ಮೇಘಾಲಯ ಗಣಿ: 42 ದಿನದ ನಂತರ 15 ಕಾರ್ಮಿಕರಲ್ಲಿ 1 ಶವ ಹೊರತಂದರು
ಮೇಘಾಲಯದ ಪೂರ್ವ ಜೈನ್ ತಿಯಾ ಬೆಟ್ಟ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿಕೊಂಡಿದ್ದ ಹದಿನೈದು ಕಾರ್ಮಿಕರಲ್ಲಿ ಮೊದಲ ಶವವನ್ನು 42 ದಿನಗಳ ನಂತರ, ಗುರುವಾರ ಹೊರ ತೆಗೆಯಲಾಗಿದೆ. ಮಂಗಳವಾರದಂದು ದೇಹವು ಭಾರತೀಯ ನೌಕಾಸೇನೆಯ ರಿಮೋಟ್ಲಿ ಆಪರೇಟೆಡ್ ವೆಹಿಕಲ್ ನಿಂದ ಜಾರಿಹೋಗಿತ್ತು. ಬುಧವಾರ ಸಂಜೆ ದೇಹವು ಪತ್ತೆಯಾಗಿತ್ತು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ ಡಿಆರ್ ಎಫ್) ಹಾಗೂ ಭಾರತೀಯ ನೌಕಾ ಸೇನೆಯು ಜಂಟಿ ಕಾರ್ಯಾಚರಣೆ ನಡೆಸಿ, ದೇಹವನ್ನು ಹೊರಕ್ಕೆ ತರಲಾಗಿದೆ. ಎನ್ ಡಿಆರ್ ಎಫ್ ನ ಇಬ್ಬರು, ಭಾರತೀಯ ನೌಕಾ ಸೇನೆಯ ಮೂವರು ಹಾಗೂ ನಾಗರಿಕ ಆಸ್ಪತ್ರೆಯ ಒಬ್ಬರು ಸಿಬ್ಬಂದಿ ಸೇರಿ ಶವವನ್ನು ಹೊರತೆಗೆದಿದ್ದಾರೆ.
ಮೇಘಾಲಯದ ನಿಗೂಢ ಗಣಿಯಲ್ಲಿ ಕೊನೆಗೂ ಪತ್ತೆಯಾದ ಶವ!
355 ಅಡಿ ಆಳದಲ್ಲಿ ಮುಖ್ಯ ಶಾಫ್ಟ್ ಇದ್ದು, 170 ಅಡಿ ಆಳದಿಂದ ಶವವನ್ನು ಹೊರಕ್ಕೆ ತೆಗೆಯಲಾಗಿದೆ. ಉಸ್ತುವಾರಿ ವಹಿಸಿರುವ ಅಧಿಕಾರಿ ಪಿ.ಎಸ್.ಸಯಿಪುಂಗ್ ಅವರಿಗೆ ಶವವನ್ನು ಹಸ್ತಾಂತರ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಕ್ಲಿರಿಯಟ್ ಆಸ್ಪತ್ರೆಗೆ ಶವವನ್ನು ರವಾನಿಸಲಾಗಿದೆ.
ಕನಿಷ್ಠ ಹದಿನೈದು ಮಂದಿ ಕಾರ್ಮಿಕರು ಡಿಸೆಂಬರ್ ಹದಿಮೂರನೇ ತಾರೀಕು ಮೇಘಾಲಯದ ಪೂರ್ವ ಜೈಂತಿಯಾ ಬೆಟ್ಟ ಪ್ರದೇಶದ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಸಿಲುಕಿಕೊಂಡಿದ್ದರು. ಪೈಪ್, ಕೇಬಲ್, ಅವಶೇಷಗಳು ಇವೆಲ್ಲ ಇದ್ದುದ್ದರಿಂದ ರಕ್ಷಣಾ ಕಾರ್ಯಾಚರಣೆ ನಡೆಸುವ ತಂಡಕ್ಕೆ ಕಾರ್ಮಿಕರನ್ನು ಪತ್ತೆ ಹಚ್ಚುವುದೇ ಸವಾಲಾಗಿ ಪರಿಣಮಿಸಿತ್ತು.
ಮುಖ್ಯ ಕಲ್ಲಿದ್ದಲು ಗಣಿಯ ನೀರಿನಲ್ಲಿ ದೇಹಗಳು ತೇಲುತ್ತಿರಬಹುದು ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ತಂಡದ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲಿನ ನೀರನ್ನು ಹೊರಗೆ ಹಾಕುವ ಪ್ರಯತ್ನ ಕೂಡ ವಿಫಲವಾಗಿದೆ. ಜನವರಿ ಹದಿನಾರನೇ ತಾರೀಕು ಒಂದು ಕಡೆ ಆರ್ ಒವಿಗೆ ದೇಹ ಪತ್ತೆಯಾಗಿತ್ತು. ಅದು ಕೊಳೆತ ಸ್ಥಿತಿಯಲ್ಲಿತ್ತು. ಗಣಿ ಕಾರ್ಮಿಕರ ಕುಟುಂಬಕ್ಕೆ ಶವದ ಗುರುತು ಪತ್ತೆ ಮಾಡಲು ಸಹಕರಿಸುವಂತೆ ಕೇಳಲಾಗಿತ್ತು.
19 ನೇ ದಿನ, ಗಣಿ ತಳ ತಲುಪಿದ ರಕ್ಷಣಾ ಸಿಬ್ಬಂದಿ... ಕಾರ್ಮಿಕರು ಮಾತ್ರ ನಾಪತ್ತೆ!
ಗಣಿಯೊಳಗೆ ಕಾರ್ಮಿಕರ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮೇಘಾಲಯ ಸರಕಾರ ಸುಪ್ರೀಂ ಕೋರ್ಟ್ ಗೆ ಕಳೆದ ಸೋಮವಾರ ತಿಳಿಸಿದೆ. ಈ ದುರ್ಘಟನೆ ಸಂಭವಿಸಿ ತಿಂಗಳಿಗಿಂತ ಹೆಚ್ಚು ಕಾಲವಾದ್ದರಿಂದ ಕಾರ್ಮಿಕರು ಬದುಕಿರುವ ಸಾಧ್ಯತೆಗಳಿಲ್ಲ ಎಂದೇ ಭಾವಿಸಲಾಗಿದೆ.