ತಮಿಳುನಾಡು: ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಸಿಕ್ಕಿ 9 ಜನ ದುರ್ಮರಣ
ಥೇಣಿ, ಮಾರ್ಚ್ 12: ತಮಿಳುನಾಡಿನ ಥೇಣಿ ಜಿಲ್ಲೆಯ ಕುರಂಗಣಿ ಎಂಬಲ್ಲಿ ಮಾ.11ರಂದು ಇದ್ದಕ್ಕಿದ್ದಂತೆ ಆರಂಭವಾದ ಕಾಡ್ಗಿಚ್ಚಿಗೆ 9 ಜನ ಮೃತರಾಗಿದ್ದು, 27 ಜನರನ್ನು ರಕ್ಷಣೆ ಮಾಡಲಾಗಿದೆ.
ಮೃತರನ್ನು ನಾಲ್ವರು ಮಹಿಳೆಯರು, ನಾಲ್ವರು ಪುರುಷರು ಮತ್ತು ಒಂದು ಮಗು ಎಂದು ಗುರುತಿಸಲಾಗಿದೆ. ಸದ್ಯಕ್ಕೆ 27 ಜನರನ್ನು ರಕ್ಷಿಸಲಾಗಿದ್ದು, ಅವರಲ್ಲಿ 10 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದರೆ, 8 ಜನರಿಗೆ ಗಂಭೀರ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕಾಡಿಗೆ ಸುಮಾರು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಟ್ರೆಕ್ಕಿಂಗ್ ಗೆಂದು ಹೋಗಿದ್ದರು. ಈ ಸಮಯದಲ್ಲಿ ಹೊತ್ತಿಕೊಂಡ ಬೆಂಕಿಯಿಂದಾಗಿ ವಿದ್ಯಾರ್ಥಿಗಳು ಕಾಡಿನಲ್ಲೇ ಸಿಲುಕಿಕೊಂಡರು. ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಗಳು ನಿನ್ನೆಯಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದು, ಇಂದೂ ಕಾರ್ಯಾಚರಣೆ ಮುಂದುವರಿದಿದೆ.
ತಮಿಳುನಾಡು: ಕಾಡ್ಗಿಚ್ಚಿನಲ್ಲಿ ಸಿಲುಕಿದ 20 ವಿದ್ಯಾರ್ಥಿಗಳು, ಕೆಲವರ ರಕ್ಷಣೆ
ಚೆನ್ನೈ ಮೂಲದ ಟ್ರೆಕ್ಕಿಂಗ್ ಕ್ಲಬ್ ವೊಂದು ಕುರಂಗಣಿಯಿಂದ ಪಶ್ಚಿಮ ಘಟ್ಟದ ಬೊಡಿ ಎಂಬಲ್ಲಿಗೆ ಟ್ರೆಕ್ಕಿಂಗ್ ಅನ್ನು ಆಯೋಜಿಸಿತ್ತು. ಶುಕ್ರವಾರ ರಾತ್ರಿ ಟ್ರೆಕ್ಕಿಂಗ್ ಆರಂಭಿಸಿದ್ದ ತಂಡ ಶನಿವಾರ ಸಂಜೆಯ ಹೊತ್ತಿಗೆ ಕೇರಳ ಗಡಿ ತಲುಪಿತ್ತು. ಭಾನುವಾರ ಬೆಳಿಗ್ಗೆ ಕುರಂಗಣಿಯಿಂದ ಮತ್ತೆ ಟ್ರೆಕ್ಕಿಂಗ್ ಆರಂಭಿಸಿದ್ದ ಭಾನವಾರ ಸಂಜೆಯ ಹೊತ್ತಿಗೆ ಬೊಡಿಗೆ ತಲುಪಿ, ಚೆನ್ನೈ ಗೆ ವಾಪಸ್ಸಾಗಬೇಕಿತ್ತು.
ಆದರೆ ಭಾನುವಾರ ಮಧ್ಯಾಹ್ನ ಈ ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ 20 ಜನರೂ ಕಾಡಿನ ನಡುವಲ್ಲಿ ಸಿಲುಕಿಕೊಂಡಿದ್ದರು. ಟ್ರೆಕ್ಕಿಂಗ್ ಆಯೋಜಿಸಿದ್ದ ಕ್ಲಬ್ ಅರಣ್ಯ ಇಲಾಖೆಯ ಅನುಮತಿ ಪಡೆದಿಲ್ಲದ ಕಾರಣ ಅರಣ್ಯ ಇಲಾಖೆಗೂ ಕಾಡಿನಲ್ಲಿ ಇಪ್ಪತ್ತು ಜನ ಸಿಲುಕಿರುವ ಕುರಿತು ಮಾಹಿತಿ ಇರಲಿಲ್ಲ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ವಿಷಯ ತಿಳಿಯುತ್ತಿದ್ದಂತೆಯೇ ರಕ್ಷಣಾ ಕಾರ್ಯಕ್ಕಾಗಿ ತಮಿಳುನಾಡು ಸರ್ಕಾರ ಭಾರತೀಯ ವಾಯುಸೇನೆಯ ಸಹಾಯ ಬೇಡಿತು. ಇದಕ್ಕೆ ಸ್ಪಂದಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಾಯುಸೇನೆಯ ಹೆಲಿಕಾಪ್ಟರ್ ಗಳನ್ನು ಕಳಿಸಿಕೊಟ್ಟರು. ನಂತರ 15 ಜನರನ್ನು ರಕ್ಷಿಸಲಾಯಿತು. ಆದರೆ 9 ಜನ ಮೃತರಾಗಿದ್ದಾರೆಂದು ಅರಣ್ಯ ಇಲಾಖೆ ಖಚಿತಪಡಿಸಿದೆ. ಮೃತರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ.