ಉ.ಪ್ರ: ಜೀವ ಉಳಿಯಲು ಪೊಲೀಸ್ ಠಾಣೇಲಿ ಮಲಗ್ತೀವಂತಾರೆ ಕ್ರಿಮಿನಲ್ ಗಳು
ಲಖನೌ, ಏಪ್ರಿಲ್ 2: ಖತರ್ನಾಕ್ ಕಳ್ಳರು, ಗ್ಯಾಂಗ್ ಸ್ಟರ್ ಗಳು, ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳು ಶಾಲಾ ಮಕ್ಕಳಂತೆ ಬಂದು ಪೊಲೀಸ್ ಠಾಣೆಗಳಲ್ಲಿ ಸಹಿ ಹಾಕುತ್ತಿದ್ದಾರೆ. ಇನ್ನು ಮುಂದೆ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಗೌರವದಿಂದ ಬದುಕ್ತೀವಿ ಎಂದು ಬರೆದುಕೊಡುತ್ತಿದ್ದಾರೆ.
ಇದು ಯಾವುದೋ ಸಿನಿಮಾ ಸುದ್ದಿ ಅಲ್ಲ. ಉತ್ತರಪ್ರದೇಶದಲ್ಲಿನ ಸ್ಥಿತಿ. ಈ ಬಗ್ಗೆ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿದ್ದು, ಎಷ್ಟೋ ಮಂದಿ ಕ್ರಿಮಿನಲ್ ಗಳು ರಾತ್ರಿ ಹೊತ್ತು ಪೊಲೀಸ್ ಠಾಣೆಗಳಲ್ಲೇ ಬಂದು ಮಲಗುತ್ತಿದ್ದಾರೆ ಎಂದು ಹೇಳಿದ್ದಾರೆ.
10 ತಿಂಗಳಲ್ಲಿ 921 ಎನ್ಕೌಂಟರ್: ರೌಡಿಗಳ ಪಾಲಿಗೆ ಯೋಗಿ ಆದಿತ್ಯನಾಥ್ ಟೆರರ್
ಇದರ ಜತೆಗೆ ಪೊಲೀಸರ ತನಿಖೆಯಲ್ಲಿ ಕೂಡ ಸಹಾಯ ಮಾಡುತ್ತಿದ್ದಾರೆ. ಅಯ್ಯೋ ಇದೆಲ್ಲ ಸಾಧ್ಯವಾ ಅಂತೀರಾ? ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರವು ಪೊಲೀಸರಿಗೆ ಆ ಪರಿಯ ಸ್ವಾತಂತ್ರ್ಯ ಕೊಟ್ಟಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಆರಕ್ಷಕರ ಕೈ ಮೇಲಾಗಿದೆ.
"ಉತ್ತರಪ್ರದೇಶ ಪೊಲೀಸರು ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳಲು ಸ್ವತಂತ್ರರು" ಎಂದು ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸುವ ವೇಳೆಯಲ್ಲೇ ಹೇಳಿದರು. ಅವರು ನೀಡಿದ ಮಾತಿನಂತೆ ನಡೆದುಕೊಂಡಿದ್ದರಿಂದ ಅಲ್ಲಿನ ಪರಿಸ್ಥಿತಿ ಸುಧಾರಿಸಿದೆ.
ಮಾರ್ಚ್ 20, 2017 ಹಾಗೂ ಜನವರಿ 31, 2018ರ ಮಧ್ಯೆ 1144 ಎನ್ ಕೌಂಟರ್ ಗಳಾಗಿವೆ. 34 ಕ್ರಿಮಿನಲ್ ಗಳು ಸಾವನ್ನಪ್ಪಿದ್ದಾರೆ. 2744 ಮಂದಿಯನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಕೆಲ ಪೊಲೀಸರೂ ಪ್ರಾಣ ಕಳೆದುಕೊಡಿದ್ದಾರೆ. 247 ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಅಂಕಿ- ಅಂಶವೇ ಬಹಿರಂಗಗೊಂಡಿದೆ.