ರಾಹುಲ್ ಮತ್ತು ಮೋದಿ ನಡುವೆ ಅಂತಿಮ ನಗೆ ನಕ್ಕವರು ಯಾರು?
ಬೆಂಗಳೂರು, ಡಿಸೆಂಬರ್ 11 : ಚುನಾವಣೆ ಎದುರಿಸಿದ ಐದು ರಾಜ್ಯಗಳು ಮಾತ್ರವಲ್ಲ ಇಡೀ ದೇಶವೇ ಉಸಿರು ಬಿಗಿಹಿಡಿದು ನೋಡುವಂಥ ಚುನಾವಣೆ ಇದಾಗಿತ್ತು ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಸಾಕಷ್ಟು ಏರುಪೇರು ಕಂಡ ಫಲಿತಾಂಶ ಇದೀಗ ಸ್ಪಷ್ಟ ಚಿತ್ರಣ ನೀಡಲು ಆರಂಭಿಸಿದೆ.
ಈ ಚುನಾವಣೆ ದಶಕಗಳ ಬದ್ಧವೈರಿ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಗಳ ನಡುವಿನ ಯುದ್ಧ ಮಾತ್ರವಾಗಿರಲಿಲ್ಲ, ಇದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಯುದ್ಧವೂ ಆಗಿದೆ. ಅಂತಿಮ ಗೆಲುವು ಯಾರದಾಗಲಿದೆ? ಯಾರು ಅಂತಿಮ ನಗೆ ಬೀರಲಿದ್ದಾರೆ?
ರಾಜಸ್ಥಾನ ಕಾಂಗ್ರೆಸ್ ಕೈಗೆ : ಸಮೀಕ್ಷೆಗಳ ಫಲಿತಾಂಶ ನಿಜವಾಯ್ತು!
ಇತ್ತೀಚಿನ ಚುನಾವಣೆ ಇತಿಹಾಸವನ್ನು ಕೆದರಿದರೆ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಬಹುತೇಕ ಚುನಾವಣೆಗಳಲ್ಲಿ ಜಯಭೇರಿ ಬಾರಿಸುತ್ತಲೇ ಬಂದಿದೆ. ಇನ್ನೊಂದು ಬದಿಯಲ್ಲಿ, ಮೋದಿಗೆ ಟಕ್ಕರ್ ಕೊಡುವ ಏಕೈಕ ನಾಯಕ ಎಂದು ಪರಿಗಣಿಸಲಾಗಿರುವ ರಾಹುಲ್ ಗಾಂಧಿ ಅವರು ಪ್ರತಿಯೊಂದು ಚುನಾವಣೆಯಲ್ಲೂ ಸೋಲುತ್ತಲೇ ಬಂದಿದ್ದರು.
ಆದರೆ, ಈ ಐದು ರಾಜ್ಯಗಳ ಚುನಾವಣೆಯಲ್ಲಿ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ರಾಹುಲ್ ಗಾಂಧಿಯವರು ತಮ್ಮ ನಾಯಕತ್ವದ ಮುದ್ರೆಯನ್ನು ಒತ್ತಿದ್ದಾರೆ. ಆಯಾ ರಾಜ್ಯಗಳಲ್ಲಿ ಸ್ಥಳೀಯ ಸಮಸ್ಯೆಗಳೇ ಪ್ರಧಾನವಾದರೂ, ಮತದಾರರು ಫಾರ್ ಅ ಚೇಂಜ್ ರಾಹುಲ್ ಗಾಂಧಿಯವರ ಮುಖದಲ್ಲಿ ಕಮಲದ ನಗೆ ಅರಳುವಂತೆ ಮಾಡಿದ್ದಾರೆ.
ಬಹುಕಾಲ ನೆನಪಿನಲ್ಲುಳಿಯುವ ಮಧ್ಯ ಪ್ರದೇಶ ಜಿದ್ದಾಜಿದ್ದಿ ಫೈಟ್!
ನೀವು ಯಾವುದೇ ರಾಜ್ಯದಲ್ಲಿ ನಡೆಯುವ ಚುನಾವಣೆಯನ್ನು ತೆಗೆದುಕೊಳ್ಳಿ, ಈ ಇಬ್ಬರು ನಾಯಕರು ಸ್ಥಳೀಯ ಸಮಸ್ಯೆಗಳ ಬದಲು ಪರಸ್ಪರ ಟೀಕಿಸುವುದರಲ್ಲಿಯೇ ತಮ್ಮ ಭಾಷಣವನ್ನು ಮುಗಿಸುತ್ತಾರೆ. ಇದು ಹಲವಾರು ಬಾರಿ ಮಿತಿಮೀರಿ ಹೋಗಿದೆ, ಕೆಲಬಾರಿ ಅಸಹ್ಯ ಪಟ್ಟುಕೊಳ್ಳುವಂತೆಯೂ ಆಗಿದೆ. ಜನರು ಕೂಡ ಇದನ್ನು ಗಮನಿಸಿಯೇ ಇರುತ್ತಾರೆ.
ಮೋದಿ ಇಮೇಜಿಗೆ ಧಕ್ಕೆಯಾಗುವುದೆ?
ಎಲ್ಲ 5 ರಾಜ್ಯಗಳಲ್ಲಿಯೂ ಭಾರತೀಯ ಜನತಾ ಪಕ್ಷ ಧೂಳಿಪಟವಾಗಿದೆ. ಉತ್ತಮ ಹೋರಾಟ ನೀಡಿದೆಯಾದರೂ, ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಮೂರು ರಾಜ್ಯಗಳಲ್ಲಿ ಮುಖಭಂಗ ಅನುಭವಿಸಿದೆ. ಏನೇ ಆಗಲಿ, ಈ ವಿಧಾನಸಭೆ ಚುನಾವಣೆ ಫಲಿತಾಂಶ ಲೋಕಸಭೆ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ನಾಯಕರು ಸಮಜಾಯಿಷಿ ನೀಡುವುದರಲ್ಲಿ ಅನುಮಾನವೇ ಇಲ್ಲ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆಂದು ಹೊರಟಿದ್ದ ನರೇಂದ್ರ ಮೋದಿಯವರ ಇಮೇಜಿಗೆ ಈ ಸೋಲಿನಿಂದ ಅಲ್ಪಮಟ್ಟಿನ ಧಕ್ಕೆ ತಂದರೂ ಅಚ್ಚರಿಯಿಲ್ಲ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.
ಗೆಲುವಿನಿಂದ ಅತಿಯಾಗಿ ಬೀಗಬಾರದು
ಪ್ರಜಾಪ್ರಭುತ್ವವೆಂದ ಮೇಲೆ ಸೋಲು ಗೆಲುವು ಇದ್ದದ್ದೇ. ಗೆಲುವಿನಿಂದ ಅತಿಯಾಗಿ ಬೀಗಬಾರದು ಮತ್ತು ಸೋಲಿನಿಂದ ಅತಿಯಾಗಿ ಕಂಗೆಡಬಾರದು ಎಂಬ ಪಾಠವನ್ನಂತೂ ಈ ಚುನಾವಣೆ ರಾಜಕೀಯ ಪಕ್ಷಗಳಿಗೆ ಕಲಿಸಿದೆ. ಕರ್ನಾಟಕ, ಪಂಜಾಬ್ ಹೊರತುಪಡಿಸಿ ಎಲ್ಲ ರಾಜ್ಯಗಳಲ್ಲಿ ಯಶಸ್ಸು ಕಂಡಿದ್ದ ಬಿಜೆಪಿಗೆ ಮುಟ್ಟಿ ನೋಡಿಕೊಳ್ಳುವಂಥ ಹೊಡೆತ ಸಿಕ್ಕಿದೆ ಈ ಚುನಾವಣೆಯಲ್ಲಿ. ಛತ್ತೀಸ್ ಗಢ ಮತ್ತು ಮಧ್ಯ ಪ್ರದೇಶದಲ್ಲಿ ಸತತ 15 ವರ್ಷಗಳ ಭಾರತೀಯ ಜನತಾ ಪಕ್ಷದ ಆಡಳಿತಕ್ಕೆ, ರಾಜಸ್ಥಾನದಲ್ಲಿ 5 ವರ್ಷಗಳ ಬಿಜೆಪಿಯ ಆಡಳಿತಕ್ಕೆ ಕಡಿವಾಣ ಹಾಕಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ಮುನ್ನ ತನ್ನ ಫಾರಂ ಕಂಡುಕೊಂಡಿದೆ. ಇನ್ನು ಮುಂದೆ ಅತ್ಯಂತ ೆಚ್ಚರಿಕೆಯ ಆಟ ಆಡಬೇಕಷ್ಟೆ.
ಪಂಚರಾಜ್ಯ ಚುನಾವಣೆ ಫಲಿತಾಂಶ LIVE: 5 ರಾಜ್ಯಗಳಲ್ಲೂ ಬಿಜೆಪಿ ಧೂಳಿಪಟ!
ಬಿಜೆಪಿ ಪಾಳಯದಲ್ಲಿ ಕಾರ್ಮೋಡ
ಈಗಾಗಲೆ ಬಿಜೆಪಿ ಪಾಳಯದಲ್ಲಿ ಕಾರ್ಮೋಡ ಕವಿದಂತಾಗಿದ್ದು, ಆತ್ಮಾವಲೋಕನ ಮಾಡಿಕೊಳ್ಳಲು, ಎಲ್ಲೆಲ್ಲಿ ಎಡವಿದ್ದೇವೆ ಎಂಬುದರ ಪರಾಮರ್ಶೆ ಮಾಡಿಕೊಳ್ಳಲು ದೆಹಲಿಯಲ್ಲಿ ಒಂದೆಡೆ ಸೇರಲಿದ್ದಾರೆ. ಛತ್ತೀಸ್ ಗಢ, ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆಯಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ರಾಜ್ಯದಲ್ಲಿ ಅಧಿಕಾರ ಸ್ಥಾಪಿಸುವುದು ಮುಖ್ಯ ಮಾತ್ರವಲ್ಲ, ಜನಮನ್ನಣೆ ಗಳಿಸಿ, ಯಾವುದೇ ಭ್ರಷ್ಟಾಚಾರದಲ್ಲಿ, ವಿವಾದದಲ್ಲಿ ಸಿಲುಕಿಕೊಳ್ಳದಂತೆ ಜನಪರ ಆಡಳಿತ ನೀಡುವುದು ಕೂಡ ಅಷ್ಟೇ ಮುಖ್ಯ ಎಂದು ಈ ಚುನಾವಣೆ ಬಾರಿಬಾರಿ ಸಾರಿದೆ.
ಮಹಾಘಟಬಂಧನಕ್ಕೆ ಭಾರೀ ಸೋಲು
ಇಲ್ಲಿ ಗಮನಿಸಬೇಕಾದ ಒಂದು ಸಂಗತಿಯೆಂದರೆ, ತೆಲಂಗಾಣದಲ್ಲಿ ಮಾಡಿಕೊಂಡಿದ್ದ ಮಹಾಘಟಬಂಧನಕ್ಕೆ ಭಾರೀ ಸೋಲುಂಟಾಗಿದೆ. ಅದೇ, ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ಯಾವುದೇ ಮೈತ್ರಿಕೂಟ ಮಾಡಿಕೊಳ್ಳದೆಯೇ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇದು, ಲೋಕಸಭೆಗೂ ಮುನ್ನ ಆಗಲಿರುವ ಮಹಾಘಟಬಂಧನದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕು. ಬಹುಶಃ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೆಲ ರಾಜಕೀಯ ಪಕ್ಷಗಳೊಂದಿಗೆ, ಕೆಲ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಳ್ಳಲು ಹಿಂದೇಟು ಹಾಕಬಹುದು. ಅಥವಾ ಬಿಜೆಪಿಯನ್ನು ಲೋಕಸಭೆಯಲ್ಲಿಯೂ ಮಣ್ಣುಮುಕ್ಕಿಸಬೇಕೆಂದು ಎಲ್ಲ ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳು ಒಗ್ಗೂಡಲೂಬಹುದು.
ಸಮೀಕ್ಷೆಗಳಿಗೂ ಅಚ್ಚರಿ ಮೂಡಿಸಿದ ತೆಲಂಗಾಣ ಫಲಿತಾಂಶ
ಬಿಜೆಪಿಗೆ ಕಣ್ಣು ತೆರೆಸುವಂಥ ಫಲಿತಾಂಶ
ಲೋಕಸಭೆ ಚುನಾವಣೆ ಇನ್ನು ಕೇವಲ 6 ತಿಂಗಳು ಮಾತ್ರ ಉಳಿದಿರುವಾಗ ಇದು ಬಿಜೆಪಿಗೆ ಕಣ್ಣು ತೆರೆಸುವಂಥ ಫಲಿತಾಂಶ. ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲೆಲ್ಲ ಏನೇನು ಸಾಧನೆ ಮಾಡಿದೆ, ಜನರಿಗೆ ಏನೇನು ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ, ದೇಶದ ಬೆನ್ನೆಲುಬಾಗಿರುವ ರೈತರಿಗೆ ಆಯಾ ರಾಜ್ಯಗಳಲ್ಲಿ ಏನೇನು ಸವಲತ್ತುಗಳನ್ನು ಒದಗಿಸಲಾಗಿದೆ, ಜನ ತಮ್ಮ ಆಡಳಿತವನ್ನು ಮೆಚ್ಚಿಕೊಂಡಿದ್ದಾರೋ ಇಲ್ಲವೋ ಎಲ್ಲವನ್ನೂ ಅಳೆದುತೂಗಿ, ತಪ್ಪುಗಳನ್ನು ತಿದ್ದಿಕೊಳ್ಳಲು ಈ ಚುನಾವಣೆ ಸುವರ್ಣ ಅವಕಾಶ ಬಿಜೆಪಿಗೆ ಒದಗಿಸಿದೆ.
ರಾಹುಲ್ ಭಾಷಣದಿಂದ ಕಾಂಗ್ರೆಸ್ ಗೆದ್ದಿದೆಯಾ?
ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆಗಳಲ್ಲಿ ಪ್ರಮುಖ ಪಾತ್ರವಹಿಸುವ ಮಧ್ಯಮ ವರ್ಗೀಯ ಮತ್ತು ಗ್ರಾಮೀಣ ಜನರನ್ನು ಸೆಳೆಯಲು ಏನು ಮಾಡಬೇಕು ಎಂಬುದನ್ನು ನಿರ್ಧರಿಸಲು ಅವಕಾಶ ಒದಗಿಸಿಕೊಟ್ಟಿದೆ. ಜನರಿಗೆ ರಾಮ ಮಂದಿರ ಬೇಕಾ ಬೇಡವಾ? ಎಂಬುದನ್ನು ತೀರ್ಮಾನಿಸಲು ಇದಕ್ಕಿಂತ ಸಮಯ ಬೇಕೆ? ಈ ಚುನಾವಣೆಗಳಲ್ಲಿ ಆಡಳಿತ ವಿರೋಧಿ ಅಲೆಯಿತ್ತೇ ಹೊರತು, ರಾಹುಲ್ ಗಾಂಧಿ ಮಾಡಿದ ಪ್ರಚಾರ ಅಥವಾ ಭಾಷಣದಿಂದಲೇ ಗೆದ್ದಿದ್ದೇವೆ ಎಂದು ಕಾಂಗ್ರೆಸ್ ಬೀಗುವಂತೆಯೂ ಇಲ್ಲ. ಇಲ್ಲದಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶ ಮತ್ತೆ ಉಲ್ಟಾ ಹೊಡತೀತು ಎಂಬ ಎಚ್ಚರಿಕೆಯಲ್ಲಿ ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಬೇಕಿದೆ.
ಮೋದಿಯವರಿಗೆ ರಾಹುಲ್ ಗಾಂಧಿ ಟಾರ್ಗೆಟ್ ಅಲ್ಲ
ಅಸಲಿಗೆ, ನರೇಂದ್ರ ಮೋದಿಯವರಿಗೆ ರಾಹುಲ್ ಗಾಂಧಿ ಟಾರ್ಗೆಟ್ ಅಲ್ಲವೇ ಅಲ್ಲ. ರಾಹುಲ್ ಗಾಂಧಿಯವರಿಗೂ ನರೇಂದ್ರ ಮೋದಿ ಗುರಿಯಲ್ಲ. ಇದಕ್ಕಿಂತಲೂ ಹೊರತಾದ ವಿಷಯಗಳು ಈ ಚುನಾವಣೆಯಲ್ಲಿ ಅಡಕವಾಗಿವೆ. ಇಲ್ಲದಿದ್ದರೆ, ರಾಹುಲ್ ಅವರನ್ನು ಅವರ ಕುಟುಂಬವನ್ನು ಮೋದಿಯವರು ಗುರಿಯಾಗಿಸಿ ಮಾತಾಡಿದಲ್ಲೆಲ್ಲ ಭಾರೀ ಮತಗಳು ಬರಬೇಕಾಗಿದ್ದವು, ಅಲ್ಲವೆ? ರಾಹುಲ್ ಗಾಂಧಿಯವರು ಕೂಡ ರಫೇಲ್ ಡೀಲ್ ಬಗ್ಗೆ, ಆರ್ಬಿಐ, ಸಿಬಿಐನಂಥ ಸಂಸ್ಥೆಯಲ್ಲಿ ಮೋದಿ ಹಸ್ತಕ್ಷೇಪ ಮಾಡಿದ್ದಾರೆಂದು ಟೀಕಿಸಿದ್ದಕ್ಕೆ ಕಾಂಗ್ರೆಸ್ಸಿಗೆ ವೋಟುಗಳು ಬಿದ್ದಿರಬೇಕಲ್ಲವೆ? ಈ ಚುನಾವಣೆಗಳಲ್ಲಿ ಚಾಣಕ್ಯನ ಚಾಣಾಕ್ಷತನಕ್ಕೆ ಜನ ಮರುಳಾಗುವುದಿಲ್ಲ, ದುರಹಂಕಾರಕ್ಕೂ ಜನ ಮರುಳಾಗಿ ವೋಟು ಹಾಕುವುದಿಲ್ಲ ಎಂಬುದು ಸಾಬೀತಾಗಿದೆ.