ಐದು ತಿಂಗಳಲ್ಲಿ 5 ಪ್ರಮುಖ ಮುಖಂಡರು ಕಾಂಗ್ರೆಸ್ಸಿಗೆ ಗುಡ್ ಬೈ
ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ಸಿನ ಚಿಂತನಾ ಶಿಬಿರದಲ್ಲಿ ಅಂತಹ ಮಹತ್ವದ ನಿರ್ಧಾರವೇನೂ ತೆಗೆದುಕೊಂಡಿಲ್ಲ. ಕಾಂಗ್ರೆಸ್ಸಿನ ಹೈಕಮಾಂಡ್ ಇನ್ನೂ ಕೆಲವು ಮುಖಂಡರ ಮಾತಿನಂತೆ ನಡೆಯುತ್ತಿದ್ದಾರೆ. ಅದು ಬದಲಾಗದವರೆಗೂ, ಕಾಂಗ್ರೆಸ್ಸಿನಲ್ಲಿ ಏನೂ ಬದಲಾವಣೆಯಾಗುವುದಿಲ್ಲ ಎಂದು ರಾಜಕೀಯ ತಂತ್ರಗಾರಿಕ ನಿಪುಣ ಪ್ರಶಾಂತ್ ಕಿಶೋರ್ ಹೇಳಿದ್ದರು.
ಐವತ್ತು ವರ್ಷದೊಳಗಿನ ಮುಖಂಡರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡುವ ಬಗ್ಗೆ ಚಿಂತನಾ ಶಿಬಿರದಲ್ಲಿ ನಿರ್ಧಾರವಾಗಿತ್ತು. ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎನ್ನುವ ಪ್ರಶ್ನೆ ಎದುರಾದಾಗಲೇ ಹಿರಿಯ ಮುಖಂಡರೊಬ್ಬರು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ್ದರು.
ಕಾಂಗ್ರೆಸ್ ಒಳ್ಳೆಯದೆ, ಅದರ ಬಗ್ಗೆ ನನ್ನಲ್ಲಿ ದೂರುಗಳಿಲ್ಲ: ಸಿಬಲ್
ಜಿ-23 ನಾಯಕರ ಗುಂಪೆಂದು ಗುರುತಿಸಿಕೊಂಡಿರುವ ನಾಯಕರು, ಪಕ್ಷದಲ್ಲಿನ ನಾಯಕತ್ವ ಬದಲಾವಣೆಯ ಬಗ್ಗೆ ಕಳೆದ ಕೆಲವು ತಿಂಗಳಿನಿಂದ ಧ್ವನಿ ಎತ್ತುತ್ತಲೇ ಇತ್ತು. ಉದಯಪುರದಲ್ಲಿ ನಡೆದ ಶಿಬಿರದಲ್ಲಿ ಈ ಬಗ್ಗೆ ನಿರ್ಧಾರವಾಗಬಹುದು ಎನ್ನುವ ಆಶಯವೂ ಈ ನಾಯಕರಲ್ಲೂ ಇತ್ತು.
ಆದರೆ, ಈ ಬಗ್ಗೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಲಿಲ್ಲ. ಹೀಗಾಗಿ, ಜಿ-23 ಮುಖಂಡರು ಸ್ವಾಭಾವಿಕವಾಗಿ ಪಕ್ಷದ ವರಿಷ್ಠರ ಬಗ್ಗೆ ತಮ್ಮ ಅಸಮಾಧಾನವನ್ನು ಮುಂದುವರಿಸಿದ್ದಾರೆ. ಗಾಂಧಿ/ನೆಹರೂ ಕುಟುಂಬದವರೇ ಪಕ್ಷವನ್ನು ಆಳಬೇಕು ಎನ್ನುವ ನಿಲುವನ್ನು ಕಾಂಗ್ರೆಸ್ಸಿನ ಕೆಲವು ಹಿರಿಯ ಮುಖಂಡರೇ ಒತ್ತಡ ಹೇರುತ್ತಿರುವುದರಿಂದ ಈ ಕುಟುಂಬದವರ ಹೊರತಾಗಿ ಇನ್ನೊಬ್ಬರು ಅಧ್ಯಕ್ಷರಾಗುವುದು ಕಷ್ಟ. ಈ ಎಲ್ಲಾ ಬೆಳವಣಿಗೆಯ ಮಧ್ಯೆ, ಐವರು ಪ್ರಮುಖ ನಾಯಕರು ಕಾಂಗ್ರೆಸ್ ತೊರೆದಿರುವುದು ಪಕ್ಷಕ್ಕೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ. ಅವರು ಯಾರು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:
'ಪ್ರಸಾದ' ಹೆಂಗಿತ್ತು?- ಕಪಿಲ್ ಸಿಬಲ್ಗೆ ಬಿಜೆಪಿ ಮುಖಂಡ ಕುಟುಕಿದ್ದು ಯಾಕೆ?
ಮಾಜಿ ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್
ಮಾಜಿ ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್ ಫೆಬ್ರವರಿ 16ಕ್ಕೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಪಂಜಾಬ್ ಮೂಲದವರಾದ ಇವರು, ಅಲ್ಲಿನ ಅಸೆಂಬ್ಲಿ ಚುನಾವಣೆಗೆ ಮುನ್ನ ರಾಜೀನಾಮೆ ನೀಡಿದ್ದು ಪಕ್ಷಕ್ಕೆ ಹೊಡೆತವನ್ನು ನೀಡಿತ್ತು. ಸುಮಾರು ನಾಲ್ಕು ದಶಕಗಳ ಕಾಲ ಕಾಂಗ್ರೆಸ್ಸಿನಲ್ಲಿದ್ದ ಅಶ್ವನಿ ಕುಮಾರ್, ಜಿ-23 ನಾಯಕರ ಗುಂಪು ನಾಯಕತ್ವ ಬದಲಾವಣೆಗೆ ಒತ್ತಾಯಿಸುತ್ತಿದ್ದಾಗ, ಸೋನಿಯಾ ಗಾಂಧಿ ಬೆಂಬಲಕ್ಕೆ ಇವರು ನಿಂತಿದ್ದರು.
ಮಾಜಿ ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುನೀಲ್ ಜಾಖಡ್
ಮಾಜಿ ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುನೀಲ್ ಜಾಖಡ್, ಇದೇ ತಿಂಗಳ 20ನೇ ತಾರೀಕಿನಂದು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಮೇ ಹದಿನಾಲ್ಕನೇ ತಾರೀಕಿಗೆ ಸುನೀಲ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆಯನ್ನು ನೀಡಿದ್ದರು. ಉದಯಪುರದಲ್ಲಿ ಪಕ್ಷದ ಚಿಂತನಾ ಶಿಬಿರ ನಡೆಯುತ್ತಿರುವಾಗಲೇ ಇವರು ಫೇಸ್ ಬುಕ್ ಲೈವ್ ಮೂಲಕ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದರು.
ಆರ್ ಪಿಎನ್ ಸಿಂಗ್ ಪಕ್ಷದ ತೊರೆದ ಮತ್ತೋರ್ವ ಕಾಂಗ್ರೆಸ್ ಮುಖಂಡ
ಆರ್ ಪಿಎನ್ ಸಿಂಗ್ ಪಕ್ಷದ ತೊರೆದ ಮತ್ತೋರ್ವ ಕಾಂಗ್ರೆಸ್ ಮುಖಂಡ. ಕೇಂದ್ರದಲ್ಲಿ ಗೃಹ ಇಲಾಖೆಯ ರಾಜ್ಯ ಸಚಿವರಾಗಿದ್ದ ಸಿಂಗ್, ಉತ್ತರ ಪ್ರದೇಶದ ಮೂಲದವರು. ಅಲ್ಲಿನ ಅಸೆಂಬ್ಲಿ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದ ಸಿಂಗ್, ಪೂರ್ವ ಉತ್ತರ ಪ್ರದೇಶದ ಪ್ರಮುಖ ಹಿಂದುಳಿದ ವರ್ಗದ ನಾಯಕರಾಗಿದ್ದರು. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಬಿದ್ದ ದೊಡ್ಡ ಹೊಡೆತ ಇದಾಗಿತ್ತು.
ಗುಜರಾತ್ ನಲ್ಲಿ ಮನೆಮಾತಾಗಿದ್ದ ಹಾರ್ದಿಕ್ ಪಟೇಲ್
ಪಾಟೀದಾರ್ ಆಂದೋಲನದ ಮೂಲಕ ಗುಜರಾತ್ ನಲ್ಲಿ ಮನೆಮಾತಾಗಿದ್ದ ಹಾರ್ದಿಕ್ ಪಟೇಲ್ ಮೇ ಹತ್ತೊಂಬತ್ತರಂದು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ್ದರು. ಪಕ್ಷದ ನಾಯಕರ ವಿರುದ್ದ ಬೇಸರದಿಂದಾಗಿ ಪಟೇಲ್ ಪಕ್ಷಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಇವರ ಇತ್ತೀಚಿನ ಹೇಳಿಕೆಗಳನ್ನು ಗಮನಿಸುವುದಾದರೆ ಮತ್ತು ಅವರ ಆಪ್ತವಲಯದ ಪ್ರಕಾರ ಇವರು ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.
ಹಿರಿಯ ಮುಖಂಡ, ಮಾಜಿ ಸಚಿವ ಕಪಿಲ್ ಸಿಬಲ್
ಇದು, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿದ್ದ ದೊಡ್ಡ ಹೊಡೆತ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಹಿರಿಯ ಮುಖಂಡ, ಮಾಜಿ ಸಚಿವ ಕಪಿಲ್ ಸಿಬಲ್ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಮೂರು ದಶಕಗಳಿಂದ ಕಾಂಗ್ರೆಸ್ ಜೊತೆಯಲ್ಲಿದ್ದ ಕಪಿಲ್ ಸಿಬಲ್ ವೃತ್ತಿಯಲ್ಲಿ ವಕೀಲರು ಕೂಡಾ. ಜಿ-23 ನಾಯಕರ ಗುಂಪಲ್ಲಿ ಕಪಿಲ್ ಸಿಬಲ್ ಮಂಚೂಣಿಯಲ್ಲಿದ್ದರು. ಅವರು ಈಗ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಪಕ್ಷೇತರರಾಗಿ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ.