ಅಯೋಧ್ಯೆ ಭವ್ಯ ರಾಮ ಮಂದಿರ ನಿರ್ಮಾಣದ ಮೊದಲ ನೋಟ: 2024 ಚುನಾವಣೆಗೂ ಮುನ್ನ ತೆರಯಲಿದೆ
ಅಯೋಧ್ಯೆ, ಸೆಪ್ಟೆಂಬರ್ 16: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯದ ಮೊದಲ ಹಂತವು ಬಹುತೇಕ ಸಂಪೂರ್ಣವಾಗಿದೆ. ಈ ಹಿನ್ನೆಲೆ ರಾಮ ಜನ್ಮ ಭೂಮಿ ಟ್ರಸ್ಟ್ ನಿರ್ಮಾಣ ಕಾರ್ಯ ಆರಂಭವಾದ ಬಳಿಕ ಮೊಲದ ಬಾರಿಗೆ ನಿರ್ಮಾಣ ಕಾರ್ಯದ ಚಿತ್ರವನ್ನು ಬಹಿರಂಗ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಅಧಿಕಾರಿಗಳು ಶೀಘ್ರದಲ್ಲೇ ರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗಲಿದೆ. ಮುಂದಿನ 2024 ರ ಲೋಕ ಸಭೆ ಚುನಾವಣೆಗೂ ಮುನ್ನ ರಾಮ ಮಂದಿರವು ಭಕ್ತರಿಗಾಗಿ ತೆರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ 5 ರಂದು ರಾಮ ಮಂದಿರ ನಿರ್ಮಾಣ ಕಾರ್ಯವು ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯು ಈ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದಾರೆ. 2023 ರ ಡಿಸೆಂಬರ್ ಒಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗುವ ನಿರೀಕ್ಷೆಯಿದೆ.
ಯುಪಿ ಸಿಎಂ ಜೊತೆ ಅಯೋಧ್ಯೆ ಅಭಿವೃದ್ಧಿ ಯೋಜನೆಯ ದೃಷ್ಟಿಕೋನ ವಿಮರ್ಶಿಸಿದ ಪ್ರಧಾನಿ
ನಿರ್ಮಾಣದ ಉಸ್ತುವಾರಿ ಅಧಿಕಾರಿಯೊಬ್ಬರು "ದೇವಾಲಯದ ಸಂಕೀರ್ಣದೊಳಗೆ 10 ಎಕರೆಗಳಷ್ಟು ಭೂಮಿಗೆ ಬರುವ ಮೂರು ಅಂತಸ್ತಿನ ರಚನೆಗೆ ಬೆಂಬಲವಾಗಿ 47 ಪದರಗಳ ಕಾಂಕ್ರೀಟ್ ಅನ್ನು ಭರ್ತಿ ಮಾಡಲಾಗಿದೆ," ಎಂದು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
"ಶಿಲಾನ್ಯಾಸ ಕಾರ್ಯಕ್ರಮದ ಬಳಿಕ, ಸಡಿಲವಾಗಿರುವ ಮಣ್ಣಿನ ಭಾಗವನ್ನು ತೆಗೆಯುವ ಹಾಗೂ ಕಸವನ್ನು ತೆಗೆಯುವ ನಿಟ್ಟಿನಲ್ಲಿ ನಾವು ಸುಮಾರು 40 ಅಡಿ ಅಗೆಸಿದ್ದೇವೆ. ನಾವು ಸರಿಯಾದ ಗಟ್ಟಿಯಾದ ನೆಲಪಾಯವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರಿಯಾದ ಗಟ್ಟಿಯಾದ ಮಣ್ಣು ಲಭಿಸುವವರೆಗೂ ಅಗೆದಿದ್ದೇವೆ. ಬಳಿಕ ಕಾಂಕ್ರಿಟ್ ಅನ್ನು ಹಾಕಿದ್ದೇವೆ," ಎಂದು ಲಾರ್ಸನ್ ಮತ್ತು ಟ್ಯೂಬ್ರೊದ ಯೋಜನೆ ನಿರ್ವಾಹಕ ಬಿನೋದ್ ಮೆಹ್ತಾ ಹೇಳಿದ್ದಾರೆ. "ಎಲ್ಲಾ 47 ಲೇಯರ್ಗಳು ಒಂದು ಅಡಿ ಎತ್ತರವಿದೆ. ಸ್ತಂಭವು 60 ಅಡಿ ಎತ್ತರವಿರಲಿದೆ," ಎಂದು ಕೂಡಾ ಮಾಹಿತಿ ನೀಡಿದ್ದಾರೆ.
ರಾಜಸ್ಥಾನದಿಂದ ಸುಮಾರು ನಾಲ್ಕು ಲಕ್ಷ ಅಡಿ ಕಲ್ಲು ಮತ್ತು ಅಮೃತಶಿಲೆಯನ್ನು ಗರ್ಭಗುಡಿಯ ಮೇಲೆ 161 ಅಡಿ ಎತ್ತರದ ಕಟ್ಟಡಕ್ಕೆ ಬಳಸಲಾಗಿದೆ. ಉಕ್ಕು ಅಥವಾ ಇಟ್ಟಿಗೆಗಳ ಬಳಕೆಯನ್ನು ರಾಮ ಮಂದಿರದಲ್ಲಿ ಮಾಡಲಾಗುವುದಿಲ್ಲ. 360 ಅಡಿX235 ಅಡಿ ರಚನೆಯು ನೆಲ ಮಹಡಿಯಲ್ಲಿ 160 ಅಂಕಣಗಳನ್ನು, ಮೊದಲ ಮಹಡಿಯಲ್ಲಿ 132 ಅಂಕಣಗಳನ್ನು ಮತ್ತು ಎರಡನೇ ಮಹಡಿಯಲ್ಲಿ 74 ಅಂಕಣಗಳನ್ನು ಹೊಂದಿರುತ್ತದೆ. ಹಾಗೆಯೇ ಐದು "ಮಂಟಪಗಳು" ಇರುತ್ತದೆ.
ರಾಮಮಂದಿರ ಟ್ರಸ್ಟ್ ಸದಸ್ಯರ ಮೇಲೆ ಭೂ ಕಬಳಿಕೆ ಆರೋಪಗೈದ ಪತ್ರಕರ್ತನ ವಿರುದ್ಧ ಪ್ರಕರಣ ದಾಖಲು
ದೇವಾಲಯದ ಸಂಕೀರ್ಣವು ಯಾತ್ರಾರ್ಥಿಗಳಿಗೆ ತಂಗಲು ಕೇಂದ್ರ, ಮ್ಯೂಸಿಯಂ, ಇತಿಹಾಸದ ವಿಚಾರಗಳನ್ನು ಒಳಗೊಂಡ ಗ್ರಂಥಾಲಯ, ಸಂಶೋಧನಾ ಕೇಂದ್ರ, ಸಭಾಂಗಣ, ಜಾನುವಾರುಗಳ ಗೋದಾಮ, ಪ್ರಾರ್ಥನೆ ಸಲ್ಲಿಸುವ ಸ್ಥಳ, ಆಡಳಿತ ಕಟ್ಟಡ ಮತ್ತು ಅರ್ಚಕರಿಗೆ ಕೊಠಡಿಗಳನ್ನು ಒಳಗೊಂಡಿರುತ್ತದೆ. "ಕುಬೇರ ತಿಲಾ" ಮತ್ತು "ಸೀತಾ ಕೂಪ" ದಂತಹ ಪಾರಂಪರಿಕ ಸ್ಥಳವನ್ನು ಸಂರಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ ಯೋಜನೆಗಳನ್ನು ಕೂಡಾ ಈ ರಾಮ ಮಂದಿರ ನಿರ್ಮಾಣ ಕಾರ್ಯದ ಜೊತೆಗೆ ಮಾಡಲಾಗಿದೆ.
ರಾಮ ಮಂದಿರ ನಿರ್ಮಾಣ ಕಾರ್ಯವು ಹಲವಾರು ವರ್ಷಗಳ ವಿವಾದದ ಬಳಿಕ ಆರಂಭವಾಗಿದೆ. 2019 ರಲ್ಲಿ ಸುಪ್ರೀಂ ಕೋರ್ಟ್ ರಾಮಲಲ್ಲಾನ ಪರವಾಗಿ ತೀರ್ಪು ನೀಡಿದ ಬಳಿಕ ರಾಮ ಮಂದಿರ ಕಾರ್ಯಕ್ಕೆ ಆರಂಭಕ್ಕೆ ಸೂಚನೆ ದೊರೆದಂತೆ ಆಗಿದ್ದು, ಈಗ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇನ್ನು ಸುಪ್ರೀಂ ಕೋರ್ಟ್ ತನ್ನ ಈ ಆದೇಶದಲ್ಲೇ ಮುಸ್ಲಿಮರಿಗೆ ಮಸೀದಿ ನಿರ್ಮಾಣಕ್ಕೂ ಜಾಗವನ್ನು ನೀಡಬೇಕು ಎಂದು ಹೇಳಿದೆ. ಅದರಂತೆ ಭೂಮಿಯನ್ನು ನೀಡಲಾಗಿದೆ.
ಇನ್ನು ಈ ಹಿಂದೆ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ನೋಡಿಕೊಳ್ಳುತ್ತಿರುವ ರಾಮ ಜನ್ಮ ಭೂಮಿ ಟ್ರಸ್ಟ್, ಭೂ ಹಗರಣವನ್ನು ಮಾಡಿದೆ ಎಂಬ ಆರೋಪವನ್ನು ಹೊತ್ತಿದೆ. ಕಳೆದ ಜೂನ್ ತಿಂಗಳಿನಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಸಮಾಜವಾದಿ ಪಕ್ಷವು, "ಬಿಜೆಪಿ ನಾಯಕರು ಅಯೋಧ್ಯೆಯಲ್ಲಿ ಸುಮಾರು 890 ಸ್ಕೇರ್ ಮೀಟರ್ ಭೂಮಿಯನ್ನು 20 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದಾರೆ ಹಾಗೂ ಬಳಿಕ ಈ ಭೂಮಿಯನ್ನು ರಾಮ ಮಂದಿರ ಟ್ರಸ್ಟ್ಗೆ ಸುಮಾರು 2.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಈ ಮೂಲಕ 79 ದಿನದಲ್ಲೇ ಸುಮಾರು 1,250 ಪಟ್ಟು ಅಧಿಕ ಲಾಭವನ್ನು ಪಡೆದಿದ್ದಾರೆ," ಎಂದು ಆರೋಪ ಮಾಡಲಾಗಿದೆ. ಕಾಂಗ್ರೆಸ್ ಕೂಡಾ ಈ ಆರೋಪವನ್ನು ಮಾಡಿತ್ತು.
ಈ ಬಗ್ಗೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಣ್ದೀಪ್ ಸಿಂಗ್ ಸುರ್ಜೆವಾಲಾ, "ರಾಮ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಪಡೆದು ಕೊಂಡಿರುವ ದೇಣಿಯಲ್ಲಿ ಬಿಜೆಪಿಯು ಲೂಟಿ ಮಾಡುವುದರಲ್ಲಿ ಸಹಭಾಗಿತ್ವವನ್ನು ಹೊಂದಿದೆ ಎಂಬುವುದು ಸ್ಪಷ್ಟವಾಗಿದೆ. ದಿನ ನಿತ್ಯ ಸಂಗ್ರಹವಾಗುತ್ತಿರುವ ದೇಣಿಗೆಯಲ್ಲಿ ಬಿಜೆಪಿಯು ಲಜ್ಜೆಗೆಟ್ಟು ಲೂಟಿಯನ್ನು ಮಾಡುತ್ತಿದೆ ಎಂಬುವುದನ್ನು ಪ್ರತಿಬಿಂಬಿಸುತ್ತಿದೆ," ಎಂದು ದೂರಿದ್ದರು.
(ಒನ್ ಇಂಡಿಯಾ ಸುದ್ದಿ)