ಪ್ರಧಾನಿ 'ಮನ್ ಕೀ ಬಾತ್' ಮಾತಿಗೆ ರಾಹುಲ್ ಗಾಂಧಿ ತಿರುಗೇಟು
ನವದೆಹಲಿ, ಜೂನ್ 27: ಕೊರೊನಾವೈರಸ್ ಲಸಿಕೆಗಳ ಕುರಿತು ಹರಡುತ್ತಿರುವ ಊಹಾಪೋಹ ಮತ್ತು ನಕಾರಾತ್ಮಕ ವದಂತಿಗಳಿಗೆ ಕಿವಿಗೊಡದೇ ನಮ್ಮ ವಿಜ್ಞಾನಿಗಳ ಮೇಲೆ ವಿಶ್ವಾಸವಿಟ್ಟು ಪ್ರತಿಯೊಬ್ಬರು ಕೊವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳಿರಿ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಿರುಗೇಟು ಕೊಟ್ಟಿದ್ದಾರೆ.
ಭಾನುವಾರ ಮನ್ ಕೀ ಬಾತ್ 78ನೇ ರೇಡಿಯೋ ಸಂಚಿಕೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೊವಿಡ್-19 ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ "ದೇಶದಲ್ಲಿ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳುವ ಸಂದೇಶ ಸಾರುವುದಕ್ಕೂ ಮೊದಲು, ಲಸಿಕೆ ಕೊರತೆಯನ್ನು ಕೊನೆಗಾಣಿಸಿರಿ," ಎಂದು ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಒಲಂಪಿಕ್ ಬಗ್ಗೆ ಮನ್ ಕೀ ಬಾತ್ನಲ್ಲಿ ಮಾತನಾಡಿದ ಮೋದಿ
ಭಾರತದಾದ್ಯಂತ ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಕೇಂದ್ರ ಸರ್ಕಾರ ವೈಫಲ್ಯ ಅನುಭವಿಸುತ್ತಿದೆ ಎಂದು ವಿರೋಧ ಪಕ್ಷ ಮೊದಲಿನಿಂದಲೂ ಆರೋಪಿಸುತ್ತಿವೆ. ಕೊವಿಡ್-19 ಲಸಿಕೆ ಹಂಚಿಕೆ ಮತ್ತು ವಿತರಣೆ ಪ್ರಮಾಣದ ಬಗ್ಗೆ ಸಂಸದ ರಾಹುಲ್ ಗಾಂಧಿ ಮತ್ತೊಮ್ಮೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ.
काम की बात सिर्फ़ एक- वैक्सीन की कमी ख़त्म करो!
— Rahul Gandhi (@RahulGandhi) June 27, 2021
बाक़ी सब ध्यान भटकाने के बहाने हैं।#MannKiBaat
ಕೊರೊನಾವೈರಸ್ ಲಸಿಕೆ ಬಗ್ಗೆ ಮೋದಿ ಹೇಳಿದ್ದೇನು?:
"ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ದುಲಾರಿಯಾ ಗ್ರಾಮದ ನಿವಾಸಿಗಳ ಜೊತೆಗೆ ಸ್ವತಃ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅವರ ಅನುಮಾನಗಳನ್ನು ತೊರೆದು ಲಸಿಕೆ ಪಡೆದುಕೊಳ್ಳುವಂತೆ ಲಸಿಕೆ ನೀಡಿದರು. 100 ವರ್ಷದ ಆಸುಪಾಸಿನಲ್ಲಿ ಇರುವ ನಮ್ಮ ತಾಯಿ ಕೂಡ ಎರಡೂ ಡೋಸ್ ಕೊವಿಡ್-19 ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಪ್ರಜೆಗಳು ವದಂತಿಗಳಿಗೆ ಕಿವಿಗೊಡದೇ ವಿಜ್ಞಾನ ಮತ್ತು ವಿಜ್ಞಾನಿಗಳ ಮೇಲೆ ವಿಶ್ವಾಸವಿಟ್ಟು ಲಸಿಕೆ ಪಡೆದುಕೊಳ್ಳಿರಿ," ಎಂದು ಹೇಳಿದ್ದರು.