ಅಪ್ಪ ಸತ್ತರೂ ಕರ್ತವ್ಯವೇ ಮುಖ್ಯವೆಂದ ಅಧಿಕಾರಿ
ನವದೆಹಲಿ, ಜನವರಿ 31: ಮನುಷ್ಯ ಭಾವನಾಜೀವಿ. ಕುಟುಂಬ, ಸಂಬಂಧಗಳ ನಡುವೆ ಹೆಚ್ಚಿನ ಬಾಂಧವ್ಯ ಮತ್ತು ನಂಬಿಕೆ. ಆದರೆ ಕೆಲವರು ಕರ್ತವ್ಯವೇ ಮೊದಲು, ಬಳಿಕ ಸಂಬಂಧಗಳು ಎನ್ನುತ್ತಾರೆ. ತಮಗೆ ನಿಯೋಜಿಸಲಾಗಿರುವ ಕೆಲಸವನ್ನು ಪೂರೈಸದೆಯೇ ಬಿಡುವುದಿಲ್ಲ ಎಂದು ಕುಟುಂಬದ ಸುಖ ದುಃಖಗಳ ಕ್ಷಣಗಳನ್ನು ತ್ಯಾಗ ಮಾಡಿ ವೃತ್ತಿಬದ್ಧತೆ ಮೆರೆಯುವವರಿದ್ದಾರೆ. ಅಂತಹದ್ದೊಂದು ವೃತ್ತಿಬದ್ಧತೆಯ ಘಟನೆ ಮನಮಿಡಿಯುವಂತೆ ಮಾಡಿದೆ.
ಕೇಂದ್ರ ಸರ್ಕಾರ ಶನಿವಾರ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದೆ. ಬಜೆಟ್ ದಾಖಲೆಗಳು ಬಹಳ ರಹಸ್ಯವಾದುದು. ಈ ದಾಖಲೆಗಳ ಗೋಪ್ಯತೆ ಕಾಪಾಡುವುದು ಅಧಿಕಾರಿಗಳ ಹೊಣೆಗಾರಿಕೆ. ಅಂತಹ ಮಹತ್ವದ ಜವಾಬ್ದಾರಿ ಹೊತ್ತಿದ್ದವರಲ್ಲಿ ಮುದ್ರಣ ವಿಭಾಗದ ಉಪ ವ್ಯವಸ್ಥಾಪಕ ಕುಲದೀಪ್ ಕುಮಾರ್ ಶರ್ಮಾ ಒಬ್ಬರು.
ತೆರಿಗೆದಾರರಿಗೆ ಶುಭ ಸುದ್ದಿ ನೀಡಲು ಮುಂದಾದ ನಿರ್ಮಲಾ ಸೀತಾರಾಮನ್
ಮಹತ್ವದ ಬಜೆಟ್ ಪ್ರತಿಗಳನ್ನು ಮುದ್ರಿಸುವ ಹೊಣೆಗಾರಿಕೆ ಹೊತ್ತುಕೊಂಡಿದ್ದ ಕುಲದೀಪ್ ಅವರ ತಂದೆ ಜ. 26ರಂದು ನಿಧನರಾದರು.
31 ವರ್ಷದ ಅನುಭವ
ದೇಶದ ಒಂದು ವರ್ಷದ ಆರ್ಥಿಕತೆಯ ಯೋಜನೆಗಳ ಕುರಿತಾದ ಅತ್ಯಂತ ಮಹತ್ವದ ಕಾರ್ಯದ ಜವಾಬ್ದಾರಿಯಲ್ಲಿ ಬಿಜಿಯಾಗಿದ್ದ ಕುಲದೀಪ್ ಕುಮಾರ್, ಈ ಸುದ್ದಿ ಕೇಳಿ ಆಘಾತಕ್ಕೆ ಒಳಗಾದರೂ ಸಾವರಿಸಿಕೊಂಡರು. ನಿಗದಿತ ಸಮಯದೊಳಗೆ ಎಲ್ಲ ಕೆಲಸಗಳನ್ನೂ ಮುಗಿಸಲೇಬೇಕಿದ್ದ ಅವರು, ಅ ಜವಾಬ್ದಾರಿಯನ್ನು ಕುಟುಂಬದ ಕಾರಣದಿಂದ ತಪ್ಪಿಸಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಏಕೆಂದರೆ ಬಜೆಟ್ ಕಾರ್ಯದಲ್ಲಿ ಅವರಿಗೆ 31 ವರ್ಷದ ಅನುಭವ. ಈ ವೇಳೆ ಅಲ್ಲಿ ತಮ್ಮ ಹಾಜರಾತಿ ಎಷ್ಟು ಮುಖ್ಯ ಎನ್ನುವುದು ಅವರಿಗೆ ಅರಿವಿತ್ತು.
ಒಂದು ನಿಮಿಷವೂ ಹೋಗಲಿಲ್ಲ
ತಂದೆಯ ಅಗಲುವಿಕೆಯ ಕಹಿ ಸುದ್ದಿ ಕೇಳಿದ ಬಳಿಕವೂ ಒಂದು ನಿಮಿಷ ಕೂಡ ಅವರು ತಮ್ಮ ಕಾರ್ಯಸ್ಥಾನದಿಂದ ಹೊರಬರಲಿಲ್ಲ. ತಮ್ಮ ಮೇಲಿದ್ದ ಜವಾಬ್ದಾರಿಯನ್ನು ಮುಗಿಸುವವರೆಗೂ ಅಲ್ಲಿಂದ ಕದಲುವುದಿಲ್ಲ ಎಂದು ದೃಢನಿಶ್ಚಯ ಮಾಡಿಕೊಂಡು ಕೆಲಸದಲ್ಲಿ ಮಗ್ನರಾದರು. ತಮಗಾದ ವೈಯಕ್ತಿಕ ನಷ್ಟ ಮತ್ತು ನೋವನ್ನು ನುಂಗಿಕೊಂಡು ಕೆಲಸದ ಕುರಿತಾದ ನಿಷ್ಠೆ ಪ್ರದರ್ಶಿಸಿದರು.
ಕೇಂದ್ರ ಬಜೆಟ್ ಮಂಡನೆ ನಂತರ ಸಂಪುಟದಲ್ಲಿ ಭಾರಿ ಬದಲಾವಣೆ
ಹಣಕಾಸು ಸಚಿವಾಲಯ ವಿಷಾದ
'ಮುದ್ರಣ ವಿಭಾಗದ ಉಪ ವ್ಯವಸ್ಥಾಪಕ ಕುಲದೀಪ್ ಕುಮಾರ್ ಶರ್ಮಾ ಅವರು 2020ರ ಜ.26ರಂದು ತಮ್ಮ ತಂದೆಯನ್ನು ಕಳೆದುಕೊಂಡರು ಎಂಬುದನ್ನು ತಿಳಿಸಲು ವಿಷಾದಿಸುತ್ತೇವೆ. ಬಜೆಟ್ ಸಂಬಂಧಿ ಕರ್ತವ್ಯದಲ್ಲಿದ್ದ ಅವರು ಅಲ್ಲಿಂದ ಹೊರಹೋಗುವಂತಿರಲಿಲ್ಲ. ಅವರ ತೀವ್ರವಾದ ನಷ್ಟದ ನಡುವೆಯೂ ಶರ್ಮಾ ಒಂದು ನಿಮಿಷ ಕೂಡ ಮುದ್ರಣದ ಸ್ಥಳವನ್ನು ಬಿಟ್ಟುಹೋಗದೆ ಇರಲು ನಿರ್ಧರಿಸಿದ್ದರು' ಎಂದು ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.
ಅನುಕರಣೀಯ ಬದ್ಧತೆ
'ಬಜೆಟ್ ಪ್ರಕ್ರಿಯೆಯಲ್ಲಿ 31 ವರ್ಷಗಳ ಅನುಭವ ಹೊಂದಿರುವ ಶರ್ಮಾ ಅವರು ಅಗತ್ಯಂತ ಬಿಗಿಯಾದ ಕಾಲಮಿತಿಯಲ್ಲಿ ಮುದ್ರಣ ಕಾರ್ಯವನ್ನು ಪೂರ್ಣಗೊಳಿಸಲು ಅಗತ್ಯವಾಗಿರುವ ವ್ಯಕ್ತಿ. ತಮ್ಮ ವೈಯಕ್ತಿಕ ನಷ್ಟವನ್ನೂ ಮರೆತು ಅವರು ತಮ್ಮ ಕರ್ತವ್ಯದ ಕರೆಗೆ ಅದ್ಭುತ ನಿಷ್ಠೆ ಮೆರೆದು ಅನುಕರಣೀಯ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ' ಎಂದು ಮತ್ತೊಂದು ಟ್ವೀಟ್ ಮಾಡಿದೆ.
ಈ ದಶಕಕ್ಕೆ ಭದ್ರ ಬುನಾದಿ ಹಾಕಲಿದೆ ನಮ್ಮ ಬಜೆಟ್: ಮೋದಿ
ಕುಲದೀಪ್ ಬದ್ಧತೆಗೆ ಶ್ಲಾಘನೆ
ಕುಲದೀಪ್ ಅವರ ವೃತ್ತಿ ಬದ್ಧತೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಈ ರೀತಿಯ ಬದ್ಧತೆಯುಳ್ಳ ಉದ್ಯೋಗಿಗಳಿಂದಾಗಿ ಸರ್ಕಾರ ನಡೆಯುತ್ತಿದೆ ಎಂದು ಹೊಗಳಿದ್ದಾರೆ. ಹಾಗೆಯೇ ಅವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ತ್ಯಾಗ ಮತ್ತು ಬದ್ಧತೆಗೆ ಶರಣು. ಆದರೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆಯೇ? ಎಂದು ಕೆಲವರು ಪ್ರಶ್ನಿಸಿದ್ದಾರೆ.
ಹೊರಹೋಗಲು ಅವಕಾಶವಿಲ್ಲ
ಬಜೆಟ್ ಮಂಡನೆಗೂ ಮುನ್ನ ಅದರ ತಯಾರಿಗೆ ಹಲವು ತಿಂಗಳು ಸಿದ್ಧತೆ ನಡೆಯುತ್ತದೆ. ಬಜೆಟ್ ದಾಖಲೆಗಳನ್ನು ಹಣಕಾಸು ಸಚಿವಾಲಯ ಸಂಸತ್ನಲ್ಲಿ ಮಂಡನೆ ಮಾಡುವವರೆಗೂ ಅದರ ರಹಸ್ಯ ಕಾಪಾಡಬೇಕಿರುತ್ತದೆ. ಅದರ ಮುದ್ರಣವೂ ಅತ್ಯಂತ ಗೋಪ್ಯವಾದ ಕೆಲಸವಾಗಿದೆ.
ಈ ಬಜೆಟ್ ಪ್ರತಿಗಳು ಮುದ್ರಣಗೊಳ್ಳುವ ಸಂಸತ್ನ ಉತ್ತರ ಬ್ಲಾಕ್ನಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿರುತ್ತದೆ. ಇಲ್ಲಿ ಬಜೆಟ್ ಪ್ರತಿಗಳ ಮುದ್ರಣ ಆರಂಭವಾದಾಗಿನಿಂದ ಅದರ ಪ್ರಸ್ತುತಿವರೆಗಿನವರೆಗೂ ಸುಮಾರು ಹತ್ತು ದಿನ ಕರ್ತವ್ಯದಲ್ಲಿರುವ ಸಿಬ್ಬಂದಿ ಹೊರಹೋಗಲು ಅವಕಾಶ ನೀಡುವುದಿಲ್ಲ.
ಬಜೆಟ್ ಮಂಡನೆ ಮುಗಿಯುವವರೆಗೂ 'ದಿಗ್ಬಂಧನ'
ಸಾಂಪ್ರದಾಯಿಕ 'ಹಲ್ವ' ಹಂಚಿಕೆ ಸಮಾರಂಭದೊಂದಿಗೆ ಬಜೆಟ್ ಪ್ರತಿಗಳ ಮುದ್ರಣ ಆರಂಭವಾಗುತ್ತದೆ. ಅದು ಹಣಕಾಸು ಸಚಿವರ ಸಮ್ಮುಖದಲ್ಲಿ ಶುರುವಾಗುತ್ತದೆ. ಹಣಕಾಸು ಸಚಿವಾಲಯದ ಸಿಬ್ಬಂದಿ ನಡುವೆ ಹಲ್ವ ಹಂಚಿಕೆಯಾದ ಬಳಿಕ ಬಜೆಟ್ ಮುದ್ರಣದ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಯನ್ನು ನಾರ್ತ್ ಬ್ಲಾಕ್ನ ಬೇಸ್ಮೆಂಟ್ನಲ್ಲಿರುವ ಮುದ್ರಣ ಘಟಕದಲ್ಲಿ ಕೂಡಿ ಹಾಕಲಾಗುತ್ತದೆ.
ಬಜೆಟ್ ಪ್ರಸ್ತುತಿಯವರೆಗೂ ಅವರಿಗೆ ನಾರ್ತ್ ಬ್ಲಾಕ್ ನ ಒಳಗೇ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಈ 'ದಿಗ್ಬಂಧನ' ಅವಧಿ ಮುಗಿಯುವವರೆಗೂ ಕುಟುಂಬದ ಸದಸ್ಯರೊಂದಿಗೆ ಮಾತನಾಡಲು ಈ ಸಿಬ್ಬಂದಿಗೆ ಅವಕಾಶವಿಲ್ಲ.