ಸ್ವಧರ್ಮಿಯರಿಂದ ಕಿರುಕುಳ, ಬೇಸತ್ತು ಹಿಂದೂ ಧರ್ಮಕ್ಕೆ ಮತಾಂತರ
ಪಾಟ್ನಾ, ಜುಲೈ 06: ಮುಸ್ಲಿಂ ವಕೀಲರೊಬ್ಬರ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ, ಬಿಹಾರಾ ಬೆಗುಸರಾಯಿ ಜಿಲ್ಲೆಯಲ್ಲಿ ವರದಿಯಾಗಿದೆ. ಇಸ್ಲಾಂ ಧರ್ಮವನ್ನು ತೊರೆಯಲು ಮುಖ್ಯ ಕಾರಣ, ನೆರೆ ಮನೆಯವರ ಕಿರುಕುಳ ಎನ್ನಲಾಗಿದೆ.
ಮೊಹಮ್ಮದ್ ಅನ್ವರ್ (46) ಅವರ ಮೇಲೆ ಷರಿಯಾ ಕಾನೂನು ಹೇರಿಕೆ ಮಾಡಲಾಗಿತ್ತು. ಇದನ್ನು ವಿರೋಧಿಸಿದ ಅನ್ವರ್ ಅವರಿಗೆ ಬೆದರಿಕೆ, ಕಿರುಕುಳ ಆರಂಭವಾಗಿತ್ತು. ಇದರಿಂದ ಬೇಸತ್ತ ವಕೀಲ ಅನ್ವರ್ ಹಾಗೂ ಅವರ ಪುತ್ರರಾದ ಮೊಹಮ್ಮದ್ ಅಮೀರ್ (11) ಹಾಗೂ ಮೊಹಮ್ಮದ್ ಶಬೀರ್ (9) ಅವರು ಹಿಂದೂ ಧರ್ಮವನ್ನು ಒಪ್ಪಿಕೊಂಡಿದ್ದಾರೆ.
ವಕೀಲ ಅನ್ವರ್ ಅವರ ಹೆಸರು ಈಗ ಆನಂದ್ ಭಾರತಿ ಹಾಗೂ ಮಕ್ಕಳ ಹೆಸರು ಅಮನ್ ಭಾರತಿ ಹಾಗೂ ಸುಮನ್ ಭಾರತಿ ಎಂದಾಗಿದೆ. ವಿಶೇಷವೆಂದರೆ, ಅನ್ವರ್ ಅವರ ಪತ್ನಿ ಶಬನಮ್ ಅವರು ಇನ್ನೂ ಮತಾಂತರ, ಧರ್ಮಾಂತರವಾಗಿಲ್ಲ. ನಂತರ ಅವರು ಹಿಂದೂ ಧರ್ಮ ಒಪ್ಪಿಕೊಳ್ಳಲಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ನಾನು ಹಾಗೂ ನನ್ನ ಕುಟುಂಬ ದೇಗುಲ ಹಾಗೂ ಮಸೀದಿ ಎರಡಕ್ಕೂ ಹೋಗುತ್ತಿದ್ದೆವು. ಅದರೆ, ಹಿಂದೂಗಳ ಆಯೋಜನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ಹೇರಲಾಯಿತು. ವಿಧಿ ಇಲ್ಲದೆ, ಬಜರಂಗ ದಳದ ನೆರವು ಕೋರಿದೆ. ಹಿಂದೂ ಎಂದರೆ ಮತ, ಜಾತಿ, ಪಂಥವಲ್ಲ, ಅದೊಂದು ಧರ್ಮ, ಜೀವನ ಶೈಲಿ ಎಂದು ನನಗೆ ಮನವರಿಕೆ ಮಾಡಿಕೊಟ್ಟರು. ಸ್ವಇಚ್ಛೆಯಿಂದ ಹಿಂದೂ ಧರ್ಮವನ್ನು ಪಾಲಿಸಲು ತೊಡಗಿದ್ದೇನೆ ಎಂದು ಅನ್ವರ್ ಅಲಿಯಾಸ್ ಆನಂದ್ ಹೇಳಿದ್ದಾರೆ.