ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಭಾವಪೂರ್ಣ ವಿದಾಯ
ನವದೆಹಲಿ, ಜುಲೈ 23: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾಳೆ ರಾಷ್ಟ್ರಪತಿ ಭವನವನ್ನು ತೊರೆಯಲಿದ್ದಾರೆ. ಅವರ ಜಾಗಕ್ಕೆ ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬರಲಿದ್ದಾರೆ. ಹೀಗಾಗಿ ಇಂದು ಅವರಿಗೆ ವಿದಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ, ಲೋಕಸಭಾ ಸ್ಪೀಕರ್, ಪ್ರಧಾನಿ ಆದಿಯಾಗಿ ಸಂಸತ್ ಸದಸ್ಯರೆಲ್ಲರೂ ಉಪಸ್ಥಿತರಿದ್ದು ಪ್ರಣಬ್ ಮುಖರ್ಜಿಯವರಿಗೆ ಭಾವಪೂರ್ಣ ವಿದಾಯ ಹೇಳಿದರು.
ಈ ಸಂದರ್ಭದಲ್ಲಿ ತಮ್ಮ ವ್ಯಕ್ತಿತ್ವ ನಿರ್ಮಿಸಿದ ಸಂಸತ್ತಿಗೆ ಹಾಗೂ ಉಪಸ್ಥಿತರಿದ್ದ ಎಲ್ಲರಿಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಧನ್ಯವಾದ ಸಮರ್ಪಿಸಿದರು.
"ನಾನು ಸಂಸತ್ತಿನ ಕೊಡುಗೆ ಎಂದರೆ ತಪ್ಪಾಗಲಾಗದು. ನನ್ನ ರಾಜಕೀಯ ದೃಷ್ಠಿಕೋನಕ್ಕೆ ಸಂಸತ್ ಮಹತ್ವದ ಕೊಡುಗೆ ನೀಡಿದೆ. ಎರಡೂ ಸಭೆಗಳಲ್ಲಿ ನಡೆದ ಗಂಭೀರ ಚರ್ಚೆಗಳಿಂದ ನಾನು ಬಹಳಷ್ಟನ್ನು ಕಲಿತಿದ್ದೇನೆ," ಎಂದು ಹೇಳಿದ ಪ್ರಣಬ್ ಮುಖರ್ಜಿ ಜುಲೈ 22, 1969ರಂದು ತಾವು ಹಾಜರಾದ ಸಂಸತ್ತಿನ ಮೊದಲ ಅಧಿವೇಶನವನ್ನು ನೆನಪಿಸಿಕೊಂಡರು.
ಕಳೆದ 37 ವರ್ಷಗಳಿಂದ ನಾನು ರಾಜ್ಯಸಭೆಯ ಸದಸ್ಯನಾಗಿದ್ದೇನೆ. ನಾಲ್ಕು ಬಾರಿ ಪಶ್ಚಿಮ ಬಂಗಾಳದಿಂದ ಹಾಗೂ ಒಮ್ಮೆ ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದೇನೆ ಎಂದು ಪ್ರಣಬ್ ಹೇಳಿದರು. ಇದೇ ಸಮಯದಲ್ಲಿ ರಾಷ್ಟ್ರಪತಿಗಳು ಇಂದಿರಾ ಗಾಂಧಿ ಜತೆಗಿನ ತಮ್ಮ ಒಡನಾಟದ ನೆನಪುಗಳನ್ನೂ ಹಂಚಿಕೊಂಡರು.
ತಮ್ಮ ಅವಧಿಯಲ್ಲೇ ಜಿಎಸ್ಟಿ ಜಾರಿಯಾಗಿದ್ದಕ್ಕೆ ರಾಷ್ಟ್ರಪತಿಗಳು ಸಂತಸ ಹಂಚಿಕೊಂಡರು. ಆದರೆ ಸಂಸತ್ತಿನ ಚರ್ಚೆಯ ಮಟ್ಟದ ನಿರಂತರ ಕುಸಿತಕ್ಕೆ ರಾಷ್ಟ್ರಪತಿಗಳು ಬೇಸರ ವ್ಯಕ್ತಪಡಿಸದರು.
ಇದಕ್ಕೂ ಮೊದಲು ಭಾರತೀಯ ಸೇನೆಯ ದಂಡ ನಾಯಕರೂ ಆಗಿರುವ ರಾಷ್ಟ್ರಪತಿಗಳಿಗೆ ಇಂದು ಸೇನೆಯ ಮೂರೂ ಪಡೆಗಳ ಮುಖ್ಯಸ್ಥರೂ ವಿದಾಯ ಹೇಳಿದರು. ನಂತರ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸಂಸತ್ ಸದಸ್ಯರೆಲ್ಲರ ಸಹಿ ಇದ್ದ ಕಾಫಿ ಟೇಬಲ್ ಬುಕ್ ಅನ್ನು ರಾಷ್ಟ್ರಪತಿಗಳಿಗೆ ಉಡುಗೊರೆಯಾಗಿ ನೀಡಿದರು.
ಸಮಾರಂಭದಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಪ್ರಣಬ್ ಮುಖರ್ಜಿಯವರ ಮುಂದಿನ ಬಾಳ್ವೆಗೆ ಶುಭ ಹಾರೈಸಿದರು. ಇದಕ್ಕೂ ಮೊದಲು ಶನಿವಾರ ಪ್ರಧಾನಿ ನರೇಂದ್ರ ಮೋದಿ ಹಮ್ಮಿಕೊಂಡಿದ್ದ ವಿದಾಯದ ಔತಣಕೂಟದಲ್ಲಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾಳೆ ಅಂದರೆ ಸೋಮವಾರ 7.30ಕ್ಕೆ ರಾಷ್ಟ್ರವನ್ನುದ್ದೇಶಿಸಿ ವಿದಾಯ ಭಾಷಣ ಮಾಡಲಿದ್ದಾರೆ. ರಾಷ್ಟ್ರಪತಿಯಾಗಿ ಇದು ಅವರ ಕೊನೆಯ ಭಾಷಣವಾಗಲಿದೆ. ದೇಶದ 14ನೇ ರಾಷ್ಟ್ರಪತಿಯಾಗಿ ರಾಮ್ ನಾಥ್ ಕೋವಿಂದ್ ಜುಲೈ 25ರಂದು ಅಧಿಕಾರ ಸ್ವೀಕರಿಸಲಿದ್ದಾರೆ.