ಹರಿಯಾಣ: 3 ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ ಮುಂದುವರಿಕೆ
ಚಂಡೀಗಢ, ಸೆಪ್ಟೆಂಬರ್, 09: ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ರೈತರು ತಮ್ಮ ಪ್ರತಿಭಟನಾ ಧರಣಿಯನ್ನು ಅನಿರ್ದಿಷ್ಟ ಅವಧಿಗೆ ಮುಂದುವರಿಸಿದ್ದಾರೆ. ರೈತರ ಈ ಪ್ರತಿಭಟನೆಯು ಮೂರನೇ ದಿನಕ್ಕೆ ಕಾಲಿಡುತ್ತಿದ್ದಂತೆ ಹರಿಯಾಣ ಸರ್ಕಾರವು ಮೊಬೈಲ್ ಇಂಟರ್ನೆಟ್ ಸೇವೆ ಅಮಾನತನ್ನು ಮುಂದುವರಿಸಿದ್ದಾರೆ.
ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ 12:30 ರಿಂದ ಮಂಗಳವಾರ ತಡರಾತ್ರಿಯವರೆಗೆ ಇಂಟರ್ನೆಟ್ ಸ್ಥಗಿತಗೊಳಿಸಲು ಹರಿಯಾಣ ಸರ್ಕಾರ ಆದೇಶ ಮಾಡಿತ್ತು. ಆದರೆ ರೈತರ ಪ್ರತಿಭಟನೆ ಅನಿರ್ದಿಷ್ಟ ಅವಧಿಗೆ ಮುಂದುವರಿದಿದೆ. ಈ ಹಿನ್ನೆಲೆ ಮೊಬೈಲ್ ಇಂಟರ್ನೆಟ್ ಸ್ಥಗಿತ ಆದೇಶವನ್ನು ಸರ್ಕಾರ ಬುಧವಾರ ಮುಂದುವರಿಕೆ ಮಾಡಿತ್ತು. ಬಳಿಕ ಗುರುವಾರವೂ ಕೂಡಾ ಈ ಆದೇಶವನ್ನು ವಿಸ್ತರಣೆ ಮಾಡಿದೆ.
ರೈತರ ಮಹಾಪಂಚಾಯತ್: ಮುತ್ತಿಗೆ ಬೆದರಿಕೆ ಹಿನ್ನೆಲೆ ಭಾರೀ ಭದ್ರತೆ ನಿಯೋಜನೆ
"ಸೆಪ್ಟೆಂಬರ್ 9 ರಂದು ಕರ್ನಾಲ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಬೆಳಿಗ್ಗೆ ಏಳು ಗಂಟೆಯಿಂದ ರಾತ್ರಿ 11:59 ರವರೆಗೆ ಸ್ಥಗಿತಗೊಳಿಸಲಾಗಿದೆ," ಎಂದು ಗುರುವಾರ ಹೊರಡಿಸಲಾಗಿರುವ ಪ್ರಕಟಣೆ ತಿಳಿಸಿದೆ.
ಕಳೆದ ತಿಂಗಳು ಕರ್ನಾಲ್ನಲ್ಲಿ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದರ ವಿರುದ್ದ ರೈತರು ನಡೆಸುತ್ತಿರುವ ಈ ಪ್ರತಿಭಟನೆಯ ಹಿನ್ನೆಲೆ ಜಿಲ್ಲಾ ಅಧಿಕಾರಿಗಳು ಹಾಗೂ ರೈತರ ನಡುವೆ ಬುಧವಾರ ಮತ್ತೊಂದು ಹಂತದ ಮಾತುಕತೆ ನಡೆದಿದೆ. ಆದರೆ ಈ ಮಾತುಕತೆಯೂ ವಿಫಲವಾಗಿದೆ. ಪ್ರತಿಭಟನಾನಿರತ ರೈತರು, "ರೈತರ ತಲೆಯನ್ನು ಒಡೆದು ಹಾಕಿರಿ" ಎಂದು ಹೇಳಿದ್ದ ಕರ್ನಾಲ್ ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾರನ್ನು ಅಮಾನತು ಮಾಡುವಂತೆ ರೈತರು ಆಗ್ರಹ ಮಾಡಿದ್ದಾರೆ. ಈ ಮಾತುಕತೆಯು ವಿಫಲವಾದ ಹಿನ್ನೆಲೆ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಹರಿಯಾಣದಲ್ಲಿ 'ರೈತರ ತಲೆ ಒಡಿಯಿರಿ' ಎಂದಿದ್ದ ಅಧಿಕಾರಿ ವರ್ಗಾವಣೆ
ಇನ್ನು ಈ ಇಂಟರ್ ನೆಟ್ ಸ್ಥಗಿತ ಆದೇಶವನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಅರೋರಾ ಪ್ರಕಟಣೆ ಹೊರಡಿಸಿದ್ದಾರೆ. "ಮೊಬೈಲ್ ಇಂಟರ್ನೆಟ್ ಸೇವೆಗಳು (2G/3G/4G/CDMA/GPRS), ಬ್ಯಾಂಕು ಹಾಗೂ ರಿಚಾರ್ಜ್ ಹೊರತುಪಡಿಸಿ ಎಸ್ಎಮ್ಎಸ್ ಸೇವೆಗಳು, ಹಾಗೂ ಡಾಂಗಲ್ ಸೇವೆಗಳು ಕರ್ನಾಲ್ ಜಿಲ್ಲೆಯಲ್ಲಿ ಸ್ಥಗಿತವಾಗಲಿದೆ. ಕರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ," ಎಂದು ತಿಳಿಸಿದ್ದಾರೆ. ಹಾಗೆಯೇ ಈ ಆದೇಶವನ್ನು ಹರಿಯಾಣದ ಎಲ್ಲಾ ಟೆಲಿಕಾಂ ಸೇವೆಗಳು ಪಾಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಆಗಸ್ಟ್ 28 ರಂದು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದನ್ನು ವಿರೋಧಿಸಿ ರೈತರು ಕರ್ನಾಲ್ ಜಿಲ್ಲೆಯಲ್ಲಿ ಧರಣಿ ಕೂತಿದ್ದಾರೆ. ಈ ಧರಣಿ ಕೂರುವುದಕ್ಕೂ ಮುನ್ನವೇ ಸರ್ಕಾರ ಈ ಪ್ರದೇಶದಲ್ಲಿ ಭಾರೀ ಭದ್ರತೆಯನ್ನು ನಿಯೋಜನೆ ಮಾಡಿದೆ. ಹೊಸ ಅನಾಜ್ ಮಂಡಿಯಲ್ಲಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಬ್ಯಾರಿಕೇಡ್ಗಳನ್ನು ಹಾಕಲಾಗಿದೆ ಹಾಗೂ ಭದ್ರತಾ ಪಡೆಗಳು ಕೂಡಾ ಇದೆ. ಇನ್ನು ರೈತರು ಮುತ್ತಿಗೆ ಹಾಕುತ್ತಾರೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದಂತೆ ಭದ್ರತೆ ಪಡೆಯಲು ನಿಯೋಜನೆ ಮಾಡಲಾಗಿತ್ತು. ಹಾಗೆಯೇ ಮೊಬೈಲ್ ನೆಟ್ವರ್ಕ್ ಅನ್ನು ಬ್ಲಾಕ್ ಮಾಡಲಾಗಿತ್ತು. ಇನ್ನು ಜನರು ಗುಂಪು ಸೇರುವುದನ್ನು ಕೂಡಾ ನಿಷೇಧ ಮಾಡಲಾಗಿತ್ತು.
ಹರಿಯಾಣ ರೈತರ ಮೇಲೆ ಲಾಠಿ ಚಾರ್ಜ್: 'ಮತ್ತೆ ರಕ್ತ ಹರಿದಿದೆ' ಎಂದ ರಾಹುಲ್ ಗಾಂಧಿ
"ಹರಿಯಾಣ ಕರ್ನಾಲ್ ಜಿಲ್ಲೆಯ ಘರೌದಾ ಟೋಲ್ ಪ್ಲಾಜಾದ ಬಳಿ ಪ್ರತಿಭಟನಾನಿರತ ರೈತರ ಮೇಲೆ ದಯೆದಾಕ್ಷಿಣ್ಯ ಇರದಂತೆ ಲಾಠಿ ಬೀಸಿರಿ. ನಿಯಮಗಳನ್ನು ಉಲ್ಲಂಘಿಸಿದವರ ತಲೆಗಳನ್ನು ಒಡೆದು ಹಾಕಿರಿ," ಎಂದು ಉಪ ವಿಭಾಗಾಧಿಕಾರಿ ಆಯುಷ್ ಸಿನ್ಹಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ಹಿನ್ನೆಲೆ ರೈತರು ಸೇರಿದಂತೆ ನೆಟ್ಟಿಗರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಈ ನಡುವೆ ಹರಿಯಾಣದಲ್ಲಿ ಪ್ರತಿಭಟನಾನಿರತ ''ರೈತರ ತಲೆಗಳನ್ನು ಒಡೆದು ಹಾಕಿರಿ'' ಎಂದು ಹಿಂಸಾತ್ಮಾಕವಾಗಿ ಪೊಲೀಸರಿಗೆ ಆದೇಶವನ್ನು ನೀಡಿದ್ದ ಕರ್ನಾಲ್ ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾ ಸೇರಿದಂತೆ ಸುಮಾರು 19 ಐಎಎಸ್ ಅಧಿಕಾರಿಗಳನ್ನು ಹರಿಯಾಣ ಸರ್ಕಾರ ವರ್ಗಾವಣೆ ಮಾಡಿದೆ. ಆದರೆ ರೈತರು ಈ ಅಧಿಕಾರಿಯ ಅಮಾನತು ಮಾಡುವಂತೆ ಆಗ್ರಹ ಮಾಡಿ ಈಗ ಧರಣಿ ಕೂತಿದ್ದಾರೆ.
ಹರಿಯಾಣದಲ್ಲಿ ಪ್ರತಿಭಟನಾನಿರತ ರೈತರ ತಲೆಗಳನ್ನು ಒಡೆದು ಹಾಕಿರಿ ಎಂದು ಪೊಲೀಸರಿಗೆ ಆದೇಶಿಸಿದ ಸರ್ಕಾರಿ ಅಧಿಕಾರಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಉಪ ಮುಖ್ಯಮಂತ್ರಿ ದುಶ್ಯಂತ್ ಚೌತಾಲಾ ಎಚ್ಚರಿಕೆ ನೀಡಿದ್ದರು. ಹಾಗೆಯೇ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಉಪ ವಿಭಾಗಾಧಿಕಾರಿ ಆಯುಷ್ ಸಿನ್ಹಾರ ಈ ಹೇಳಿಕೆಯು ತಪ್ಪು ಎಂದು ಹೇಳಿದ್ದರು. ಆದರೆ ಪೊಲೀಸರ ಕ್ರಮವನ್ನು ಮಾತ್ರ ಸಮರ್ಥನೆ ಮಾಡಿದ್ದರು.
(ಒನ್ ಇಂಡಿಯಾ ಸುದ್ದಿ)