ಕೇಂದ್ರದ ವಿರುದ್ಧ ಕೂಗು: ಪಂಜಾಬ್ ಮಹಾಪಂಚಾಯತ್ ನಲ್ಲಿ ಲಕ್ಷಲಕ್ಷ ರೈತರು!
ನವದೆಹಲಿ, ಫೆಬ್ರವರಿ.11: ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಕರೆ ಕೊಟ್ಟಿರುವ ಪ್ರತಿಭಟನೆ ತೀವ್ರತೆ ಪಡೆದುಕೊಳ್ಳುತ್ತಿದೆ. ಉತ್ತರ ಪ್ರದೇಶ, ಹರಿಯಾಣದ ಬಳಿಕ ಗುರುವಾರ ಪಂಜಾಬ್ ನಲ್ಲಿ ಕಿಸಾನ್ ಮಹಾ ಪಂಚಾಯತ್ ನಡೆಸಲಾಗುತ್ತಿದೆ.
ಪಂಜಾಬ್ ಲೂಧಿಯಾನ ಜಿಲ್ಲೆಯ ಜಾಗ್ರಾವ್ ಗ್ರಾಮದಲ್ಲಿ ಕಿಸಾನ್ ಮಹಾ ಪಂಚಾಯತ್ ನಡೆಸುವುದಕ್ಕೆ 31 ರೈತ ಸಂಘಟನೆಗಳು ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ದರ್ಶನ್ ಪಾಲ್ ಸೇರಿದಂತೆ ಹಲವು ರೈತ ಸಂಘಟನೆ ಮುಖಂಡರು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಒಂದು ಲಕ್ಷಕ್ಕಿಂತಲೂ ಅಧಿಕ ರೈತರು ಮಹಾ ಪಂಚಾಯತ್ ಸಭೆಯಲ್ಲಿ ಸೇರುತ್ತಾರೆ ಎಂಬ ನಿರೀಕ್ಷೆಯಿದೆ.
ಛಕ್ಕಾ ಜಾಮ್: ನಡುರಸ್ತೆಯಲ್ಲಿ ಸಿಲುಕಿದ ಜನರಿಗೆ ರೈತರಿಂದ ಆಹಾರ, ನೀರಿನ ವ್ಯವಸ್ಥೆ
ದೆಹಲಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರ ಮೇಲಿನ ದೌರ್ಜನ್ಯವನ್ನು ಮತ್ತು ನಿರಂಕುಶ ಪ್ರಭುತ್ವವನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗಿತ್ತು. ಉತ್ತರ ಪ್ರದೇಶದ ಭಾಗ್ಪತ್ ನಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ ನಲ್ಲಿ ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಲೋಕ ದಳ ಎಚ್ಚರಿಕೆ ನೀಡಿತ್ತು.
"ಉದ್ಯಮಿಗಳಿಗೋಸ್ಕರ ಮೋದಿಯವರ ಮನ ಮಿಡಿಯುತ್ತೆ"
ಉತ್ತರ ಪ್ರದೇಶದ ಸಹರಾಂಪುರ್ ನಲ್ಲಿ ಬುಧವಾರ ನಡೆದ ಕಿಸಾನ್ ಮಹಾಪಂಚಾಯತ್ ಉದ್ದೇಶಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿದರು. ಕೇಂದ್ರ ಸರ್ಕಾರವು ಕೃಷಿ ಸಂಬಂಧಿತ ಕಾಯ್ದೆಗಳನ್ನು ಉದ್ಯಮಿಗಳ ಅನುಕೂಲಕ್ಕೆ ಜಾರಿಗೊಳಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನಸ್ಸು ಉದ್ಯಮಿಗಳಿಗ ಮಿಡಿಯುತ್ತದೆಯೇ ವಿನಃ ರೈತರಿಗಾಗಿ ಅಲ್ಲ. ರೈತರ ಬದಲು ಕೋಟ್ಯಾಧಿಪತಿ ಆಗಿರುವ ಉದ್ಯಮಿಗಳಿಗಾಗಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದರು.
ಕೇಂದ್ರದ ವಿರುದ್ಧ ಪ್ರತಿಭಟನೆ ಮುಂದುವರಿಸಲು ಕರೆ
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದರೆ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು. ರೈತರ ಹೋರಾಟ ಅವರ ಅಸ್ತಿತ್ವದ ಸಂಕೇತವಾಗಿದ್ದು, ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯಬೇಕಿಲ್ಲ. ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವವರೆಗೂ ನಿಮ್ಮ ಹೋರಾಟಕ್ಕೆ ನಿಮ್ಮೊಂದಿಗೆ ನಾವೂ ಕೈಜೋಡಿಸುತ್ತೇವೆ. ವಿವಾದಿತ ಕಾಯ್ದೆಗಳನ್ನೆಲ್ಲ ರದ್ದುಗೊಳಿಸಬೇಕು ಹಾಗೂ ರೈತರ ಬೆಳೆಗೆ ಬೆಂಬಲ ಬೆಲೆಯನ್ನು ನೀಡಬೇಕು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆಗ್ರಹಿಸಿದ್ದಾರೆ.
ಜವಾಹರ್ ಲಾಲ್ ನೆಹರೂ ಬಗ್ಗೆ ಪ್ರಿಯಾಂಕಾ ಪ್ರಸ್ತಾಪ
ಭಾರತದಲ್ಲಿ 1955ರಲ್ಲಿ ಅಂದಿನ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಅವರು ಸಂಗ್ರಹಣೆ ಕಾಯ್ದೆಯನ್ನು ಜಾರಿಗೊಳಿಸಿದ್ದರು. ಆದರೆ ಬಿಜೆಪಿ ಸರ್ಕಾರವು ಅದನ್ನು ರದ್ದುಗೊಳಿಸಿ ಇದೀಗ ಕೋಟ್ಯಾಧಿಪತಿಗಳಿಗಾಗಿ ಹೊಸ ಕಾಯ್ದೆಗಳನ್ನು ಜಾರಿಗೊಳಿಸಲು ಹೊರಟಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ದೂಷಿಸಿದರು.
ಪ್ರಧಾನಿ ಮೋದಿ ರೈತರನ್ನು ಏಕೆ ಭೇಟಿ ಮಾಡುವುದಿಲ್ಲ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೃದಯವು ಬಂಡವಾಳಶಾಹಿಗಳಿಗಾಗಿ ಮಿಡಿಯುತ್ತದೆ. ರೈತರನ್ನು ಭಯೋತ್ಪಾದಕರು ಎಂದು ಕರೆಯುತ್ತಾರೆ. ಮೋದಿಯವರು ಚೀನಾಗೆ ಹೋಗುತ್ತಾರೆ, ಪಾಕಿಸ್ತಾನಕ್ಕೆ ಹೋಗುತ್ತಾರೆ. ಆದರೆ ದೆಹಲಿಯಲ್ಲೇ ಇದ್ದರೂ, ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಮಾತ್ರ ಏಕೆ ಭೇಟಿ ನೀಡುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನೆ ಮಾಡಿದ್ದಾರೆ. ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಕಳೆದ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ.