ಅತ್ಯಾಚಾರಕ್ಕೆ ಮಹಿಳೆಯರು ಸಹಕರಿಸಲಿ: ನಿರ್ದೇಶಕನ ಆಘಾತಕಾರಿ ಹೇಳಿಕೆ
ನವದೆಹಲಿ, ಡಿಸೆಂಬರ್ 4: ಅತ್ಯಾಚಾರಿಗಳೊಂದಿಗೆ ಮಹಿಳೆಯರು ಸಹಕರಿಸುವ ಮೂಲಕ ಅತ್ಯಾಚಾರಕ್ಕೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಬೇಕು ಎಂದು ಚಿತ್ರ ನಿರ್ದೇಶಕರೊಬ್ಬರು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಫೇಸ್ಬುಕ್ನಲ್ಲಿ ಅವರು ಈ ಹೇಳಿಕೆ ನೀಡಿದ್ದು, ಜನರು ಮುಗಿಬೀಳುತ್ತಿದ್ದಂತೆಯೇ ಪೋಸ್ಟ್ಅನ್ನು ಡಿಲೀಟ್ ಮಾಡಿದ್ದಾರೆ.
ತೆಲಂಗಾಣದಲ್ಲಿ ಕಳೆದ ವಾರ ನಡೆದ ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಬರ್ಬರ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ನಿರ್ದೇಶಕ ಡೇನಿಯಲ್ ಶ್ರವಣ್ ನೀಡಿರುವ ಹೇಳಿಕೆ ಅಂತರ್ಜಾಲದಲ್ಲಿ ಜನರನ್ನು ರೊಚ್ಚಿಗೆಬ್ಬಿಸಿದೆ.
ಹೈದರಾಬಾದ್ ಅತ್ಯಾಚಾರ ಪ್ರಕರಣ: ಜನರು ಮಾಡುತ್ತಿರುವುದೇನು ಗೊತ್ತೇ?
ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ತಡೆಯಲು ಮಹಿಳೆಯರು ಸಹಕರಿಸಬೇಕು ಮತ್ತು ಅದಕ್ಕಾಗಿ ಕಾಂಡೋಮ್ ತೆಗೆದುಕೊಂಡು ಹೋಗಬೇಕು ಎಂದು ಡೇನಿಯಲ್, ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ತಮ್ಮ ವಿಲಕ್ಷಣ ಮತ್ತು ಆಘಾತಕಾರಿ ಹೇಳಿಕೆಗೆ ವ್ಯಾಪಾಕ ಖಂಡನೆ ವ್ಯಕ್ತವಾಗಿದ್ದರಿಂದ ಅದನ್ನು ಅಳಿಸಿಹಾಕಿದ್ದಾರೆ. ಆದರೆ ಅವರ ಪೋಸ್ಟ್ನ ಸ್ಕ್ರೀನ್ ಶಾಟ್ ಬಳಸಿಕೊಂಡು ತಮ್ಮ ಸಿಟ್ಟು ಹಂಚಿಕೊಳ್ಳುತ್ತಿದ್ದಾರೆ. ಡೇನಿಯಲ್ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನೇ ಡಿಲೀಟ್ ಮಾಡಿದ್ದಾರೆ.
'ಕಾನೂನುಬದ್ಧಗೊಳಿಸಬೇಕು'
'ಹಿಂಸಾಚಾರದ ಯೋಜನೆಗಳಿಲ್ಲದಂತೆ (ಅತ್ಯಾಚಾರದ ಬಳಿಕ ಕೊಲೆ ಮಾಡದಂತೆ) ಸರ್ಕಾರವು ಅತ್ಯಾಚಾರವನ್ನು ಕಾನೂನುಬದ್ಧಗೊಳಿಸುವುದನ್ನು ಉತ್ತೇಜಿಸಬೇಕು. 18 ವರ್ಷ ದಾಟಿದ ಯುವತಿಯರಿಗೆ ಅತ್ಯಾಚಾರದ ಬಗ್ಗೆ ಶಿಕ್ಷಣ ನೀಡಬೇಕು (ಏಕೆಂದರೆ ಯುವತಿಯರು ಪುರುಷರ ಲೈಂಗಿಕ ಬಯಕೆಗಳನ್ನು ನಿರಾಕರಿಸಬಾರದು). ಆಗ ಮಾತ್ರ ಈ ಬಗೆಯ ಘಟನೆಗಳು ನಡೆಯುವುದಿಲ್ಲ' ಎಂದು ಡೇನಿಯಲ್ ಬರೆದಿದ್ದಾರೆ.
ಹೆಣ್ಣುಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಕು
'ವೀರಪ್ಪನ್ನನ್ನು ಕೊಲ್ಲುವುದರಿಂದ ಸ್ಮಗ್ಲಿಂಗ್ ನಿಯಂತ್ರಣಕ್ಕೆ ಬರುತ್ತದೆ ಎಂದು, ಲ್ಯಾಡೆನ್ನನ್ನು ಸಾಯಿಸುವುದರಿಂದ ಭಯೋತ್ಪಾದನೆ ಕಡಿಮೆಯಾಗುತ್ತದೆ ಎಂಬುದು ಮೂರ್ಖತನ. ಹಾಗೆಯೇ 'ನಿರ್ಭಯಾ ಕಾಯ್ದೆ' 'ಹಿಂಸೆಯೊಂದಿಗಿನ ಅತ್ಯಾಚಾರ'ವನ್ನು ತಡೆಯಲಾರದು. ಅದರಲ್ಲಿಯೂ ಭಾರತದ ಹೆಣ್ಣುಮಕ್ಕಳು ಲೈಂಗಿಕ ಶಿಕ್ಷಣದ ಬಗ್ಗೆ ತಿಳಿದುಕೊಂಡಿರಬೇಕು (18 ವರ್ಷವಾದ ಬಳಿಕ ಕಾಂಡೋಮ್ಗಳನ್ನು ಮತ್ತು ಡೆಂಟಲ್ ಡ್ಯಾಮ್ಗಳನ್ನು ಕೊಂಡೊಯ್ಯಬೇಕು)' ಎಂದು ಸಲಹೆ ನೀಡಿದ್ದಾರೆ.
ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ನಾನು ಸಿದ್ಧ: ರಾಷ್ಟ್ರಪತಿಗೆ ಹೀಗೊಂದು ಪತ್ರ!
'ಮಹಿಳೆಯರು ಪುರುಷರ ಬಯಕೆಯನ್ನು ಒಪ್ಪಿಕೊಳ್ಳಲಿ'
'ಸರಳವಾದ ತರ್ಕ, ಲೈಂಗಿಕ ತೃಷೆ ತಣಿಸಿಕೊಂಡ ಬಳಿಕ ಪುರುಷ ಮಹಿಳೆಯನ್ನು ಕೊಲ್ಲುವುದಿಲ್ಲ. ಅತ್ಯಾಚಾರದ ಬಳಿಕ ಕೊಲೆ ಪ್ರಕರಣಗಳನ್ನು ತಡೆಯಲು ಸರ್ಕಾರ ಯಾವುದಾದರೊಂದು ಯೋಜನೆ ಜಾರಿಗೆ ತರಬೇಕು. ಸಮಾಜ, ಮಹಿಳಾ ಸಂಘಟನೆಗಳು ಮತ್ತು ಸರ್ಕಾರವು ನಿರ್ಭಯಾ ಕಾಯ್ದೆ, ಪೆಪ್ಪರ್ ಸ್ಪ್ರೇ ಇತ್ಯಾದಿಗಳ ಮೂಲಕ ಅತ್ಯಾಚಾರಿಗಳನ್ನು ಹೆದರಿಸುತ್ತಿದೆ. ಅತ್ಯಾಚಾರಿಗಳು ತಮ್ಮ ದೈಹಿಕ ಬಯಕೆಗಳನ್ನು ತೀರಿಸಿಕೊಳ್ಳಲು ಬೇರೆ ದಾರಿ ಕಾಣದೆ ಈ ಕೊಲೆಯ ಆಲೋಚನೆಗಳನ್ನು ಮಾಡುತ್ತಾರೆ. ಅಪರಾಧಕ್ಕೆ (ಕೊಲೆ) ಕೆಟ್ಟ ಆಲೋಚನೆಗಳು ಪ್ರಚೋದನೆ ನೀಡುತ್ತವೆ. ಮಹಿಳೆಯರು ಪುರುಷರ ಲೈಂಗಿಕ ಬಯಕೆಯನ್ನು ಒಪ್ಪಿಕೊಳ್ಳುವುದೇ ಒಳಿತು' ಎಂದು ಡೇನಿಯನ್ ಬರೆದುಕೊಂಡಿದ್ದಾರೆ.
ಡೇನಿಯಲ್ ವಿರುದ್ಧ ಆಕ್ರೋಶ
ಡೇನಿಯಲ್ ಹೇಳಿಕೆ ವೈರಲ್ ಆಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇಂತಹ ಕೀಳು ಮನಸ್ಥಿತಿಯ ಜನರಿಂದಲೇ ಸಾಮಾಜಿಕ ಬದಲಾವಣೆ ಸಾಧ್ಯವಾಗುತ್ತಿಲ್ಲ. ಅತ್ಯಾಚಾರಿಗಳಿಗೆ ಕುಮ್ಮಕ್ಕು ನೀಡುವಂತಹ ಹೇಳಿಕೆ ನೀಡಿರುವ ಡೇನಿಯಲ್ ವಿರುದ್ಧ ಮೊದಲು ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವ್ಯಕ್ತಿ ಒಬ್ಬ ಮಾನಸಿಕ ಅಸ್ವಸ್ಥ. ಆತನ ಹೇಳಿಕೆಗೆ ಪ್ರಚಾರ ನೀಡದಿರುವುದು ಒಳ್ಳೆಯದು ಎಂದು ಕೆಲವರು ಸಲಹೆ ನೀಡಿದ್ದಾರೆ.
ಸಮರ್ಥಿಸಿಕೊಂಡಿದ್ದ ಡೇನಿಯಲ್
ತಮ್ಮ ಖಾತೆಯನ್ನು ಡಿಲೀಟ್ ಮಾಡುವ ಮೊದಲು ಡೇನಿಯಲ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಇದು ತಮ್ಮ ವೈಯಕ್ತಿಕ ಹೇಳಿಕೆಯಲ್ಲ. ತಮ್ಮ ಒಂದು ಸಿನಿಮಾದಲ್ಲಿನ ಪ್ರಮುಖ ಪಾತ್ರದ ಸಂಭಾಷಣೆಯನ್ನು ಸುಮ್ಮನೆ ಹಂಚಿಕೊಂಡಿದ್ದೆ ಎಂದು ಹೇಳಿಕೊಂಡಿದ್ದರು. ಬಳಿಕ ಕ್ಷಮೆ ಕೂಡ ಯಾಚಿಸಿದ್ದರು. ಅರೆಕಾಲಿಕ ಚಿತ್ರ ನಿರ್ದೇಶಕರಾಗಿರುವ ಡೇನಿಯಲ್, ಕೆಲವು ತೆಲುಗು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.