ಮುತಾಲಿಕ್ ವಿರುದ್ಧ ಎಫ್ಐಆರ್ ದಾಖಲಿಸಿದ ಕಾಂಗ್ರೆಸ್
ಗೋವಾ, ಮೇ29: ರಾಜ್ಯ ಕಾಂಗ್ರೆಸ್ ಪಕ್ಷವು ನಗರ ಪೊಲೀಸ್ ಠಾಣೆಯಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿದೆ. ಕೋಮು ದ್ವೇಷ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಗುರುವಾರ ಈ ದೂರು ದಾಖಲಿಸಲಾಗಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಅಖಿಲ ಭಾರತ ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡುವಾಗ ಪ್ರಮೋದ್ ಮುತಾಲಿಕ್ ಅವರು ಕೋಮು ದ್ವೇಶ ಪ್ರಚೋದನಕಾರಿ ಭಾಷಣ ಮಾಡಿದ್ದರೆಂದು ಆರೋಪಿಸಲಾಗಿದೆ. (ಅನಂತ್, ಜೋಶಿ ಸೋಲ್ಸಿ, ಭಾರತ ಗೆಲ್ಸಿ - ಮುತಾಲಿಕ್)
ಮುತಾಲಿಕ್ ಭಾಷಣದ ಉದ್ದೇಶ ಹಿಂದೂಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ನಡುವೆ ಕೋಮು ದ್ವೇಷ ಸೃಷ್ಟಿಸುವುದಾಗಿತ್ತು. ಈ ವಿಷಯದಲ್ಲಿ ಪೊಲೀಸರು ಸ್ವಯಂ ಪ್ರೇರಿತರಾಗಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹಾಗಾಗಿ ಸರಿಯಾದ ತನಿಖೆ ಕೋರಿ ನಾವೇ FIR ದಾಖಲಿಸಿದ್ದೇವೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ಸ್ 153, 153-A, 295A, 505(2) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ಸ್ 66A ಮತ್ತು 66 F ಅನುಸಾರ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ದುರ್ಗಾದಾಸ್ ಕಾಮತ್ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಮುತಾಲಿಕ್ ಅವರು ಕೋಮು ದ್ವೇಷ ಬಿತ್ತುತ್ತಾರೆ. ಅವರ ವಿರುದ್ಧ ಸರಿಯಾದ ಸಾಕ್ಷ್ಯಗಳಿದ್ದು ಯಾರಾದರೂ ದೂರು ದಾಖಲಿಸಿದರೆ ಪೊಲೀಸ್ ಅಧಿಕಾರಿಗಳು ಮುಂದಿನ ಕ್ರಮ ಜರುಗಿಸುತ್ತಾರೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯು ಇಂದು ದೂರು ನೀಡಿದೆ.