮೋಟರ್ಸ್ ಸಂಸ್ಥೆ ಘೋಷಿಸಿತು. ಇದರಿಂದ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಜನಪ್ರಿಯ ಕಾರಿನ ಯುಗಾಂತ್ಯವಾಯಿತು.
ಸಮಾಜವಾದಿ ಪಕ್ಷಗಳ ಮೈತ್ರಿ, ಲಾಲೂ- ನಿತೀಶ್ ದೋಸ್ತಿ
ಸಮಾಜವಾದಿ ಶಕ್ತಿಗಳೆಲ್ಲ ಒಗ್ಗೂಡಿ ನರೇಂದ್ರ ಮೋದಿ ವಿರುದ್ಧ ತಿರುಗಿ ಬಿದ್ದರು. ನಿತಿಶ್ ಕುಮಾರ್ ಹಾಹೂ ಲಾಲೂ ಪ್ರಸಾದ್ ಅವರು ಬಿಹಾರದಲ್ಲಿ ಮೋದಿ ಅಲೆ ತಗ್ಗಿಸುವಲ್ಲಿ ಯಶಸ್ವಿಯಾದರು. ಹಲವು ವರ್ಷಗಳಿಂದ ಹರಿದು ಹಂಚಿ ಹೋಗಿದ್ದ ಜನತಾ ಪರಿವಾರವನ್ನು ಒಗ್ಗೂಡಿಸಿ ಎನ್ ಡಿಎ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. [ಜನತಾ ಪರಿವಾರ ಉದಯ]
ಕರ್ನಾಟಕದಲ್ಲಿ ಎಂ ಆಡಳಿತಕ್ಕೆ ಚಾಲನೆ
ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು 4 ಸಾವಿರ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಪಡೆಯಬಹುದಾದ 'ಮೊಬೈಲ್ ಒನ್' ಸೇವೆಯನ್ನು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಆರಂಭಿಸಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈ ಸೇವೆಯನ್ನು ಡಿ.11ರಂದು ಲೋಕಾರ್ಪಣೆ ಮಾಡಿದರು. ವಿಶ್ವದಲ್ಲೇ ಬೃಹತ್ ಪ್ರಮಾಣದ ಯೋಜನೆ ಹಾಗೂ ದೇಶದಲ್ಲೇ ಪ್ರಥಮ ಬಾರಿಗೆ ಇಂಥ ವಿಶಿಷ್ಟ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ನೀಡಿದೆ [ವಿವರ ಇಲ್ಲಿದೆ]