ಕ್ಷಮೆ ಕೇಳಿ, ಇಲ್ಲ ವಿಚಾರಣೆ ಎದುರಿಸಿ, ರಾಹುಲ್ಗೆ ಸುಪ್ರೀಂ ತಾಕೀತು
ನವದೆಹಲಿ, ಜುಲೈ 19 : ಮಾನನಷ್ಟವಾಗುವಂಥ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದು, ಹೇಳಿಕೆಗೆ ಕ್ಷಮಾಪಣೆ ಕೇಳಿ ವಿಷಾದ ವ್ಯಕ್ತಪಡಿಸದಿದ್ದರೆ ವಿಚಾರಣೆಯನ್ನು ಎದುರಿಸಲೇಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಂಗಳವಾರ ತಾಕೀತು ಮಾಡಿದೆ.
1948ರಲ್ಲಿ ನಡೆದಿದ್ದ ಮಹಾತ್ಮಾ ಗಾಂಧಿ ಅವರ ಹತ್ಯೆಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ರಾಹುಲ್ ಗಾಂಧಿ ಹೊಣೆಗಾರರನ್ನಾಗಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಈ ಮೊಕದ್ದಮೆಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ಒಡ್ಡಿತ್ತು.
ಆ ಹೇಳಿಕೆಯನ್ನು ಸಾರ್ವಜನಿಕರ ಹಿತಾಸಕ್ತಿಯಿಂದ ನೀಡಲಾಗಿತ್ತು, ಮತ್ತು ಐತಿಹಾಸಿಕ ಹಾಗು ಸರಕಾರಿ ದಾಖಲೆಗಳ ಆಧಾರದ ಮೇಲೆ ನೀಡಲಾಗಿತ್ತು ಎಂಬುದು ರಾಹುಲ್ ಗಾಂಧಿ ಅವರು ವಾದಿಸುತ್ತಲೇ ಬಂದಿದ್ದಾರೆ. ಇದೇ ಸರ್ವೋಚ್ಚ ನ್ಯಾಯಾಲಯವನ್ನು ಕೆರಳಿಸಿದ್ದು. [ಗಾಂಧಿ ಹತ್ಯೆ : ರಾಹುಲ್ ವಿರುದ್ಧ ಆರೆಸ್ಸೆಸ್ ದೂರು]
ಹಾಗಿದ್ದರೆ, "ನಿಮ್ಮ ಹೇಳಿಕೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅಂದ್ರೆ ಏನು ಎಂಬುದನ್ನು ನೀವು ಸಾಬೀತುಪಡಿಸಬೇಕಾಗುತ್ತದೆ. ನೀವು ನೀಡಿದ ಹೇಳಿಕೆ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದೋ ಇಲ್ವೋ, ಹೇಳಿಕೆಯ ಗುಣಾವಗುಣಗಳನ್ನು ಪರಾಮರ್ಶಿಸಿ ತೀರ್ಪು ನೀಡಲಾಗುವುದು" ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ರಾಹುಲ್ ಗಾಂಧಿ ಅವರನ್ನು ಪ್ರತಿನಿಧಿಸುತ್ತಿರುವ ವಕೀಲ ಕಪಿಲ್ ಸಿಬಲ್ ಅವರ ಉಪಲಬ್ಧಿಯಿದ್ದ ಕಾರಣ ಎರಡು ವಾರ ವಿಚಾರಣೆಯನ್ನು ಮುಂದೂಡಬೇಕು ಎಂದು ರಾಹುಲ್ ಪರ ವಕೀಲ ಕೇಳಿದರು. ಈ ಕಾರಣಕ್ಕಾಗಿ ಮುಂದೂಡಿಕೆ ಕೇಳಬಾರದು ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು ಜುಲೈ 27ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ. ಮತ್ತೊಂದು ಮುಂದೂಡಿಕೆ ನೀಡುವುದಿಲ್ಲವೆಂದೂ ಎಚ್ಚರಿಕೆ ನೀಡಿದ್ದಾರೆ. [ರಾಹುಲ್ ಗಾಂಧಿಗೆ ಕಂಕಣಭಾಗ್ಯ, ಊರೆಲ್ಲಾ ಗುಲ್ಲೋಗುಲ್ಲು!]