ಪ್ರಶಾಂತ್ ಕಿಶೋರ್ ಅಲ್ಲೇನಾದ್ರೂ ಕಂಡ್ರೆ ಹೇಳಿ, ಐದು ಲಕ್ಷ ಕೊಡ್ತೀವಿ
ಪ್ರಶಾಂತ್ ಕಿಶೋರ್ ಹುಡುಕಿಕೊಟ್ಟವರಿಗೆ 5ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಬರೆದಿರುವ ಬ್ಯಾನರ್ ಹಾಕಿದ ಸ್ಥಳೀಯ ಕಾಂಗ್ರೆಸ್ ಮುಖಂಡನನ್ನು ಪಕ್ಷದಿಂದ ಅಮಾನತುಗೊಳಿಸಿದ ಉತ್ತರಪ್ರದೇಶ ರಾಜ್ಯ ಕಾಂಗ್ರೆಸ್ ಘಟಕ.
ಲಕ್ನೋ, ಮಾ 21: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ, ನಂತರ ಬಿಹಾರದಲ್ಲಿ ನಿತೀಶ್ ಕುಮಾರ್ ಪರವಾಗಿ ರಾಜಕೀಯ ತಂತ್ರಗಾರಿಕೆ ರೂಪಿಸಿದ್ದ ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆ ಉತ್ತರಪ್ರದೇಶದಲ್ಲಿ 'ಕೈ'ಕೊಟ್ಟಿದ್ದರಿಂದ ಕಾಂಗ್ರೆಸ್ ಮುಖಂಡರೊಬ್ಬರು ಫುಲ್ ಗರಂ ಆಗಿದ್ದಾರೆ.
ಉತ್ತರಪ್ರದೇಶದ ಚುನಾವಣಾ ಫಲಿತಾಂಶದ ನಂತರ ಪ್ರಶಾಂತ್ ಕಿಶೋರ್ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿಕೊಟ್ಟವರಿಗೆ ಐದು ಲಕ್ಷ ರೂಪಾಯಿಗಳ ಇನಾಮು ನೀಡಲಾಗುವುದು ಎನ್ನುವ ಬ್ಯಾನರ್ ಅನ್ನು ಸ್ಥಳೀಯ ಕಾಂಗ್ರೆಸ್ ಮುಖಂಡ ರಾಜೇಶ್ ಸಿಂಗ್ ಎನ್ನುವವರು ಕಾಂಗ್ರೆಸ್ ಕಚೇರಿ ಮುಂದೆ ಹಾಕಿದ್ದರು. ಇದಕ್ಕೆ ಸಿಟ್ಟಾಗಿರುವ ಕಾಂಗ್ರೆಸ್ ರಾಜ್ಯ ಘಟಕ, ರಾಜೇಶ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಿದೆ.
ಪ್ರಶಾಂತ್ ಕಿಶೋರ್ ಮತ್ತು ತಂಡವನ್ನು ಚುನಾವಣಾ ತಂತ್ರಗಾರಿಕೆ ರೂಪಿಸಲು ಕಾಂಗ್ರೆಸ್ ಹೈಕಮಾಂಡ್ ನೇಮಿಸಿದಾಗಲೇ, ಮೂಲ ಕಾಂಗ್ರೆಸ್ಸಿಗರಿಂದ ಅಪಸ್ವರ ವ್ಯಕ್ತವಾಗಿತ್ತು. ಶೀಲಾ ದೀಕ್ಷಿತ್, ರಾಜ್ ಬಬ್ಬರ್ ಸಹಿತ ಹಿರಿಯ ಕಾಂಗ್ರೆಸ್ ಮುಖಂಡರು ಅಸಮಾಧಾನ ಹೊರಹಾಕಿದ್ದುಂಟು.
ಸಮಾಜವಾದಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರೂ, ಕಾಂಗ್ರೆಸ್ ಉತ್ತರಪ್ರದೇಶ ಚುನಾವಣೆಯಲ್ಲಿ ತೀರಾ ಕಳಪೆ ಪ್ರದರ್ಶನ ಮಾಡಿತ್ತು. ಇದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ಮುಖಂಡ, ಪ್ರಶಾಂತ್ ಕಿಶೋರ್ ಹುಡುಕಿಕೊಟ್ಟರೆ ಇನಾಮು ಕೊಡುವುದಾಗಿ ಬ್ಯಾನರ್ ಹಾಕಿದ್ದರು.
ಫಲಿತಾಂಶ ಬಳಿಕ ಪ್ರಶಾಂತ್ ಕಿಶೋರ್, ಎಲ್ಲೂ ಕಾಣಿಸುತ್ತಿಲ್ಲ. ಅವರನ್ನು ಹುಡುಕಿಕೊಟ್ಟವರಿಗೆ ಐದು ಲಕ್ಷ ರೂಪಾಯಿ ಬಹುಮಾನವನ್ನು ನೀಡಲಾಗುವುದು ಎನ್ನುವ ಬ್ಯಾನರ್ ಅನ್ನು ರಾಜೇಶ್ ಸಿಂಗ್ ಎನ್ನುವ ಸ್ಥಳೀಯ ಕಾಂಗ್ರೆಸ್ ಮುಖಂಡ ಲಕ್ನೋದಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂದೆ ಹಾಕಿದ್ದರು.
ಈ ವಿಚಾರ ಸ್ಥಳೀಯ ಕಾಂಗ್ರೆಸ್ ಮುಖಂಡರ ಗಮನಕ್ಕೆ ಬಂದಿದೆ. ಕೂಡಲೇ, ನವದೆಹಲಿಯ ಮುಖಂಡರನ್ನು ಸಂಪರ್ಕಿಸಿ, ಬ್ಯಾನರ್ ಹಾಕಿದ್ದ ಮುಖಂಡ ರಾಜೇಶ್ ಸಿಂಗ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.