Fake News: ಕೇಂದ್ರ ಸರ್ಕಾರಿ ನೌಕರರ ವೇತನ ಶೇ30 ಕಟ್?
ನವದೆಹಲಿ, ಮೇ 11: ಕೊರೊನಾ ವೈರಸ್ ವಿರುದ್ಧ ಹೋರಾಟ ಜೊತೆಗೆ ಕೇಂದ್ರ ಸರ್ಕಾರಕ್ಕೆ ಸುಳ್ಳುಸುದ್ದಿ ಹಬ್ಬುವುದನ್ನು ತಡೆಗಟ್ಟಲು ಶ್ರಮಿಸುತ್ತಿದೆ. ಸರ್ಕಾರಿ ನೌಕರರು, ಸಂಬಳ, ಪಿಂಚಣಿ, ನಿವೃತ್ತಿ, ಬ್ಯಾಂಕಿಂಗ್ ವ್ಯವಹಾರ, ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಗುರಿಯನ್ನಾಗಿಸಿಕೊಂಡು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.
ಸುದ್ದಿ ವಾಹಿನಿಯೊಂದರಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸಿಗುವ ಎಲ್ ಟಿಸಿ ಕಡಿತಗೊಳ್ಳಲಿದೆ ಎಂಬ ಸುದ್ದಿ ಬಂದಿತ್ತು. ರಜೆ ದಿನದ ಭತ್ಯೆ, ಒಟಿಎ, ಮೆಡಿಕಲ್ ಭತ್ಯೆ ಸೇರಿದಂತೆ ಹಲವು ಭತ್ಯೆಗಳಲ್ಲಿ ಕಡಿತ ಆರಂಭವಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಈಗ ಕೇಂದ್ರ ಸರ್ಕಾರಿ ನೌಕರರ ಸಂಬಳದಲ್ಲಿ ಶೇ 30 ರಷ್ಟು ಕಡಿತವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
Fake news: ಸರ್ಕಾರಿ ನೌಕರರ ಪಿಂಚಣಿ ಮೊತ್ತ ಕಡಿತವಿಲ್ಲ!
ಸಂಬಳ ಕಡಿತವನ್ನು ಹಂತ ಹಂತವಾಗಿ ಮಾಡಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ. ವಿವಿಧ ಸ್ತರಗಳಲ್ಲಿನ ನೌಕರರಿಗೆ ಸಂಬಳ ಕಟ್ ಆಗಲಿದೆ, ಡಿ ಗ್ರೇಡ್, ಗುತ್ತಿಗೆ ಆಧಾರಿತ ನೌಕರರಿಗೆ ಮಾತ್ರ ಸಂಬಳ ಕಡಿತವಾಗುವುದಿಲ್ಲ ಎಂದು ಸುದ್ದಿ ವಾಹಿನಿಯಲ್ಲಿ ಬಂದಿತ್ತು.
ಸತ್ಯಾ ಸತ್ಯತೆ: ವೇತನ ಆಯೋಗ ಶಿಫಾರಸ್ಸಿನಂತೆ ಸಂಬಳ, ಭತ್ಯೆ ಎಲ್ಲವೂ ಸಿಗಲಿದ್ದು, ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪಿಂಚಣಿ ಮೊತ್ತ ಕಡಿತ, ಸಂಬಳ ಅಥವಾ ಭತ್ಯೆ ಕಡಿತ ಎಲ್ಲವೂ ಸುಳ್ಳು ಸುದ್ದಿ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಏಪ್ರಿಲ್ 6ರಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಸಂಸದರ ಸಂಬಳದಲ್ಲಿ ಶೇ 30ರಷ್ಟು ಕಡಿತಗೊಳಿಸುವ ಬಗ್ಗೆ ಮಾತ್ರ ನಿರ್ಣಯ ಕೈಗೊಂಡಿದ್ದು ಬಿಟ್ಟರೆ ಕೇಂದ್ರ ಸರ್ಕಾರಿ ನೌಕರರ ಸಂಬಳಕ್ಕೆ ಯಾವುದೇ ಕುತ್ತುಂಟಾಗಿಲ್ಲ ಎಂದು ವಿತ್ತ ಸಚಿವಾಲಯ ಸ್ಪಷ್ಟಪಡಿಸಿದೆ.