ರೈತರಿಗೆ ಶಾಕ್ ನೀಡಿದ ಫೇಸ್ಬುಕ್: ಲೈವ್ ಪೇಜ್ ಸ್ಥಗಿತ, ನಂತರ ಪುನರಾರಂಭ
ನವದೆಹಲಿ, ಡಿಸೆಂಬರ್ 21: ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆಯಲ್ಲಿ ನಿರತರಾಗಿದ್ದು 23 ದಿನಗಳೇ ಕಳೆದುಹೋಗಿವೆ. ರೈತರು ತಮ್ಮ ಪ್ರತಿಭಟನೆ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣವನ್ನು ಕೂಡ ಅವಲಂಬಿಸಿದ್ದಾರೆ. ಇದಕ್ಕಾಗಿ ಫೇಸ್ಬುಕ್, ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಪೇಜ್ ಹೊಂದಿ್ದ್ದಾರೆ.
ಹೀಗೆ ರೈತರ ಪ್ರಮುಖ ಫೇಸ್ಬುಕ್ ಪೇಜ್ ಕಿಸಾನ್ ಏಕ್ತಾ ಮೋರ್ಚಾ ಪೇಜ್ನಲ್ಲಿ ಭಾನುವಾರ ಪ್ರತಿಭಟನೆಯ ಲೈವ್ ಪ್ರಸಾರವಾಗುತ್ತಿತ್ತು. ಆದರೆ ಲಕ್ಷಾಂತರ ಜನರನ್ನು ತಲುಪಿದ್ದ ಈ ಲೈವ್ ಪೇಜ್ ಅನ್ನು ಫೇಸ್ಬುಕ್ ಇದಕ್ಕಿದ್ದಂತೆ ಬ್ಲಾಕ್ ಮಾಡುವ ಮೂಲಕ ರೈತರಿಗೆ ಶಾಕ್ ನೀಡಿತು.
ಉದ್ದೇಶಪೂರ್ವಕವಾಗಿ ಬ್ಲಾಕ್ ಮಾಡಲಾಯಿತೇ?
ಕಿಸಾನ್ ಏಕ್ತಾ ಮೋರ್ಚಾ ಫೇಸ್ಬುಕ್ ಪೇಜ್ ಅನ್ನು ಉದ್ದೇಶಪೂರ್ವಕವಾಗಿ ಬ್ಲಾಕ್ ಮಾಡಲಾಗಿದೆ ಎಂದು ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತವಾಯಿತು. ಭಾರೀ ಸಂಖ್ಯೆಯಲ್ಲಿ ಜನರು ಫೇಸ್ಬುಕ್ ಟ್ಯಾಗ್ ಮಾಡಿ ಟೀಕೆಗಳನ್ನು ಮಾಡಿದರು. ಜನರ ಮತ್ತು ರೈತರ ಪ್ರತಿಭಟನೆ ದೃಷ್ಟಿಯಿಂದ ಫೇಸ್ಬುಕ್ ಪೇಜ್ ಅನ್ನು ಮತ್ತೆ ಸಕ್ರಿಯಗೊಳಿಸಿದೆ.
ರೈತರ ಧ್ವನಿ ಅಡಗಿಸಲು ಪ್ರಯತ್ನದ ಆರೋಪ!
ಕಿಸಾನ್ ಏಕ್ತಾ ಮೋರ್ಚಾದ ಫೇಸ್ಬುಕ್ ಪೇಜ್ ಅನ್ನು ಇದ್ದಕ್ಕಿದ್ದ ಹಾಗೆ ಬ್ಲಾಕ್ ಮಾಡುವ ಮೂಲಕ ಫೇಸ್ಬುಕ್ ರೈತ ಸಂಘಟನೆಯ ಧ್ವನಿಯನ್ನು ನಿಗ್ರಹಿಸಿದೆ ಎಂದು ರೈತ ಸಂಘಟನೆಗಳು ಆರೋಪಿಸಿದೆ. ಫೇಸ್ಬುಕ್ ಪೇಜ್ ಬ್ಲಾಕ್ ಆದ ಬಳಿಕ ಅದರ ಸ್ಕ್ರೀನ್ಶಾಟ್ ತೆಗೆದು ಜನರು ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದಾರೆ.
ಏನಿದು ರೈತರ ಫೇಸ್ಬುಕ್ ಪೇಜ್?
ಕಿಸಾನ್ ಏಕ್ತಾ ಮೋರ್ಚಾದ ಫೇಸ್ಬುಕ್ ಪೇಜ್ಗೆ ಲಕ್ಷಾಂತರ ಜನರು ಫಾಲೋವರ್ಸ್ ಇದ್ದಾರೆ. ರೈತರು ಪ್ರತಿಭಟನೆ ಮಾಡುತ್ತಿರುವಾಗ ಈ ಫೇಸ್ಬುಕ್ ಖಾತೆಯಿಂದ ಲೈವ್ ಬರಲಾಗುತ್ತಿತ್ತು. ಆದರೆ ಈ ಫೇಸ್ಬುಕ್ ಪೇಜ್ ಕಮ್ಯುನಿಟಿ ಸ್ಟ್ಯಾಂಡರ್ಡ್ಗಳನ್ನು ಪಾಲಿಸುತ್ತಿಲ್ಲ ಎನ್ನುವ ಕಾರಣಕ್ಕೆ ಪೇಜ್ ಬ್ಲಾಕ್ ಮಾಡಿದೆ ಎನ್ನಲಾಗಿತ್ತು.
|
ಪ್ರತಿಭಟನೆಯಿಂದ ಎಚ್ಚೆತ್ತುಕೊಂಡ ಫೇಸ್ಬುಕ್!
ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗ ಫೇಸ್ಬುಕ್ ಕ್ರಮದ ವಿರುದ್ಧ ಆಕ್ರೋಶ ಹೆಚ್ಚಾಯಿತೋ, ಪ್ರತಿಭಟನೆ ಬಿಸಿಯಿಂದ ಫೇಸ್ಬುಕ್ ಪೇಜ್ ಅನ್ನು ಪುನಃ ಆರಂಭಿಸಿ ತನ್ನ ಹೇಳಿಕೆ ಬಿಡುಗಡೆ ಮಾಡಿದೆ. ಕಿಸಾನ್ ಏಕ್ತಾ ಮೋರ್ಚಾ https://www.facebook.com/kisanektamorcha ನ ಫೇಸ್ಬುಕ್ ಪೇಜ್ ಅನ್ನು ನಾವು ಪುನರಾರಂಭಿಸಿದ್ದೇವೆ ಎಂದು ಫೇಸ್ಬುಕ್ ವಕ್ತಾರರು ತಿಳಿಸಿದ್ದಾರೆ. ರೈತರಿಗೆ ಆಗುತ್ತಿರುವ ಅನಾನುಕೂಲತೆಗೂ ಫೇಸ್ಬುಕ್ ವಿಷಾದಿಸಿದೆ.
ಇನ್ನು ಕಿಸಾನ್ ಏಕ್ತಾ ಮೋರ್ಚಾ ಇನ್ಸ್ಟಾಗ್ರಾಮ್ ಖಾತೆಗೂ ತೊಂದರೆ ಉಂಟಾಗಿದೆ. ಇನ್ಸ್ಟಾಗ್ರಾಮ್ ಖಾತೆ ಮೂಲಕವೂ ರೈತರು ಲೈವ್ ಬರುತ್ತಿದ್ದರು. ಆದರೆ ಇಲ್ಲಿ ಪೋಸ್ಟ್ಗಳನ್ನು ಹಾಕಲು ನಿರ್ಬಂಧ ಹೇರಲಾಗಿದೆ ಎಂದು ಆರೋಪವಿದೆ.
ಫೇಸ್ಬುಕ್ ಕಾಲೆಳೆದ ಕಾರ್ತಿ ಪಿ. ಚಿದಂಬರಂ
ಕಾಂಗ್ರೆಸ್ ಸಂಸದ ಕಾರ್ತಿ ಪಿ. ಚಿದಂಬರಂ ಅವರು ರೈತರ ಫೇಸ್ಬುಕ್ ಖಾತೆಯನ್ನು ಬ್ಲಾಕ್ ಮಾಡಿದ್ದರ ಕುರಿತು ಫೇಸ್ಬುಕ್ ಕ್ರಮವನ್ನು ಖಂಡಿಸಿದ್ದು, ಈ ಕುರಿತಾದ ಮಾಧ್ಯಮದ ಸುದ್ದಿಯ ಸ್ಕ್ರೀನ್ಶಾಟ್ ಅನ್ನು ಟ್ವಿಟರ್ನಲ್ಲಿ ಶೇರ್ ಮಾಡುವ ಮೂಲಕ ಫೇಸ್ಬುಕ್ಗೆ ಭಜರಂಗ ದಳದ ಪೋಸ್ಟ್ಗಳನ್ನು ಬ್ಲಾಕ್ ಮಾಡಲು ಯಾವುದೇ ಕಾರಣವಿಲ್ಲ ಎಂದೆನಿಸುತ್ತದೆ. ಈ ಕುರಿತಾಗಿ ಫೇಸ್ಬುಕ್ ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ ಎಂದು ಟಾಂಗ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಇವರು ಫೇಸ್ಬುಕ್ ಟ್ಯಾಗ್ ಮಾಡಿದ್ದಾರೆ.