ಕರಾವಳಿಯಲ್ಲಿ ಹೈ ಅಲರ್ಟ್: ಮಳೆ ಅಬ್ಬರ ಇನ್ನಷ್ಟು ಹೆಚ್ಚಾಗುವ ಮುನ್ಸೂಚನೆ
ಬೆಂಗಳೂರು, ಮೇ 1: ಒಡಿಶಾವನ್ನು ದಾಟಿ ದಕ್ಷಿಣ ಭಾರತಕ್ಕೆ ನುಗ್ಗಿರುವ 'ಫನಿ' ಚಂಡಮಾರುತ, ರಾಜ್ಯದ ಅನೇಕ ಕಡೆಗಳಲ್ಲಿ ಅನಾಹುತ ಸೃಷ್ಟಿಸಿದೆ. ಬಿಸಿಲಿನ ಬೇಗೆ, ಕುಡಿಯುವ ನೀರಿನ ಕೊರತೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಜನರಿಗೆ ಮಳೆರಾಯ ತುಸು ನೆಮ್ಮದಿ ನೀಡಿದ್ದರೂ, ಅದರಿಂದ ಉಂಟಾಗುತ್ತಿರುವ ಅವಘಡಗಳು ಕಂಗೆಡಿಸಿವೆ.
ರಾಜ್ಯದ ಅನೇಕ ಭಾಗಗಳಲ್ಲಿ ಭಾನುವಾರದಿಂದಲೇ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಮಂಗಳವಾರ ರಾತ್ರಿ ಮಳೆಯ ಅಬ್ಬರ ಹೆಚ್ಚಾಗಿದೆ. ಜತೆಗೆ ಜೋರಾಗಿ ಬೀಸುತ್ತಿರುವ ಗಾಳಿ ಅಪಾರ ಹಾನಿ ಸೃಷ್ಟಿಸಿದೆ.
ಬಿರುಗಾಳಿ ಮಳೆಗೆ ರಾಜ್ಯದಾದ್ಯಂತ ಸುಮಾರು 150 ಮನೆಗಳಿಗೆ ಹಾನಿಯಾಗಿದೆ. ಬೆಂಗಳೂರಿನಲ್ಲಿಯೂ ಮಳೆಯ ಅಬ್ಬರ ಜೋರಾಗಿತ್ತು. ತುಮಕೂರು ಜಿಲ್ಲೆಯ ಹಲವೆಡೆ ಮಂಗಳವಾರ ರಾತ್ರಿ ವರುಣ ಅಬ್ಬರಿಸಿದ್ದಾನೆ. ಕೊರಟಗೆರೆ ತಾಲ್ಲೂಕಿನ ದುಗ್ಗೇನಹಳ್ಳಿ ಗ್ರಾಮದಲ್ಲಿ ಸಿದ್ದಪ್ಪ ಎಂಬುವವರ ಮನೆಯ ಶೀಟುಗಳು ಗಾಳಿಗೆ ಹಾರಿಹೋಗಿವೆ. ಡಕ್ಲಾರಾಂ ಎಂಬುವವರು ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣವಾಗಿ ನೆಲಕಚ್ಚಿವೆ.
ಬೆಂಗಳೂರಿನಲ್ಲಿ ಮಳೆ, ಇನ್ನೂ ಎರಡು ದಿನ ಅಬ್ಬರ ಸಾಧ್ಯತೆ
ತಿಪಟೂರಿನ ಗೊರಗೊಂಡನಹಳ್ಳಿಯಲ್ಲಿ ಶಿವಕುಮಾರ್ ಎಂಬುವವರಿಗೆ ಸೇರಿದ 2.5 ಎಕರೆ ಜಮೀನಿನಲ್ಲಿನ ಬೆಳೆ ಮಳೆ ಗಾಳಿಗೆ ನಾಶವಾಗಿದೆ. ಆಲ್ಬೂರು ಬಳಿ ಮಲ್ಲೇಶ್ ಎಂಬುವವರಿಗೆ ಸೇರಿದ ಕೋಳಿಫಾರಂ ಮೇಲೆ ಮರ ಬಿದ್ದು ನೂರಾರು ಕೋಳಿಗಳು ಸಾವಿಗೀಡಾಗಿವೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಟನಾಯಕನಹಳ್ಳಿ ಗ್ರಾಮದಲ್ಲಿ ಪಾರ್ಥಲಿಂಗೇಶ್ವರ ದೇವಸ್ಥಾನಕ್ಕೆ ಸಿಡಿಲು ಬಡಿದು ನಂದಿ ವಿಗ್ರಹಕ್ಕೆ ಹಾನಿಯಾಗಿದೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ಕೂಡ ಭಾರಿ ಮಳೆ ಸುರಿದಿದೆ. ಬೊಂಬಲಾಪುರ ಗ್ರಾಮದಲ್ಲಿ ಸುಮಾರು 50 ಮನೆಗಳ ಚಾವಣಿ ಹಾರಿಹೋಗಿವೆ. ಬೆಂಗಳೂರು ಜಿಲ್ಲೆಯ ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಸಿಡಿಲಿನಿಂದ ಹೊತ್ತಿಕೊಂಡ ಬೆಂಕಿಗೆ ಆಹುತಿಯಾಗಿವೆ.
ಚಂಡಮಾರುತ ಬರುವ ಮುನ್ನ, ಬಂದ ಮೇಲೆ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಏನು?
ಒಡಿಶಾದ ಕರಾವಳಿ ಪ್ರದೇಶಕ್ಕೆ ಶುಕ್ರವಾರ ಮಧ್ಯಾಹ್ನದ ವೇಳೆಗೆ 'ಫನಿ' ಪ್ರವೇಶಿಸಲಿದ್ದು, ಗುರುವಾರ ಬಂಗಾಳ ಕೊಲ್ಲಿಯ ಆಗ್ನೇಯ ಮತ್ತು ನೈರುತ್ಯ ಪ್ರದೇಶದಿಂದ ವಾಯವ್ಯ ಪ್ರದೇಶಕ್ಕೆ ವ್ಯಾಪಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
200 ಕಿ.ಮೀ. ವೇಗದಲ್ಲಿ ಚಂಡಮಾರುತ
ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿ ಬಲಗೊಳ್ಳುತ್ತಿರುವ ಫನಿ ಚಂಡಮಾರುತ 200 ಕಿ.ಮೀ. ವೇಗದಲ್ಲಿ ಒಡಿಶಾದತ್ತ ಧಾವಿಸುತ್ತಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಒಡಿಶಾದಲ್ಲಿ ಎನ್ಡಿಆರ್ಎಫ್ ಪಡೆಗಳನ್ನು ಸಜ್ಜುಗೊಳಿಸಲಾಗಿದೆ. ಸಮುದ್ರ ತೀರದ ಜನರಿಗೆ ಸುರಕ್ಷಿತ ಸ್ಥಳಗಳಲ್ಲಿ 879 ವಿವಿಧೋದ್ದೇಶ ವಸತಿ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಹತ್ತು ಲಕ್ಷ ಮಂದಿಗೆ ಊಟ ವಸತಿಗೆ ವ್ಯವಸ್ಥೆ ಮಾಡಲಾಗಿದೆ.
ಫ್ಯಾನಿ ಸೈಕ್ಲೋನ್ ಕೆಲವೇ ಗಂಟೆಗಳಲ್ಲಿ ಒಡಿಶಾಕ್ಕೆ ಲಗ್ಗೆ: 10 ಅಂಶಗಳು
ದಕ್ಷಿಣದತ್ತ ಮುಖ ಮಾಡಿರುವ 'ಫನಿ'
ಚಂಡಮಾರುತ ದಕ್ಷಿಣ ಭಾರತದತ್ತ ನುಗ್ಗುತ್ತಿದ್ದು, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕರಾವಳಿಗಳಲ್ಲಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಈ ಮೂರೂ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ತಮಿಳುನಾಡು, ಆಂಧ್ರಪ್ರದೇಶದ ಕರಾವಳಿ ಮೇಲೆ ಅಪ್ಪಳಿಸಲಿದೆ ಎಂದು ನಿರೀಕ್ಷಿಸಲಾಗಿದ್ದ ಚಂಡಮಾರುತ ತನ್ನ ದಿಕ್ಕು ಬದಲಿಸಿ ಒಡಿಶಾ ಕರಾವಳಿಯತ್ತ ಸಾಗಿತ್ತು. ಈಗ ಅದು ಪ್ರಬಲವಾಗಿದ್ದು, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ವಿಪರೀತ ಮಳೆ ಸುರಿಸಲಿದೆ.
ಮನೆಯಿಂದ ಹೊರಬರಬೇಡಿ
ಕರಾವಳಿ ತೀರದ ಜಿಲ್ಲೆಗಳಲ್ಲಿ ಒಡಿಶಾ ಸರ್ಕಾರ ಹೈ ಅಲರ್ಟ್ ಘೋಷಿಸಿದೆ. ಯಾವುದೇ ಸಮಯದಲ್ಲಿಯೂ ಕಾರ್ಯಾಚರಣೆ ಇಳಿಯಲು ಸಿದ್ಧರಾಗಿರುವಂತೆ ರಕ್ಷಣಾ ಸಿಬ್ಬಂದಿಗೆ ಸೂಚಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಕರಾವಳಿ ಭಾಗದ ಜನರು ಮನೆಯಿಂದ ಹೊರಕ್ಕೆ ಬರದಂತೆ ಸಹ ನಿರ್ದೇಶಿಸಲಾಗಿದೆ.
ರಾಜ್ಯದಲ್ಲಿ ಮಳೆ ಹೆಚ್ಚಳ
ರಾಜ್ಯದ ಕರಾವಳಿ, ಮಲೆನಾಡು, ಕೇರಳದ ಇಡುಕ್ಕಿ, ಎರ್ನಾಕುಲಂ, ಮಲಪ್ಪುರಂ, ತಮಿಳುನಾಡು, ಪುದುಚೆರಿ ಮುಂತಾದೆಡೆ ವ್ಯಾಪಕ ಮಳೆಯಾಗುವ ಸೂಚನೆ ನೀಡಲಾಗಿದೆ. ಜತೆಗೆ ಗಾಳಿಯೂ ತೀವ್ರವಾಗಿರಲಿದೆ. ಭೂಕುಸಿತ ಉಂಟಾಗುವ ಅಪಾಯವಿದ್ದು, ರಾತ್ರಿ ವೇಳೆ ಪ್ರಯಾಣಿಸದಂತೆ ಎಚ್ಚರಿಕೆ ನೀಡಲಾಗಿದೆ. ಮೇ 3ರಂದು 'ಫನಿ' ಚಂಡಮಾರುತ ಒಡಿಶಾವನ್ನು ಸಂಪೂರ್ಣವಾಗಿ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ.