ರಾಹುಲ್ ವಿರುದ್ಧ ಹೇಳಿಕೆ ನೀಡಿದ ಸ್ವಾಮಿ ವಿರುದ್ಧ ಎಫ್ಐಆರ್
ನವದೆಹಲಿ, ಜುಲೈ 07: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ತಪ್ಪು ಹೇಳಿಕೆ ನೀಡಿದ ಆರೋಪದ ಮೇಲೆ ಸಂಸದ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಛತ್ತೀಸ್ ಗಢ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎಫ್ಐ ಆರ್ ಹಾಕಿದ್ದಾರೆ.
ಜಾಶ್ ಪುರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪವನ್ ಅಗರವಾಲ್ ಅವರು ನೀಡಿದ ದೂರಿನ ಮೇರೆಗೆ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಪಟ್ಟಹಾಲ್ಗಾಂವ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ದಾಖಲಿಸಿದ್ದಾರೆ ಎಂದು ಜಾಶ್ ಪುರ್ ಎಸ್ಪಿ ಶಂಕರ್ ಲಾಲ್ ಬಘೆಲ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಏನಿದು ಪ್ರಕರಣ?: 'ರಾಹುಲ್ ಗಾಂಧಿ ಅವರು ಕೊಕೈನ್(ಮಾದಕ ವಸ್ತು) ಸೇವಿಸುತ್ತಾರೆ' ಎಂದು ಬಿಜೆಪಿ ಮುಖಂಡ ಸ್ವಾಮಿ ಅವರು ಆರೋಪ ಹೊರೆಸಿದ್ದಾರೆ ಆದರೆ, ಈ ಬಗ್ಗೆ ಯಾವುದೇ ದಾಖಲೆ, ಸಾಕ್ಷಿ ಒದಗಿಸಿಲ್ಲ, ಸುಳ್ಳು ಆರೋಪ ಮಾಡಿದ್ದಾರೆ, ಈ ರೀತಿ ಆರೋಪ ಮಾಡಲು ಯಾವುದೇ ಹಕ್ಕಿಲ್ಲ ಎಂದು ಅಗರವಾಲ್ ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.
'ಪ್ರಿಯಾಂಕಾ ಗಾಂಧಿ ಮಾನಸಿಕ ಕಾಯಿಲೆ ಇದೆ, ರಾಜಕೀಯಕ್ಕೆ ಸರಿ ಹೊಂದಲ್ಲ'
ತಾವು ನೀಡಿದ ಹೇಳಿಕೆ ಸುಳ್ಳು ಎಂದು ಸ್ವಾಮಿ ಅವರಿಗೂ ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಈ ರೀತಿ ಹೇಳಿಕೆ ನೀಡುವ ಮೂಲಕ ಪಕ್ಷಗಳ ನಡುವೆ ದ್ವೇಷ ಹೆಚ್ಚಿಸಿದ್ದಾರೆ ಅಲ್ಲದೇ ಸಾರ್ವಜನಿಕವಾಗಿ ದ್ವೇಷಪೂರಿತ ವಾತಾವರಣ ಉಂಟಾಗುವಂತೆ ಎಂದು ದೂರಿದ್ದಾರೆ.
ಐಪಿಸಿ ಸೆಕ್ಷನ್ 504, 505(2), 511 ಅನ್ವಯ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಜಾರಿಯಲ್ಲಿದೆ. ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್ ಎಸ್ ಯುಐ ಸೇರಿದಂತೆ ವಿವಿಧ ಕಾಂಗ್ರೆಸ್ ಸಮಿತಿಗಳು ಸ್ವಾಮಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿವೆ.