ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪೂರ್ವಜರ ಗ್ರಾಮಕ್ಕೆ ವಿದ್ಯುತ್ ಸಂಪರ್ಕ!
ನವದೆಹಲಿ, ಜೂನ್ 26: ಭಾರತದ ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪೂರ್ವಜರ ಗ್ರಾಮದಲ್ಲಿ ಕೊನೆಗೂ ಬೆಳಕು ಚೆಲ್ಲಿದೆ. ದಶಕಗಳಿಂದ ಬೆಳಕು ಇಲ್ಲದೇ ಕತ್ತಲೆಯಲ್ಲಿ ಗ್ರಾಮಸ್ಥರು ಮುಳುಗಿದ್ದಾರೆ ಎಂಬ ಮಾಧ್ಯಮಗಳ ವರದಿ ನಂತರ ಒಡಿಶಾ ಸರ್ಕಾರ ಎಚ್ಚೆತ್ತುಕೊಂಡಿದೆ.
ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಉಪಾರ್ಬೇಡ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ ಎಂಬ ವರದಿ ನಂತರದಲ್ಲಿ ಒಡಿಶಾ ಸರ್ಕಾರವು ಭಾನುವಾರ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವನ್ನು ಶುರು ಮಾಡಿದೆ.
ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿಗೆ ಬಿಎಸ್ಪಿ ಬೆಂಬಲ
ಎನ್ಡಿಎ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಆಗಿರುವ ದ್ರೌಪದಿ ಮುರ್ಮು ಈಗ ತಮ್ಮ ಪೂರ್ವಜರ ಗ್ರಾಮದಲ್ಲಿ ವಾಸವಾಗಿಲ್ಲ. ಬದಲಿಗೆ ಡುಂಗುರಿಸಾಹಿಯಿಂದ 20 ಕಿಲೋ ಮೀಟರ್ ದೂರದಲ್ಲಿರುವ ರೈರಂಗಪುರ ಪಟ್ಟಣಕ್ಕೆ ಶಿಫ್ಟ್ ಆಗಿದ್ದಾರೆ. ಅದಾಗ್ಯೂ, ಮಾಧ್ಯಮಗಳ ವರದಿಯು ಒಡಿಶಾ ಸರ್ಕಾರವನ್ನು ಬಡಿದೆಬ್ಬಿಸಿದೆ, ಆ ಮೂಲಕ ದ್ರೌಪದಿ ಮುರ್ಮು ಪೂರ್ವಜರ ಗ್ರಾಮದಲ್ಲಿ ಬೆಳಕು ಮೂಡಿದೆ.
ಕಾಮಗಾರಿ ಆರಂಭಕ್ಕಾಗಿ ಗ್ರಾಮಕ್ಕೆ ಅಧಿಕಾರಿಗಳು
ಒಡಿಶಾದ ಕುಸುಮಿ ಬ್ಲಾಕ್ನಲ್ಲಿರುವ ಉಪರ್ಬೇಡ ಗ್ರಾಮವು ಬಡಸಾಹಿ ಮತ್ತು ಡುಂಗುರಿಸಾಹಿ ಎಂಬ ಎರಡು ಗ್ರಾಮಗಳನ್ನು ಹೊಂದಿದೆ. ಬಡಸಾಹಿ ಸಂಪೂರ್ಣ ವಿದ್ಯುದೀಕರಣಗೊಂಡಿದ್ದರೂ, ಡುಂಗುರಿಸಾಹಿಗೆ ಇನ್ನೂ ವಿದ್ಯುತ್ ಸಂಪರ್ಕವನ್ನೇ ಕಂಡಿರಲಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ಟಾಟಾ ಪವರ್ ನಾರ್ತ್ ಒಡಿಶಾ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ (ಟಿಪಿಎನ್ಒಡಿಎಲ್) ಅಧಿಕಾರಿಗಳು ಮತ್ತು ಕಾರ್ಮಿಕರು 38 ವಿದ್ಯುತ್ ಕಂಬಗಳು ಮತ್ತು 900 ಮೀಟರ್ ಕೇಬಲ್ಗಳು, ಕಂಡಕ್ಟರ್ಗಳು ಮತ್ತು ಟ್ರಾನ್ಸ್ಫಾರ್ಮರ್ಗಳು ಹಾಗೂ ಯಂತ್ರಗಳೊಂದಿಗೆ ಉಪರ್ಬೇಡ ಗ್ರಾಮಕ್ಕೆ ತಲುಪಿಸಲಾಗಿದೆ.
ಬದುಕಿಗೆ ಸೀಮೆ ಎಣ್ಣೆ ದೀಪವೇ ಬೆಳಕು
ದ್ರೌಪದಿ ಮುರ್ಮು ಪೂರ್ವಜರ ಉಪರ್ಬೇಡ ಗ್ರಾಮದಲ್ಲಿ ಜನರ ಬದುಕಿನಲ್ಲಿ ರಾತ್ರಿ ಆಗುತ್ತಿದ್ದರಂತೆ ಕತ್ತಲು ಆವರಿಸುವುದಕ್ಕೆ ಶುರುವಾಗುತ್ತಿತ್ತು. ಏಕೆಂದರೆ ವಿದ್ಯುತ್ ಸಂಪರ್ಕವಿಲ್ಲದ ಗ್ರಾಮದಲ್ಲಿ ಸೀಮೆ ಎಣ್ಣೆ ದೀಪಗಳೇ ಬೆಳಕು ನೀಡುತ್ತಿದ್ದವು. ದುಂಗುರಸಾಹಿಯಲ್ಲಿ ವಾಸಿಸುವ ಸುಮಾರು 20 ಕುಟುಂಬಗಳು ಇಲ್ಲಿಯವರೆಗೆ ಯಾವುದೇ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿರಲಿಲ್ಲ. ಅವರು ಕತ್ತಲೆಯಲ್ಲಿ ಬದುಕಲು ಸೀಮೆಎಣ್ಣೆ ದೀಪವನ್ನೇ ಅವಲಂಬಿಸಿದ್ದರು.
ಮೊಬೈಲ್ ಚಾರ್ಜ್ ಮಾಡಲು ಪಕ್ಕದ ಹಳ್ಳಿಗೆ ಹೋಗಬೇಕು
ವರದಿಗಳ ಪ್ರಕಾರ, ಗ್ರಾಮದ ಸ್ಥಳೀಯರು ತಮ್ಮ ಮೊಬೈಲ್ ಫೋನ್ಗಳನ್ನು ಚಾರ್ಜ್ ಮಾಡಲು ನೆರೆಹೊರೆಯ ಬೇರೆ ಗ್ರಾಮಗಳಿಗೆ ಹೋಗುತ್ತಿದ್ದರು. ಅಕ್ಕಪಕ್ಕದ ಗ್ರಾಮಗಳಿಗೆ ಹೋಗಿ ಅಲ್ಲಿಂದ ಮೊಬೈಲ್ ಫೋನ್ ಚಾರ್ಜ್ ಮಾಡಿಕೊಂಡು ಬರುತ್ತಿದ್ದರು. ಸ್ವತಃ ದ್ರೌಪದಿ ಮುರ್ಮು, ಸೋದರಳಿಯ ಬಿರಂಚಿ ನಾರಾಯಣ ತುಡು ಮತ್ತು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ದುಂಗುರಸಾಹಿ ಗ್ರಾಮದಲ್ಲೇ ವಾಸವಾಗಿದ್ದಾರೆ. ಡುಂಗುರಸಾಹಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಅಧಿಕಾರಿಗಳಿಗೆ ಇವರೇ ಹಲವು ಬಾರಿ ಮನವಿ ಮಾಡಿದ್ದರೂ, ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ.
"ನಮ್ಮ ಡುಂಗುರಸಾಹಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕವನ್ನು ಒದಗಿಸುವಂತೆ ನಾವು ಅನೇಕರಿಗೆ ಮನವಿ ಮಾಡಿದ್ದೆವು. ಆದರೆ, ಯಾರೂ ಗಮನ ಹರಿಸಲಿಲ್ಲ," ಎಂದು ಬಿರಾಂಚಿ ಪತ್ನಿ ತಿಳಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಗೂ ಮುನ್ನ ಪೂರ್ವಜರ ಗ್ರಾಮಕ್ಕೆ ವಿದ್ಯುತ್
ಶುಕ್ರವಾರ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಮತ್ತು ಅಪ್ನಾ ದಳದ ಅನುಪ್ರಿಯಾ ಪಟೇಲ್ ಅಲ್ಲದೆ, ಎನ್ಡಿಎ ಘಟಕಗಳ ನಾಯಕರು ಅವರ ನಾಮನಿರ್ದೇಶನದ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಮುರ್ಮು ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದ ಬಿಜು ಜನತಾ ದಳ ಮತ್ತು ವೈಎಸ್ಆರ್ ಕಾಂಗ್ರೆಸ್ ನಾಯಕರು ಕೂಡ ಹಾಜರಾಗಿದ್ದರು.
ಭಾರತದ 16ನೇ ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರಗಳ ಪರಿಶೀಲನೆಗೆ ಜೂನ್ 30 ಮತ್ತು ಉಮೇದುವಾರಿಕೆ ಹಿಂಪಡೆಯಲು ಜುಲೈ 2 ಕೊನೆಯ ದಿನಾಂಕವಾಗಿದೆ. ಭಾರತದ 14 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುತ್ತಿರುವ ರಾಮನಾಥ್ ಕೋವಿಂದ್ ಜುಲೈ 25, 2017 ರಂದು ಅಧಿಕಾರ ವಹಿಸಿಕೊಂಡಿದ್ದು, ಅವರ ಅವಧಿಯು ಜುಲೈ 24, 2022 ರಂದು ಕೊನೆಗೊಳ್ಳುತ್ತದೆ.