ಡೆಂಜರ್ ಡೆಂಗ್ಯೂಗೆ ಬಲಿಯಾಗಿದ್ದು ಒಬ್ಬಿಬ್ಬರಲ್ಲ
ಮಣಿಪುರಿ, ನವೆಂಬರ್.11: ದಿನ ಬೆಳಗಾದ್ರೆ ಜನರಿಗೆ ಮಾರಕ ರೋಗದ ಭೀತಿ. ಯಾವಾಗ ಏನಾಗುತ್ತೋ ಏನೋ ಎಂಬ ಭಯದಲ್ಲೇ ಜನರು ಜೀವನ ಸಾಗಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರು, ಸೇವಿಸುವ ಗಾಳಿ, ಆಹಾರದಲ್ಲೂ ಈ ಜನರಿಗೆ ಮೃತ್ಯು ಕಾಡುತ್ತಿದ್ದಾನೆ. ಇದು ಉತ್ತರ ಪ್ರದೇಶದ ಮಣಿಪುರಿಯಲ್ಲಿ ಜನರಿಗೆ ಎದುರಾಗಿರುವ ಮಾರಕ ರೋಗದ ಕಥೆ.
ಹೌದು, ಮಣಿಪುರಿಯಲ್ಲಿ ಜನರಿಗೆ ದಿನೇ ದಿನೆ ಡೆಂಗ್ಯೂ ಭೀತಿ ಹೆಚ್ಚುತ್ತಲೇ ಇದೆ. ಈಗಾಗಲೆ ರಾಜ್ಯದಲ್ಲಿ ಮಾರಕ ಜ್ವರಕ್ಕೆ ಐವರು ಪ್ರಾಣ ಬಿಟ್ಟಿದ್ದಾರೆ. ಮಣಿಪುರಿಯ ಸರ್ಕಾರಿ ಆಸ್ಪತ್ರೆಯೊಂದರಲ್ಲೇ ಮಾರಕ ರೋಗದಿಂದ ಬಳಲುತ್ತಿದ್ದ ಮೂವರು ಮೃತಪಟ್ಟಿದ್ದಾರೆ.
ಇನ್ನು, ಚಚ್ಚಾ ಹಾಗೂ ದ್ವಾರಕಿಪುರ್ ಎಂಬಲ್ಲಿ ಇಬ್ಬರು ಮಾರಕ ಜ್ವರಕ್ಕೆ ತುತ್ತಾಗಿದ್ದಾರೆ. ಇಷ್ಟಲ್ಲದೇ ಜಿಲ್ಲೆಯಲ್ಲಿ ಡೆಂಗ್ಯೂ ಮಾರಕ ರೋಗ ದಿನೇ ದಿನೆ ಹೆಚ್ಚುತ್ತಲೇ ಇದೆ. ಮಣಿಪುರಿ ಜಿಲ್ಲಾಸ್ಪತ್ರೆಯಲ್ಲಿ ಡೆಂಗ್ಯೂನಿಂದ ಬಳಲುತ್ತಿರುವ 11 ಮಂದಿ ರೋಗಿಗಳು ಮತ್ತೆ ದಾಖಲಾಗಿದ್ದಾರೆ.
ವಿಧಿಯಾಟಕ್ಕೆ ಹೆತ್ತವರ ಕಣ್ಣೀರು!
ನಿಹಾರಿಕ ಎಂಬ ಎರಡು ತಿಂಗಳ ಕಂದಮ್ಮ ಕಣ್ಣು ಬಿಟ್ಟು ಪ್ರಪಂಚವನ್ನು ನೋಡುವ ಮೊದಲೇ ಕಣ್ಣು ಮುಚ್ಚಿದೆ. ಮಾಣಿಕ್ ಪುರ್ ಮೂಲದ ವಿವೇಕ್ ಕುಮಾರ್ ಎಂಬುವವರ ಎರಡು ತಿಂಗಳ ಮಗುವಿನಲ್ಲಿ ಡೆಂಗ್ಯೂ ಲಕ್ಷಣ ಕಾಣಿಸಿಕೊಂಡಿತ್ತು. ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದರಾದ್ರೂ, ಚಿಕಿತ್ಸೆ ಫಲಿಸದೇ ಪುಟ್ಟ ಕಂದ ಪ್ರಾಣ ಬಿಟ್ಟಿದೆ.
ಮಣಿಪುರಿ ಜಿಲ್ಲೆಯಲ್ಲೇ ಪ್ರಾಣ ಬಿಟ್ಟಿದ್ದು ಐವರು!
ಮೊಹಲ್ಲಾ ಸನ್ಸಾರ್ ಪುರ್ ನಲ್ಲಿ 55 ವರ್ಷದ ವಿನೋದ್ ಕುಮಾರ್ ಎಂಬುವವರಲ್ಲೂ ಡೆಂಗ್ಯೂ ಲಕ್ಷಣ ಕಾಣಿಸಿಕೊಂಡಿತ್ತು. ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದ್ರೂ, ಚಿಕಿತ್ಸೆ ಫಲಿಸದೇ ಕಳೆದ ವಿನೋದ್ ಕುಮಾರ್ ಮಾರಕ ರೋಗಕ್ಕೆ ಬಲಿಯಾಗಿದ್ದಾರೆ. ಬಿಚ್ವಾದಲ್ಲಿ ಇದೇ ಮಾರಕ ರೋಗಕ್ಕೆ 55 ವರ್ಷದ ಲಾಲ್ ಜಿ ಕೂಡಾ ಪ್ರಾಣ ತೆತ್ತಿದ್ದಾರೆ. ಮಣಿಪುರದ ಛಛ್ಛಾ ಗ್ರಾಮದಲ್ಲಿ 60 ವರ್ಷದ ಸಾವಿತ್ರಿ ದೇವಿ, ದ್ವಾರಕಪುರ್ ನಲ್ಲಿ 38 ವರ್ಷದ ಮೌಚಿ ರಾಮ್ ಲೋಧಿ ಕೂಡಾ ಡೆಂಗ್ಯೂ ಎಂಬ ಮಾರಕ ರೋಗಕ್ಕೆ ತುತ್ತಾಗಿ ಪ್ರಾಣ ಬಿಟ್ಟಿದ್ದಾರೆ.
ಮಾರಕ ರೋಗಕ್ಕೆ ಇನ್ನೆಷ್ಟು ಬೇಕು ಬಲಿ?
ಮಣಿಪುರಿಯಲ್ಲಿ ಮಾರಕ ರೋಗ ಡೆಂಗ್ಯೂನ ರೌದ್ರ ನರ್ತನ ಮುಂದುವರಿದಿದೆ. ಇದುವರೆಗೂ ಮಾರಕ ರೋಗಕ್ಕೆ ಐವರು ಬಲಿಯಾಗಿದ್ದು ಆಗಿದೆ. ಅಷ್ಟೇ ಅಲ್ಲದೆ, ಜಿಲ್ಲಾಸ್ಪತ್ರೆ ಒಂದರಲ್ಲೇ ಮತ್ತೆ 11 ಮಂದಿ ಡೆಂಗ್ಯೂ ಪೀಡಿತ ರೋಗಿಗಳು ಚಿಕಿತ್ಸೆಗೆ ದಾಖಲಾಗಿದ್ದಾರೆ. ಇದು ಮಣಿಪುರಿಯ ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.
ಚಿಕಿತ್ಸೆಗೆ ತೆರಳುವ ರೋಗಿಗಳಿಗೆ ನಿತ್ಯ ಅವಸ್ಥೆ!
ಮಣಿಪುರಿಯಲ್ಲಿ ಡೆಂಗ್ಯೂ ಭೀತಿ ಹೆಚ್ಚುತ್ತಲೇ ಇದ್ದರೂ, ಆರೋಗ್ಯ ಇಲಾಖೆಯಿಂದ ಯಾವುದೇ ಸೂಕ್ತ ರೀತಿ ಕ್ರಮಗಳನ್ನು ತೆಗೆದುಕೊಂಡಿಲ್ಲ. ಜಿಲ್ಲಾಸ್ಪತ್ರೆಗಳಲ್ಲೇ ರೋಗಿಗಳಿಗೆ ಬೇಕಾದ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ರೋಗಿಗಳಿಗೆ ಬೆಡ್ ವ್ಯವಸ್ಥೆಯಿಲ್ಲ. ಡೆಂಗ್ಯೂನಿಂದ ದೂರವಿರಲು ನಗರಸಭೆ, ಪುರಸಭೆಗಳಿಂದ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿತ್ತು. ಆದರೆ, ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಈ ಬಗ್ಗೆ ತೆಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.