ಎಂಜೆ ಅಕ್ಬರ್ ವಿರುದ್ಧ ಲೈಂಗಿಕ ಶೋಷಣೆ ಆರೋಪ, ಅಂತರ ಕಾಯ್ದುಕೊಂಡ ಸರಕಾರ
ವಿದೇಶಾಂಗ ಖಾತೆ ರಾಜ್ಯ ಸಚಿವರಾದ ಎಂ.ಜೆ.ಅಕ್ಬರ್ ವಿರುದ್ಧ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯೊಳಗೆ ಭಿನ್ನವಾದ ಅಭಿಪ್ರಾಯ ಕೇಳಿಬರುತ್ತಿದೆ. ಎಂ.ಜೆ.ಅಕ್ಬರ್ ಸಂಪಾದಕರಾಗಿದ್ದ ಅವಧಿಯಲ್ಲಿ ಪತ್ರಕರ್ತೆಯೊಬ್ಬರನ್ನು ಲೈಂಗಿಕವಾಗಿ ಶೋಷಣೆ ಮಾಡಿದ ಆರೋಪ ಬಂದಿದೆ.
ಆದರೆ, ಎಂ.ಜೆ.ಅಕ್ಬರ್ ಅವರನ್ನು ರಾಜ್ಯ ಸಚಿವ ಹುದ್ದೆಯಿಂದ ತೆಗೆಯಬೇಕಾ ಎಂಬ ಬಗ್ಗೆ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಏಕೆಂದರೆ, ಈಗ ಕೇಳಿಬರುತ್ತಿರುವ ಆರೋಪದ ಕಾರಣಕ್ಕೆ ಅವರನ್ನು ಹುದ್ದೆಯಿಂದ ಇಳಿಸಿದರೆ ಯಾವುದೇ ರೀತಿಯಲ್ಲೂ ಸರಕಾರಕ್ಕೆ ಆಗುತ್ತಿರುವ ಮುಜುಗರ ತಪ್ಪಿಸಲು ಸಾಧ್ಯವಿಲ್ಲ.
ಕೇಂದ್ರ ಸಚಿವ ಎಂಜೆ ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ
ಇನ್ನು ಈಗ ಶುರುವಾಗಿರುವ ಮೀ ಟೂ ಅಭಿಯಾನದ ಅಡಿಯಲ್ಲಿ ಎಂ.ಜೆ.ಅಕ್ಬರ್ ವಿರುದ್ಧ ಇನ್ನಷ್ಟು ಮಂದಿ ಆರೋಪಗಳನ್ನು ಮಾಡಿದ್ದಾರೆ. ಆ ಕಾರಣಕ್ಕೆ ಆಫ್ರಿಕಾ ದೇಶಗಳ ಭೇಟಿಯನ್ನು ಪೂರ್ತಿ ಮಾಡಲು ತಿಳಿಸಲಾಗಿದೆ. ಅದನ್ನು ಅರ್ಧಕ್ಕೆ ಮೊಟಕುಗೊಳಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
ಮೂಲಗಳು ತಿಳಿಸುವ ಪ್ರಕಾರ, ಒಂದು ವೇಳೆ ಎಂ.ಜೆ.ಅಕ್ಬರ್ ಅವರನ್ನು ಹುದ್ದೆಯಿಂದ ತೆಗೆದರೆ ಇನ್ನಷ್ಟು ಮಂದಿಯನ್ನು ತೆಗೆಯಬೇಕಾಗುತ್ತದೆ. ಇನ್ನಷ್ಟು ಆಧಾರರಹಿತ ಆರೋಪಗಳು ಕೇಳಿಬರುತ್ತವೆ. ಅದೇ ರೀತಿ ಎಂ.ಜೆ.ಅಕ್ಬರ್ ರನ್ನು ಕೈ ಬಿಟ್ಟರೆ ಇನ್ನಷ್ಟು ರಾಜಕೀಯ ಬ್ಲ್ಯಾಕ್ ಮೇಲ್ ಆಗಬಹುದು. ರಾಜಕೀಯ ವಿರೋಧಿಗಳು ಇಂಥದ್ದನ್ನೇ ಅಸ್ತ್ರ ಮಾಡಿಕೊಂಡು ತೇಜೋವಧೆಗೆ ಮುಂದಾಗಬಹುದು ಹಾಗೂ ಹಣಕ್ಕಾಗಿ ಒತ್ತಾಯಿಸಬಹುದು.
ಅಭಿಯಾನವು ಶ್ರೀಮಂತ ವರ್ಗಕ್ಕೆ ಸೀಮಿತ
ಇಂಥ ಎಲ್ಲ ಸಾಧ್ಯತೆಗಳು ಇವೆ. ಇನ್ನು ಈಗ ಶುರುವಾಗಿರುವ ಅಭಿಯಾನವು ಶ್ರೀಮಂತ ವರ್ಗಕ್ಕೆ ಸೀಮಿತ ಆಗಿರುವಂಥದ್ದು ಎಂಬ ಅಭಿಪ್ರಾಯ ನವದೆಹಲಿಯಲ್ಲಿ ಇದೆ. ಜನ ಸಮೂಹದ ಮೇಲೆ ಇದರ ಪ್ರಭಾವ ಇಲ್ಲ. ಜನಸಾಮಾನ್ಯರು ಇರಲಿ, ಒಟ್ಟಾರೆ ದೆಹಲಿ ಅಂತ ನೋಡುವಾಗಲೂ ಈ ಅಭಿಯಾನದ ಪರಿಣಾಮ ಅಷ್ಟಿಲ್ಲ. ಆದ್ದರಿಂದ ಈ ವಿಚಾರದ ಬಗ್ಗೆ ತಕ್ಷಣ ಹಾಗೂ ಆತುರದ ತೀರ್ಮಾನ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಅಧಿಕೃತ ದೂರು ದಾಖಲಾಗಿಲ್ಲ
ಇನ್ನೂ ಮುಂದುವರಿದು ಹೇಳುವುದಾದರೆ ಎಂ.ಜೆ.ಅಕ್ಬರ್ ವಿರುದ್ಧ ಅಧಿಕೃತವಾಗಿ ಯಾವುದೇ ದೂರು ದಾಖಲಾಗಿಲ್ಲ. ಸಾಮಾಜಿಕ ಮಾಧ್ಯಮದ ಅಭಿಯಾನಗಳನ್ನು ಕೋರ್ಟ್ ನಲ್ಲಿ ಸ್ವೀಕರಿಸುವುದಿಲ್ಲ. ಮದ್ಯಪಾನ ಮಾಡುವಾಗ ಜತೆಗೆ ಸೇರಿ, ಲೈಂಗಿಕ ಶೋಷಣೆ ಮಾಡಿದರು ಎಂದು ಇಪ್ಪತ್ತು ವರ್ಷ ನಂತರ ದೂರುವುದು ಒಪ್ಪಲು ಸ್ವಲ್ಪ ಕಷ್ಟವಾಗುತ್ತದೆ. ನಿಜವಾಗಲೂ ಅವರಿಂದ ಲೈಂಗಿಕ ಶೋಷಣೆ ಆಗಿದ್ದರೆ ಅಧಿಕೃತ ದೂರು ದಾಖಲಿಸಬೇಕು ಎಂದು ಹೆಸರು ಹೇಳಲು ಇಚ್ಛಿಸದ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ಹೈಪ್ರೊಫೈಲ್ ಕಾಮುಕರಿಗೆ ಹೆಡೆಮುರಿಕಟ್ಟಲು ಸಜ್ಜಾಗಿದೆ ಸಮಿತಿ
ಮೋದಿ ಸರಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ
ತಕ್ಷಣದ ಪ್ರತಿಕ್ರಿಯೆಯಿಂದ ಪಕ್ಷಕ್ಕೆ ಅಥವಾ ಸರಕಾರಕ್ಕೆ ಯಾವುದೇ ಹಾನಿಯಿಲ್ಲ. ಇದರ ಬದಲು ಬೇರೆ ವಿವಾದಗಳು ತಲೆ ಎತ್ತಿ, ಈಗಿನದನ್ನು ಮರೆತು ಬಿಡುತ್ತಾರೆ. ಆದರೆ ಎಂ.ಜೆ.ಅಕ್ಬರ್ ರನ್ನು ಸರಕಾರದಲ್ಲಿ ಮುಂದುವರಿಸಲು ವಿರೋಧಿಸುತ್ತಿದ್ದವರು ಈಗ ತಮ್ಮ ವಾದಕ್ಕೆ ಪುಷ್ಟಿ ಸಿಕ್ಕಿದೆ ಎನ್ನುತ್ತಿದ್ದಾರೆ. ಇನ್ನು ಈ ವಿಚಾರ ನರೇಂದ್ರ ಮೋದಿ ಸರಕಾರದ ಮೇಲೆ ಪರಿಣಾಮ ಬೀರುವ ಎಚ್ಚರಿಕೆ ನೀಡುತ್ತಿದ್ದಾರೆ.
ಸುಮ್ಮನಾದರು ಮೇನಕಾ ಗಾಂಧಿ
ಆದರೆ, ಎಂ.ಜೆ.ಅಕ್ಬರ್ ಪರವಾಗಿ ಇರುವ ಸರಕಾರದ ಒಳಗಿನವರು ಹೇಳುವ ಪ್ರಕಾರ, ಇಂಥ ಆರೋಪಗಳನ್ನು ಸಾಬೀತು ಮಾಡಲು ಆಗುವುದಿಲ್ಲ. ರಾಜಕೀಯವಾಗಿಯೂ ಇದರಿಂದ ಯಾವುದೇ ಫಾಯಿದೆ ಇಲ್ಲ. ಆದರೆ ಕೇಂದ್ರ ಸಚಿವೆ ಮೇನಕಾ ಗಾಂಧಿ ಮೊದಲಿಗೆ ಈ ಬಗ್ಗೆ ತನಿಖೆ ಆಗಲಿ ಬಿಡಿ ಎಂದಿದ್ದರು. ಆ ನಂತರ ಸರಕಾರದ ನಿಲುವು ಬೇರೆ ಎಂದು ಗೊತ್ತಾದ ನಂತರ ಸುಮ್ಮನಾದರು.
#MeToo ಪ್ರಕರಣ ನಿರ್ವಹಿಸಲು ನ್ಯಾಯಾಧೀಶರ ಸಮಿತಿ ರಚನೆ: ಮೇನಕಾ ಗಾಂಧಿ
ಸರಕಾರದ ಸಚಿವರಾಗಿ ಕೇಳಿಬಂದ ಆರೋಪವಲ್ಲ
ಈ ವಿಚಾರವಾಗಿ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ನೀಡಬಾರದು ಎಂದು ತೀರ್ಮಾನ ಮಾಡಲಾಗಿದೆ. ಈ ವಿವಾದದ ಬಗ್ಗೆ ಹೇಳುವ ವಿಚಾರಗಳೇನಿದ್ದರೂ ಎಂ.ಜೆ.ಅಕ್ಬರ್ ಅವರೇ ಹೇಳಲಿ. "ಸರಕಾರದಲ್ಲಿನ ಸಚಿವರಾಗಿ ಅವರ ನಡತೆ ಬಗ್ಗೆ ಕೇಳಿಬಂದ ಆಕ್ಷೇಪ ಇದಲ್ಲ. ಆದ್ದರಿಂದ ಇದು ಸರಕಾರಕ್ಕೆ ಸಂಬಂಧಿಸಿದ ಸಂಗತಿ ಅಲ್ಲ. ಸಂಪಾದಕರಾಗಿದ್ದಾಗ ಆದ ಘಟನೆ ಎಂಬ ಆರೋಪ ಬಂದಿರುವುದರಿಂದ ಏನನ್ನೂ ಹೇಳುವುದಿಲ್ಲ" ಎಂದು ಮೂಲಗಳು ತಿಳಿಸಿವೆ.