Explained: ಭಾರತದಲ್ಲಿ ಭಯ ಹುಟ್ಟಿಸುತ್ತಿರುವುದೇಕೆ ಕೊರೊನಾವೈರಸ್?
ನವದೆಹಲಿ, ಏಪ್ರಿಲ್ 14: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ನಿಯಂತ್ರಣಕ್ಕೆ ಲಸಿಕೆ ವಿತರಣೆ ಜೊತೆಗೆ ಸೋಂಕು ಪರೀಕ್ಷೆಯ ವೇಗ ಹೆಚ್ಚಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೂಚನೆ ನೀಡಿದೆ.
ಭಾರತದಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 88 ದಿನಗಳಲ್ಲಿ 11 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ. ಸೋಮವಾರ ಒಂದೇ ದಿನ 26,46,528 ಜನರಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 22,58,910 ಫಲಾನುಭವಿಗಳಿಗೆ ಮೊದಲ ಡೋಸ್, 3,87,618 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
Explained: ಕೊರೊನಾ ನಿಯಂತ್ರಿಸಲು ಸರ್ಕಾರದಿಂದ ಹೊಸ ನಿರ್ಬಂಧ
ದೇಶದಲ್ಲಿ ಈವರೆಗೂ 11,11,79,578 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ. ಕೊರೊನಾವೈರಸ್ ಸೋಂಕಿತ ಪ್ರಕರಣಗಳು, ಸೋಂಕಿನ ತಪಾಸಣೆ ಮತ್ತು ಲಸಿಕೆ ವಿತರಣೆ ಕುರಿತು ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.
ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ
ದೇಶದಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸ ಮಿತಿ ಮೀರಿದೆ. ಒಂದೇ ದಿನ 1,84,372 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಹೊಸ ದಾಖಲೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1027 ಜನರು ಮಹಾಮಾರಿಗೆ ಬಲಿಯಾಗಿದ್ದರೆ, 82,339 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,38,73,825ಕ್ಕೆ ಏರಿಕೆಯಾಗಿದೆ. ಈವರೆಗೂ 1,23,36,036 ಸೋಂಕಿತರು ಗುಣಮುಖರಾಗಿದ್ದು, 1,72,085 ಮಂದಿ ಪ್ರಾಣ ಬಿಟ್ಟಿದ್ದಾರೆ. 13,65,704 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.
ಶೇ.82ರಷ್ಟು ಕೇಸ್ ಪತ್ತೆಯಾದ ರಾಜ್ಯಗಳ ಪಟ್ಟಿ
ಭಾರತದಲ್ಲಿ ಒಂದು ದಿನದಲ್ಲಿ ಪತ್ತೆಯಾಗಿರುವ 1,84,372 ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳಲ್ಲಿ ಶೇ.82ರಷ್ಟು ಪ್ರಕರಣಗಳು ಕೇವಲ 10 ರಾಜ್ಯಗಳಿಗೆ ಸೇರಿದ್ದಾಗಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್ ಗಢ, ದೆಹಲಿ, ಮಧ್ಯಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಪತ್ತೆಯಾಗಿವೆ. ಆಯಾ ರಾಜ್ಯಗಳಿಗೆ ಸಂಬಂಧಿಸಿದಂ ಅಂಕಿ-ಅಂಶಗಳು ಮೇಲಿನ ಚಿತ್ರದಲ್ಲಿ ಉಲ್ಲೇಖಿಸಲಾಗಿದೆ.
Explained: ಭಾರತದಲ್ಲಿ ಕೊರೊನಾ ಲಸಿಕೆ ವ್ಯರ್ಥಕ್ಕೆ ಕಾರಣವೇನು?
ಶೇ.68ರಷ್ಟು ಸಕ್ರಿಯ ಪ್ರಕರಣಗಳು 5 ರಾಜ್ಯಗಳಲ್ಲಿ ಪತ್ತೆ
ದೇಶದಲ್ಲಿ 13,65,704 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಈ ಪೈಕಿ ಶೇ.68ರಷ್ಟು ಸಕ್ರಿಯ ಪ್ರಕರಣಗಳು ಕೇವಲ ಐದು ರಾಜ್ಯಗಳಿಗೆ ಸಂಬಂಧಿಸಿವೆ ಎಂದು ಗೊತ್ತಾಗಿದೆ. ಮಹಾರಾಷ್ಟ್ರ ಶೇ.43.54, ಛತ್ತೀಸ್ ಗಢ್ ಶೇ.7.99, ಉತ್ತರ ಪ್ರದೇಶ ಶೇ.7.03, ಕರ್ನಾಟಕ ಶೇ.5.76, ಕೇರಳ ಶೇ.3.84 ಹಾಗೂ ಉಳಿದ ರಾಜ್ಯಗಳಲ್ಲಿ ಶೇ.31.84ರಷ್ಟು ಸಕ್ರಿಯ ಪ್ರಕರಣಗಳಿವೆ.
10 ರಾಜ್ಯಗಳಲ್ಲೇ ಶೇ.86ರಷ್ಟು ಜನರು ಕೊರೊನಾಗೆ ಬಲಿ
ಕೊರೊನಾವೈರಸ್ ಸೋಂಕಿಗೆ ಒಂದೇ ದಿನದಲ್ಲಿ 1,027 ಮಂದಿ ಪ್ರಾಣ ಬಿಟ್ಟಿದ್ದು, ಈ ಪೈಕಿ ಶೇ.86ರಷ್ಟು ಸಾವಿನ ಪ್ರಕರಣಗಳು ಕೇವಲ 10 ರಾಜ್ಯಗಳಿಗೆ ಸೇರಿವೆ. ಮಹಾರಾಷ್ಟ್ರ - 281, ಛತ್ತೀಸ್ ಗಢ - 156, ಉತ್ತರ ಪ್ರದೇಶ - 85, ದೆಹಲಿ - 81, ಗುಜರಾತ್ - 67, ಕರ್ನಾಟಕ - 67, ಪಂಜಾಬ್ - 50, ಮಧ್ಯ ಪ್ರದೇಶ - 40, ಜಾರ್ಖಂಡ್ - 29, ರಾಜಸ್ಥಾನ - 28 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಈವರೆಗೂ ಕೊವಿಡ್-19 ಸೋಂಕಿಗೆ 1,72,085 ಜನರು ಬಲಿಯಾಗಿದ್ದಾರೆ.
Explained: ವಿದೇಶ ಪ್ರಯಾಣಕ್ಕೆ ವ್ಯಾಕ್ಸಿನ್ ಪಾಸ್ಪೋರ್ಟ್ ಕಡ್ಡಾಯ
ಒಂದೇ ದಿನ 14 ಲಕ್ಷ ಜನರಿಗೆ ಕೊವಿಡ್-19 ತಪಾಸಣೆ
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪತ್ತೆಗೆ ತಪಾಸಣೆ ವೇಗವನ್ನು ಹೆಚ್ಚಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 14,11,758 ಜನರ ಮಾದರಿಯನ್ನು ತಪಾಸಣೆಗೊಳಪಡಿಸಲಾಗಿದೆ. ದೇಶದಲ್ಲಿ ಈವರೆಗೂ 26,06,18,866 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.
ಕಾರ್ಮಿಕರು ಮತ್ತು ಆರೋಗ್ಯ ಸಿಬ್ಬಂದಿಗೆ ಲಸಿಕೆ
ದೇಶದಲ್ಲಿ 90,48,686 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 55,81,072 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 1,01,36,430 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 50,10,773 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.
60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ
ನಾಲ್ಕನೇ ಹಂತದಲ್ಲಿ ಏಪ್ರಿಲ್ 1ರಿಂದ 45 ವರ್ಷಕ್ಕಿಂತ ಮೇಲ್ಪಟ್ಟರಿಗೆ ಕೊರೊನಾವೈರಸ್ ಲಸಿಕೆ ನೀಡುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಆದೇಶಿಸಿದೆ. ದೇಶದಲ್ಲಿ ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 3,56,50,444 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 8,18,335 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 4,24,66,354 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 24,67,484 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
ದೇಶದಲ್ಲಿ ಮೂರು ಮಾದರಿ ಕೊರೊನಾ ಲಸಿಕೆ ವಿತರಣೆ
ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ. ಇದರ ಮಧ್ಯೆ ಮಾಸ್ಕೋ, ರಷ್ಯಾದಲ್ಲಿ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-ವಿ ಲಸಿಕೆ ವಿತರಿಸುವುದಕ್ಕೂ ಅನುಮೋದನೆ ನೀಡಲಾಗಿದೆ.