ತೆರಿಗೆ ಕಡಿತ; ಮಾರ್ಚ್ ಮಧ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುತ್ತಾ?
ನವದೆಹಲಿ, ಮಾರ್ಚ್ 02: ದೇಶದಲ್ಲಿ ಕೆಲವು ದಿನಗಳಿಂದ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. 2021ರಲ್ಲಿ ತೈಲ ಬೆಲೆಯನ್ನು ಗಮನಿಸುವುದಾದರೆ, ವರ್ಷದ ಮೊದಲ ಎರಡು ತಿಂಗಳಲ್ಲಿಯೇ 26 ಬಾರಿ ಬೆಲೆ ಏರಿಕೆಯಾಗಿದೆ. ತೈಲಗಳ ಮೇಲಿನ ತೆರಿಗೆ ಹೆಚ್ಚಳ ಸಾಮಾನ್ಯ ಜನರ ಬದುಕಿಗೆ ಹೊಡೆತ ಕೊಟ್ಟಿದೆ. ಇದೀಗ ದಾಖಲೆಯ ಮಟ್ಟ ಮುಟ್ಟಿರುವ ಪೆಟ್ರೋಲ್, ಡೀಸೆಲ್ ಬೆಲೆ ಮೇಲಿನ ತೆರಿಗೆ ಕಡಿತಗೊಳಿಸುವ ಕುರಿತು ಹಣಕಾಸು ಸಚಿವಾಲಯ ಚಿಂತನೆ ನಡೆಸಿರುವುದಾಗಿ ತಿಳಿದುಬಂದಿದೆ.
ಕಳೆದ ಹತ್ತು ತಿಂಗಳಿನಿಂದಲೂ ಕಚ್ಚಾ ತೈಲದ ಬೆಲೆ ದ್ವಿಗುಣಗೊಂಡಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ದರ ಮುಟ್ಟುವಂತೆ ಮಾಡಿದೆ. ವಿಶ್ವದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ಗ್ರಾಹಕನೆನಿಸಿಕೊಂಡಿರುವ ಭಾರತದಲ್ಲಿ ಇಂಧನದ ಮೇಲೆ ಅಬಕಾರಿ ಸುಂಕ 32. 98ರೂಪಾಯಿಯಷ್ಟಿದೆ. ಈ ಸುಂಕವನ್ನು ತಗ್ಗಿಸಿದರೆ ಸಾಮಾನ್ಯ ಜನರ ಮೇಲಿನ ಹೊರೆ ಕೊಂಚ ಕಡಿಮೆಯಾಗಬಹುದು ಎಂಬ ಉದ್ದೇಶದೊಂದಿಗೆ ಹಣಕಾಸು ಸಚಿವಾಲಯ ತೆರಿಗೆ ಕಡಿತದ ಬಗ್ಗೆ ಆಲೋಚಿಸುತ್ತಿರುವುದಾಗಿ ತಿಳಿದುಬಂದಿದೆ.
ಮಾರ್ಚ್ ಮೊದಲ ದಿನ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?
ಮಾರ್ಚ್ 02ರಂದು ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ 91.17 ರೂ ಇದ್ದರೆ, ಡೀಸೆಲ್ ಬೆಲೆ 81.47ರೂ ತಲುಪಿದೆ. ಮುಂದೆ ಓದಿ...
ಕಳೆದ 12 ತಿಂಗಳಿನಿಂದ ತೈಲ ಬೆಲೆ ಏರಿಕೆ
ಕಳೆದ ವರ್ಷ ಕಾಣಿಸಿಕೊಂಡ ಕೊರೊನಾ ವೈರಸ್ ದೇಶದ ಆರ್ಥಿಕತೆ ಮೇಲೆ ಭಾರೀ ಪೆಟ್ಟು ನೀಡಿದೆ. ಕಳೆದ ಹನ್ನೆರಡು ತಿಂಗಳಿನಿಂದ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಎರಡು ಬಾರಿ ತೆರಿಗೆ ಏರಿಕೆ ಮಾಡಿದೆ. ಈ ಮೂಲಕ ತೈಲ ಬೆಲೆ ದಾಖಲೆ ಮಟ್ಟ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ 1.7 ರಷ್ಟು ಏರಿಕೆ ಕಂಡು 65.49 ಯುಎಸ್ ಡಾಲರ್ ಪ್ರತಿ ಬ್ಯಾರೆಲ್ ನಷ್ಟಿದೆ. ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವುದರಿಂದ ಭಾರತದಂಥ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರ ಪರಿತಪಿಸುತ್ತಿದೆ.
ಮಾರ್ಚ್ ಮಧ್ಯದಲ್ಲಿ ನಿರ್ಧಾರ ಪ್ರಕಟ
ತೆರಿಗೆ ಕಡಿತಗೊಳಿಸುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯ ಕೆಲವು ರಾಜ್ಯಗಳು, ತೈಲ ಕಂಪನಿಗಳು, ತೈಲ ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ತೆರಿಗೆ ಹೊರೆ ಕಡಿಮೆ ಮಾಡಲು ಪರಿಣಾಮಕಾರಿ ಮಾರ್ಗ ಕಂಡುಕೊಳ್ಳುವ ಯತ್ನದಲ್ಲಿರುವುದಾಗಿ ಮೂಲಗಳು ತಿಳಿದುಬಂದಿದೆ. ಈ ಬೆಲೆಯನ್ನು ತಗ್ಗಿಸುವ ಅಥವಾ ಇನ್ನಷ್ಟು ಏರಿಕೆಯಾಗದಂತೆ ತಡೆಯುವ ಯತ್ನದಲ್ಲಿದ್ದು, ಮಾರ್ಚ್ ಮಧ್ಯದಲ್ಲಿ ಈ ಬಗ್ಗೆ ನಿರ್ಧಾರ ಪ್ರಕಟಗೊಳ್ಳುವುದಾಗಿ ಸಚಿವಾಲಯದ ಮೂಲಗಳು ತಿಳಿಸಿವೆ.
ಬೆಂಗಳೂರು ಸೇರಿದಂತೆ ಜಿಲ್ಲಾಕೇಂದ್ರಗಳಲ್ಲಿ ಮಾ.1ರಂದು ಇಂಧನ ದರ
ತೆರಿಗೆ ರಚನೆಯಲ್ಲಿ ಬದಲಾವಣೆಯಾಗದಂತೆ ಕ್ರಮ
ತೆರಿಗೆ ಕಡಿತಗೊಳಿಸುವ ಮುನ್ನ ತೈಲ ಬೆಲೆಯನ್ನು ನಿರ್ದಿಷ್ಟಗೊಳಿಸುವತ್ತ ಸರ್ಕಾರ ಯೋಚಿಸುತ್ತಿದ್ದು, ಮುಂದೆ ಕಚ್ಚಾ ತೈಲ ಬೆಲೆ ಏರಿಕೆಯಾದರೂ ತೆರಿಗೆ ರಚನೆಯಲ್ಲಿ ಯಾವುದೇ ಬದಲಾವಣೆಯಾಗದಂತೆ ತಡೆಯಲು ಕ್ರಮ ಕೈಗೊಳ್ಳುತ್ತಿದೆ. ಭಾನುವಾರವಷ್ಟೇ, "ತೈಲ ಬೆಲೆ ಮೇಲಿನ ತೆರಿಗೆಯನ್ನು ಯಾವಾಗ ಕಡಿತಗೊಳಿಸುತ್ತೇವೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೈಲ ಬೆಲೆ ತೆರಿಗೆ ತಗ್ಗಿಸುವ ಕುರಿತು ಮಾತುಕತೆ ನಡೆಸಬೇಕಿದೆ" ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಮಾರ್ಚ್ ಎರಡನೇ ವಾರದಲ್ಲಿ ಸಭೆ
ಮಾರ್ಚ್ ಎರಡನೇ ವಾರದಲ್ಲಿ ಒಪೆಕ್ ರಾಷ್ಟ್ರಗಳೊಂದಿಗೆ ಹಾಗೂ ಪ್ರಮುಖ ತೈಲ ಉತ್ಪಾದಕರೊಂದಿಗೆ ಭಾರತ ಸರ್ಕಾರ ಸಭೆ ನಡೆಸಲಿದ್ದು, ನಂತರ ನಿರ್ಧಾರ ಪ್ರಕಟಗೊಳಿಸಲಿದೆ. ಭಾರತದಂಥ ಬೃಹತ್ ಆರ್ಥಿಕತೆ ಮೇಲೆ ಪೆಟ್ಟು ನೀಡಿರುವ ದುಬಾರಿ ಕಚ್ಚಾ ತೈಲ ಬೆಲೆ ಮೇಲಿನ ಉತ್ಪಾದನಾ ವೆಚ್ಚವನ್ನು ಸರಳಗೊಳಿಸುವಂತೆ ಭಾರತ ಕೇಳಿಕೊಂಡಿರುವುದಾಗಿಯೂ ತಿಳಿದುಬಂದಿದೆ.