ಫೇಸ್ಬುಕ್ ಇಂಡಿಯಾದ ಉನ್ನತ ಹುದ್ದೆಯಿಂದ ಹೊರಬಂದ ಅಂಕಿದಾಸ್
ನವದೆಹಲಿ,ಅಕ್ಟೋಬರ್ 27: ಫೇಸ್ಬುಕ್ ಇಂಡಿಯಾದ ಉನ್ನತ ಅಧಿಕಾರಿ ಅಂಕಿದಾಸ್ ತಮ್ಮ ಹುದ್ದೆಯನ್ನು ತ್ಯಜಿಸಿ ಹೊರಬಂದಿದ್ದಾರೆ.
ಈ ಕುರಿತು ಫೇಸ್ಬುಕ್ ಮಂಗಳವಾರ ತಿಳಿಸಿದೆ. ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಫೇಸ್ಬುಕ್ನ ಸಾರ್ವಜನಿಕ ನೀತಿ ಮುಖ್ಯಸ್ಥರಾಗಿದ್ದ ಅಂಕಿದಾಸ್ ಅವರು ಸಾರ್ವಜನಿಕ ಸೇವೆಯಲ್ಲಿ ಆಸಕ್ತಿವಹಿಸುವ ಉದ್ದೇಶದಿಂದ ಹುದ್ದೆಯಿಂದ ತೆರೆಳಲು ನಿರ್ಧರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಫೇಸ್ಬುಕ್ ದೇಶದಲ್ಲಿ ರಾಜಕೀಯ ವಿಷಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದು ಇತ್ತೀಚಿನ ಪತ್ರಿಕಾ ವರದಿಯೊಂದರ ಮೂಲಕ ತಿಳಿದುಬಂದಿತ್ತು. ಇದಾದ ಒಂದು ತಿಂಗಳಿನೊಳಗೆ ಅಂಕಿದಾಸ್ ಅವರು ಹುದ್ದೆ ತ್ಯಜಿಸಲು ಮುಂದಾಗಿದ್ದಾರೆ.
ವರದಿ ಬಳಿಕವೂ, ಫೇಸ್ಬುಕ್ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್ ದಾಸ್ ಮತ್ತು ಕಂಪನಿಯ ನೀತಿಗಳನ್ನು ಸಮರ್ಥಿಸಿಕೊಂಡಿದ್ದರು.ವರದಿ ಪರಿಣಾಮವಾಗಿ ಅಂಕಿ ದಾಸ್ ವಿರುದ್ಧ ಕೆಲವು ಟೀಕೆಗಳು ಕೇಳಿಬಂದಿದ್ದವು.
ಭಾರತದ ಫೇಸ್ಬುಕ್ನ ಉನ್ನತ ಅಧಿಕಾರಿಯಾಗಿರುವ ಅಂಕಿ ದಾಸ್, ಆಡಳಿತ ಪಕ್ಷದೊಂದಿಗಿನ ಕಂಪನಿಯ ಸಂಬಂಧ ಹಾಳಾಗುವ ಭಯದಿಂದ ತೆಲಂಗಾಣದ ಹಿಂದೂ ರಾಷ್ಟ್ರವಾದಿ ಸಂಘಟನೆ, ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರ ವಿರುದ್ಧ ದ್ವೇಷ ಭಾಷಣ ನಿಯಮಗಳನ್ನು ಅನ್ವಯಿಸುವುದನ್ನು ವಿರೋಧಿಸಿದ್ದರು.