ಫೇಸ್ ಬುಕ್ ಮಾಹಿತಿ ಸೋರಿಕೆ; ರವಿಶಂಕರ್ ಪ್ರಸಾದ್ ವರ್ಸಸ್ ರಮ್ಯಾ
ನವದೆಹಲಿ, ಮಾರ್ಚ್ 21: ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ -ಮಾಜಿ ಸಂಸದೆ ರಮ್ಯಾ ಹಾಗೂ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮಧ್ಯದ ಜಟಾಪಟಿ ಹೆಚ್ಚಾಗುತ್ತಿದೆ. ಇರಾಕ್ ನಲ್ಲಿ ಮೂವತ್ತೊಂಬತ್ತು ಭಾರತೀಯರ ಸಾವಿನ ವಿಚಾರದ ಗಮನ ಬೇರೆಡೆ ಸೆಳೆಯುವುದಕ್ಕೆ ಹೀಗೆ ಮಾಡಲಾಗುತ್ತಿದೆ ಎಂದು ರಮ್ಯಾ ಆರೋಪಿಸಿದ್ದಾರೆ.
ಇನ್ನು ಅತಿ ದೊಡ್ಡ ವಿವಾದದ ಸುಳಿಯಲ್ಲಿ ಫೇಸ್ ಬುಕ್ ಸಿಲುಕಿಕೊಂಡಿದೆ. ಮಾಹಿತಿ ವಿನಿಮಯ ಮಾಡಿರುವ ಆರೋಪವು ಕಂಪೆನಿ ವಿರುದ್ಧ ಕೇಳಿಬಂದಿದೆ. ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಈ ಬಗ್ಗೆ ಮಾತನಾಡಿ, ಭಾರತೀಯರ ಮಾಹಿತಿಯನ್ನು ಮಾರಾಟ ಮಾಡಿರುವ ಬಗ್ಗೆ ಖಾತ್ರಿ ಆದರೆ ಫೇಸ್ ಬುಕ್ ನ ಮಾರ್ಕ್ ಜುಕರ್ ಬರ್ಗ್ ಭಾರತಕ್ಕೆ ಬರಬೇಕಾಗುತ್ತದೆ ಎಂದಿದ್ದಾರೆ.
ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಬ್ರಹ್ಮಾಸ್ತ್ರ!
"ಒಂದು ವೇಳೆ ಭಾರತೀಯರ ಬಗೆಗಿನ ಮಾಹಿತಿ ಸೋರಿಕೆಯಲ್ಲಿ ಫೇಸ್ ಬುಕ್ ನ ಪಾತ್ರವಿದೆ ಎಂದು ಗೊತ್ತಾದರೆ ಮಾರ್ಕ್ ಜುಕರ್ ಬರ್ಗ್ ಭಾರತಕ್ಕೆ ಬರುವಂತೆ ಸಮನ್ಸ್ ನೀಡುತ್ತೇವೆ" ಎಂದು ನವದೆಹಲಿಯಲ್ಲಿ ಮಾಧ್ಯಮದವರಿಗೆ ರವಿಶಂಕರ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಅಗತ್ಯ ಬಿದ್ದರೆ ಮಾರ್ಕ್ ಜುಕರ್ ಬರ್ಗ್ ಗೂ ಸಮನ್ಸ್
ಇಂದು ಇಪ್ಪತ್ತು ಕೋಟಿ ಭಾರತೀಯರು ಫೇಸ್ ಬುಕ್ ನಲ್ಲಿ ಇದ್ದಾರೆ. ಒಂದು ವೇಳೆ ಭಾರತೀಯರ ಮಾಹಿತಿಯನ್ನು ಫೇಸ್ ಬುಕ್ ಮೂಲಕ ಹಂಚಿಕೊಂಡಿದ್ದರೆ ನಮ್ಮ ಮಾಹಿತಿ ತಂತ್ರಜ್ಞಾನ ಕಾಯ್ದೆ ಕಠಿಣವಾಗಿದೆ. ಮಾಹಿತಿ ಸೋರಿಕೆ ಆರೊಪದ ಮೇಲೆ ಫೇಸ್ ಬುಕ್ ಕಂಪೆನಿಯ ಅಧಿಕಾರಿಗಳಿಗೂ ಸಮನ್ಸ್ ನೀಡಬಹುದು ಎಂದಿದ್ದಾರೆ.
ಐದು ಕೋಟಿ ಮಂದಿಯ ಮಾಹಿತಿಯ ಸೋರಿಕೆ
ಕೇಂಬಿಜ್ ಅನಲಿಟಿಕಾ ಕಂಪೆನಿಯ ಮೇಲೆ ಆರೋಪ ಇರುವಂತೆ ಫೇಸ್ ಬುಕ್ ಬಳಕೆ ಮಾಡುವ ಐದು ಕೋಟಿ ಮಂದಿಯ ಮಾಹಿತಿಯನ್ನು ಯಾವುದೇ ಅನುಮತಿ ಪಡೆಯದೆ ಬಳಕೆ ಮಾಡಿಕೊಳ್ಳಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಬ್ರೆಕ್ಸಿಟ್ ಅಭಿಯಾನಕ್ಕೆ ಆ ಮಾಹಿತಿ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಇದೆ.
ಚುನಾವಣೆ ಮೇಲೆ ಪ್ರಭಾವ
ಕೇಂಬ್ರಿಜ್ ಅನಲಿಟಿಕಾ ಕಂಪೆನಿಯು ಕೀನ್ಯಾ ಹಾಗೂ ಅಮೆರಿಕದ ಚುನಾವಣೆ ಮೇಲೆ ಪ್ರಭಾವ ಬೀರುವ ಕಾರಣಕ್ಕೆ ಈ ರೀತಿ ಫೇಸ್ ಬುಕ್ ಅನ್ನು ಬಳಸಿಕೊಂಡಿದೆ. ಇಂಥದ್ದನ್ನು ನಾವು ಸಹಿಸಲು ಸಾಧ್ಯವಿಲ್ಲ. ನಮಗೆ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಗೌರವವಿದೆ. ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ರವಿಶಂಕರ್ ಪ್ರಸಾದ್ ವರ್ಸಸ್ ರಮ್ಯಾ ಆರೋಪ ಹಾಗೂ ಪ್ರತ್ಯಾರೋಪ
ಕೇಂಬ್ರಿಜ್ ಅನಲಿಟಿಕಾ ಕಂಪೆನಿಗೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಸೊಷಿಯಲ್ ಮೀಡಿಯಾ ಮ್ಯಾನೇಜ್ ಮೆಂಟ್ ಗೂ ಇರುವ ನಂಟೇನು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ. ಕಾಂಗ್ರೆಸ್ ಕೇಂಬ್ರಿಜ್ ಅನಲಿಟಿಕಾದಲ್ಲಿ ತೊಡಗಿತ್ತು/ತೊಡಗಿದೆ ಎಂಬುದು ಶುದ್ಧ ಸುಳ್ಳು. ಇರಾಕ್ ನಲ್ಲಿ ಮೂವತ್ತೊಂಬತ್ತು ಮಂದಿ ಸಾವಿನ ಬಗ್ಗೆ ನೀವೇಕೆ ಸುಳ್ಳು ಹೇಳಿದಿರಿ ಅಂತ ತಿಳಿಸ್ತೀರಾ? ನೀವು ಮಾಹಿತಿ ಮುಚ್ಚಿಟ್ಟಿರಿ ಮತ್ತು ಆ ವಿಷಯದಿಂದ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಪಕ್ಷದ ವಿರುದ್ಧ ಇಂಥ ಆರೋಪ ಮಾಡುತ್ತಿದ್ದೀರಿ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.