3 ತಿಂಗಳಲ್ಲಿ ಭಯೋತ್ಪಾದನೆ ನಿಯಂತ್ರಿಸಿ, ಇಲ್ಲದಿದ್ದರೆ...: ಪಾಕಿಸ್ತಾನಕ್ಕೆ ಎಚ್ಚರಿಕೆ
ನವದೆಹಲಿ, ಜೂನ್ 21: ಈ ವರ್ಷದ ಅಕ್ಟೋವರ್ ತಿಂಗಳ ಒಳಗೆ ದೇಶದಲ್ಲಿ ಚಟುವಟಿಕೆ ನಡೆಸುತ್ತಿರುವ ಭಯೋತ್ಪಾದನಾ ಸಂಘಟನೆಗಳನ್ನು ಮಟ್ಟ ಹಾಕಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದ ಹಣಕಾಸು ಕಾರ್ಯಪಡೆ (ಎಫ್ಎಟಿಎಫ್) ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದೆ.
ವಿಶ್ವಸಂಸ್ಥೆ ಪಟ್ಟಿಮಾಡಿರುವ ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಇದ್ದರೆ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು ತೀಕ್ಷ್ಣ ಎಚ್ಚರಿಕೆ ರವಾನಿಸಿದೆ.
ಬಾಲಕೋಟ್ ದಾಳಿಯ 'ರಹಸ್ಯ' ಬಹಿರಂಗಪಡಿಸಿದ ವಾಯುಪಡೆ
ಈ ವಿಚಾರದಲ್ಲಿ ಪಾಕಿಸ್ತಾನದ ರಕ್ಷಣೆಗೆ ಚೀನಾ ಧಾವಿಸಿದ್ದರೂ, ಆ ದೇಶಕ್ಕೆ ನೀಡಿದ ಅಂತಿಮ ಎಚ್ಚರಿಕೆಯ ಸಂದೇಶಕ್ಕೆ ಅದು ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನವನ್ನು ಜಾಗತಿಕ ಕಾವಲುನಾಯಿ ಈಗಾಗಲೇ 'ಬೂದು ಪಟ್ಟಿ'ಗೆ ಸೇರಿಸಿದೆ. ಅಕ್ರಮ ಹಣವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ಪೂರೈಕೆಯನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣಕ್ಕೆ ಪಾಕಿಸ್ತಾನದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿದರೆ ಆ ದೇಶವು ಜಾಗತಿಕ ನಿರ್ಬಂಧನೆಗೆ ಒಳಪಡಬೇಕಾಗುತ್ತದೆ.
ಪಾಕ್ ಜೊತೆ ಮಾತುಕತೆಗೆ ಭಾರತ ಸಿದ್ಧ, ಪಾಕ್ ಹೇಳಿಕೆಗೆ ಭಾರತದ ಗುದ್ದು
ಇದರಿಂದ ಅದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಯಾವುದೇ ಜಾಗತಿಕ ಸಂಸ್ಥೆಗಳು ಹಾಗೂ ದೇಶಗಳಿಂದ ಆರ್ಥಿಕ ನೆರವನ್ನು ಪಡೆದುಕೊಳ್ಳದ ಸ್ಥಿತಿಗೆ ತಲುಪಲಿದೆ.
ಹಫೀಜ್ ಸಯೀದ್, ಮೌಲಾ ಮಸೂದ್ ಅಜರ್ ಮತ್ತು ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಇತರೆ ಭಯೋತ್ಪಾದಕರ ವಿರುದ್ಧ ಪಾಕಿಸ್ತಾನ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಭಾರತ ಹಾಗೂ ಇತರೆ ದೇಶಗಳು ಆರೋಪಿಸಿದ್ದವು. ಪಾಕಿಸ್ತಾನದ ನೆಲೆಯಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಸಕ್ರಿಯವಾಗಿದ್ದು, ಅದನ್ನು ತಡೆಯುವ ಕಾರ್ಯ ನಡೆಯುತ್ತಿಲ್ಲ. ಅಂತಾರಾಷ್ಟ್ರೀಯ ಸಂಸ್ಥೆ ನಿಗದಿಪಡಿಸಿದ ಗುಣಮಟ್ಟದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ದೂರಿದ್ದವು.