ಕರ್ನಾಲ್ ಘಟನೆ ತನಿಖೆಗೆ ಹರಿಯಾಣ ಸರ್ಕಾರ ಆದೇಶಿಸಿ ಬೆನ್ನಲ್ಲೇ ಪ್ರತಿಭಟನೆ ನಿಲ್ಲಿಸಿದ ರೈತರು
ಕರ್ನಾಲ್, ಸೆಪ್ಟೆಂಬರ್ 11: ಕರ್ನಾಲ್ ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾರನ್ನು ರಜೆ ಮೇಲೆ ಕಳುಹಿಸಿದ ಹಿನ್ನೆಲೆಯಲ್ಲಿ ರೈತರು ಕರ್ನಾಲ್ ಜಿಲ್ಲೆಯಲ್ಲಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ವಾಪಾಸ್ ಪಡೆದಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಹಾಗೂ ರೈತರ ನಡುವಿನ ಈ ನಿರ್ದಿಷ್ಟ ವಿಚಾರದಲ್ಲಿನ ಸಂಘರ್ಷ ಕೊನೆಯಾಗಿದೆ.
ಕರ್ನಾಲ್ ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಲು ಆದೇಶವನ್ನು ನೀಡಿದ್ದು ಮಾತ್ರವಲ್ಲದೇ, "ರೈತರ ತಲೆಯನ್ನು ಒಡೆದು ಹಾಕಿರಿ," ಎಂದು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ರೈತರು ಹಾಗೂ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಹರಿಯಾಣ: 3 ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ ಮುಂದುವರಿಕೆ
ಕಳೆದ ತಿಂಗಳು ಕರ್ನಾಲ್ನಲ್ಲಿ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದರ ವಿರುದ್ದ ರೈತರು ನಡೆಸುತ್ತಿರುವ ಈ ಪ್ರತಿಭಟನೆಯ ಹಿನ್ನೆಲೆ ಜಿಲ್ಲಾ ಅಧಿಕಾರಿಗಳು ಹಾಗೂ ರೈತರ ನಡುವೆ ಬುಧವಾರ ಮತ್ತೊಂದು ಹಂತದ ಮಾತುಕತೆ ನಡೆದಿತ್ತು. ಆದರೆ ಈ ಮಾತುಕತೆ ವಿಫಲವಾಗಿತ್ತು. ಈ ಹಿನ್ನೆಲೆ ಶುಕ್ರವಾರವೂ ಕರ್ನಾಲ್ ಜಿಲ್ಲೆಯಲ್ಲಿ ರೈತರು ಪ್ರತಿಭಟನೆಯನ್ನು ಮುಂದುವರಿಸಿದ್ದರು. ಹಾಗೆಯೇ ಶನಿವಾರ ಈ ಮಾತುಕತೆ ಮತ್ತೆ ನಡೆದಿದ್ದು, ಕರ್ನಾಲ್ ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾರನ್ನು ರಜೆಯ ಮೇಲೆ ಕಳುಹಿಸುವ ಮಾತುಕತೆ ನಡೆಸಲಾಗಿದೆ. ಹಾಗೆಯೇ ಕರ್ನಾಲ್ ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾ ವಿರುದ್ದ ತನಿಖೆಯನ್ನು ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.
ಈ ಬೆನ್ನಲ್ಲೇ ರೈತರು ತಮ್ಮ ಪ್ರತಿಭಟನೆಯನ್ನು ವಾಪಾಸ್ ಪಡೆದುಕೊಂಡಿದ್ದಾರೆ. ಈ ಮೂಲಕ ಕರ್ನಾಲ್ನಲ್ಲಿ ರೈತರು ಹಾಗೂ ಅಧಿಕಾರಿಗಳ ನಡುವಿನ ಸಂಘರ್ಷ ಒಂದು ಮಟ್ಟಿಗೆ ಅಂತ್ಯವಾಗಿದೆ. ಇನ್ನು ಕರ್ನಾಲ್ ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾರನ್ನು ವರ್ಗಾವಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಆಯುಷ್ ಸಿನ್ಹಾ ಸೇರಿದಂತೆ ಸುಮಾರು 19 ಐಎಎಸ್ ಅಧಿಕಾರಿಗಳನ್ನು ಹರಿಯಾಣ ಸರ್ಕಾರ ವರ್ಗಾವಣೆ ಮಾಡಿದೆ. ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾ ಈಗ ನಾಗರಿಕ ಸಂಪನ್ಮೂಲ ಮಾಹಿತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಲಿದ್ದಾರೆ ಎಂದು ಹರಿಯಾಣದ ಸರ್ಕಾರದ ಆದೇಶ ಹೇಳಿತ್ತು. ಆದರೆ ಈಗ ರಜೆಯ ಮೇಲೆ ಕಳುಹಿಸಲಾಗಿದೆ.
ಇನ್ನು ರೈತರು ಪ್ರತಿಭಟನೆ ಆರಂಭ ಮಾಡುತ್ತಿದ್ದಂತೆ ಕರ್ನಾಲ್ ಜಿಲ್ಲೆಯಲ್ಲಿ ನೆಟ್ವರ್ಕ್ ಅನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಈ ಇಂಟರ್ ನೆಟ್ ಸ್ಥಗಿತ ಆದೇಶವನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಅರೋರಾ ಪ್ರಕಟಣೆ ಹೊರಡಿಸಿದ್ದರು. "ಮೊಬೈಲ್ ಇಂಟರ್ನೆಟ್ ಸೇವೆಗಳು (2G/3G/4G/CDMA/GPRS), ಬ್ಯಾಂಕು ಹಾಗೂ ರಿಚಾರ್ಜ್ ಹೊರತುಪಡಿಸಿ ಎಸ್ಎಮ್ಎಸ್ ಸೇವೆಗಳು, ಹಾಗೂ ಡಾಂಗಲ್ ಸೇವೆಗಳು ಕರ್ನಾಲ್ ಜಿಲ್ಲೆಯಲ್ಲಿ ಸ್ಥಗಿತವಾಗಲಿದೆ. ಕರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ," ಎಂದು ತಿಳಿಸಿದ್ದಾರೆ. ಹಾಗೆಯೇ ಈ ಆದೇಶವನ್ನು ಹರಿಯಾಣದ ಎಲ್ಲಾ ಟೆಲಿಕಾಂ ಸೇವೆಗಳು ಪಾಲಿಸಬೇಕು ಎಂದು ನಿರ್ದೇಶನ ನೀಡಲಾಗಿತ್ತು.
ಹರಿಯಾಣದಲ್ಲಿ 'ರೈತರ ತಲೆ ಒಡಿಯಿರಿ' ಎಂದಿದ್ದ ಅಧಿಕಾರಿ ವರ್ಗಾವಣೆ
ಇನ್ನು ರೈತರ ಪ್ರತಿಭಟನೆಯ ಬಗ್ಗೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, "ಅಧಿಕಾರಿ ಆಯುಷ್ ಸಿನ್ಹಾ ರೈತರ ಬಗ್ಗೆ ಆ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ಈ ಹಿನ್ನೆಲೆ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದಾರೆ. "ನಾವು ಎಲ್ಲಾ ಈ ಕರ್ನಾಲ್ ಪರಿಸ್ಥಿತಿಯ ಬಗ್ಗೆ ತನಿಖೆ ನಡೆಸುತ್ತೇವೆ. ಕೇವಲ ಆಯುಷ್ ಸಿನ್ಹಾ ಬಗ್ಗೆ ಅಲ್ಲ ನಾವು ಸಂಪೂರ್ಣ ಪರಿಸ್ಥಿತಿಯ ಬಗ್ಗೆ ತನಿಖೆ ನಡೆಸುತ್ತೇವೆ," ಎಂದು ಹೇಳಿದ್ದಾರೆ. ಇನ್ನು "ಈ ವಿಚಾರದಲ್ಲಿ ರೈತ ಮುಖಂಡರ ತಪ್ಪು ಇದೆ ಎಂದು ನಮಗೆ ತನಿಖೆಯಲ್ಲಿ ಕಂಡು ಬಂದರೆ ನಾವು ರೈತರ ವಿರುದ್ದವೂ ತನಿಖೆಯನ್ನು ನಡೆಸುತ್ತೇವೆ," ಎಂದು ಗೃಹ ಸಚಿವ ಅನಿಲ್ ವಿಜ್ ಈ ಹಿಂದೆ ತಿಳಿಸಿದ್ದಾರೆ.
ಇನ್ನು ಈ ವಿಚಾರದಲ್ಲಿ ಹೇಳಿಕೆ ನೀಡಿರುವ ರಾಕೇಶ್ ಟಿಕಾಯತ್, "ಸಿಂಘು ಹಾಗೂ ಟಿಕ್ರಿ ಗಡಿಯಲ್ಲಿ ನಾವು ಖಾಯಂ ಆಗಿ ಪ್ರತಿಭಟನೆ ನಡೆಸುತ್ತೇವೆ," ಎಂದಿದ್ದಾರೆ.
(ಒನ್ ಇಂಡಿಯಾ ಸುದ್ದಿ)