ಸೋಂಕಿನಿಂದ ಗುಣಮುಖರಾದವರಿಗೆ ಸದ್ಯಕ್ಕೆ ಲಸಿಕೆ ಏಕೆ ಅಗತ್ಯವಿಲ್ಲ; ತಜ್ಞರು ಹೇಳುವುದಿದು...
ನವದೆಹಲಿ, ಜೂನ್ 11: ಕೊರೊನಾ ಸೋಂಕಿನ ಹರಡುವಿಕೆ ತಡೆಯಲು ದೇಶಾದ್ಯಂತ ಲಸಿಕಾ ಅಭಿಯಾನ ನಡೆಯುತ್ತಿದೆ. ಕೊರೊನಾ ಲಸಿಕೆಗಳ ಅಭಾವದ ನಡುವೆ ಕೇಂದ್ರ ಆರೋಗ್ಯ ಸಚಿವಾಲಯ ಲಸಿಕೆ ಸಂಬಂಧ ಹೊಸ ಮಾರ್ಗಸೂಚಿಯನ್ನೂ ಈಚೆಗೆ ಪರಿಚಯಿಸಿದೆ. ಮಾರ್ಗಸೂಚಿ ಪ್ರಕಾರ, ಕೊರೊನಾ ಸೋಂಕಿನಿಂದ ಗುಣಮುಖರಾದವರು ಲಸಿಕೆ ಪಡೆಯಲು ಮೂರು ತಿಂಗಳ ಅವಧಿ ಕಾಯಬೇಕು ಎಂದು ಹೇಳಲಾಗಿದೆ.
ಗುರುವಾರ ಏಮ್ಸ್ ವೈದ್ಯರು ಹಾಗೂ ಕೊರೊನಾ ರಾಷ್ಟ್ರೀಯ ಕಾರ್ಯಪಡೆಯ ಸದಸ್ಯರನ್ನೊಳಗೊಂಡಂತೆ ಸಾರ್ವಜನಿಕ ಆರೋಗ್ಯ ತಜ್ಞರು ಇನ್ನಷ್ಟು ಸಲಹೆಗಳನ್ನು ನೀಡಿದ್ದಾರೆ. ಕೊರೊನಾದಿಂದ ಗುಣಮುಖರಾದವರಿಗೆ ಲಸಿಕೆ ನೀಡುವ ಅಗತ್ಯವಿಲ್ಲ ಎಂಬುದನ್ನು ಪ್ರತಿಪಾದಿಸಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಏಕೆ ಲಸಿಕೆ ಅಗತ್ಯವಿಲ್ಲ? ಇದಕ್ಕೆ ತಜ್ಞರ ವಿವರಣೆ ಏನು? ಮುಂದೆ ನೋಡಿ...
ಎಲ್ಲರಿಗೂ ಲಸಿಕೆ ನೀಡುತ್ತಿರುವುದೇ ಅಪಾಯಕಾರಿ; ಆರೋಗ್ಯ ತಜ್ಞರ ಎಚ್ಚರಿಕೆ
ಗುಣಮುಖರಾದವರಿಗೆ 3 ತಿಂಗಳು ಲಸಿಕೆ ಅಗತ್ಯವಿಲ್ಲ ಎಂದಿದ್ದ ಸರ್ಕಾರ
ಕೊರೊನಾ ಸೋಂಕು ತಗುಲಿದಾಗ ನೀಡಿದ ಚಿಕಿತ್ಸೆಯಿಂದಾಗಿ ಸೋಂಕಿನಿಂದ ಗುಣಮುಖರಾದ ನಂತರ ದೇಹದಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿರುವ ಕಾರಣ ಮೂರು ತಿಂಗಳ ಕಾಲ ಲಸಿಕೆ ಅಗತ್ಯವಿಲ್ಲ ಎಂದು ಹೇಳಲಾಗಿತ್ತು. ಇದನ್ನು ಏಮ್ಸ್ ವೈದ್ಯರು ಕೂಡ ಸಮರ್ಥಿಸಿದ್ದಾರೆ. ದೇಶದಲ್ಲಿ ಕೊರೊನಾ ಲಸಿಕೆ ಅಭಾವ ಎದುರಾಗಿರುವ ಈ ಸಂದರ್ಭದಲ್ಲಿ ಕೊರೊನಾದಿಂದ ಗುಣಮುಖರಾದವರಿಗೆ ಲಸಿಕೆ ನೀಡುವ ಅಗತ್ಯವಿಲ್ಲ ಎಂದಿದ್ದಾರೆ.
ಮಾತಾಡುತ್ತಾ ಒಂದೇ ವ್ಯಕ್ತಿಗೆ 5 ನಿಮಿಷದಲ್ಲಿ ಎರಡೂ ಡೋಸ್ ಲಸಿಕೆ ಕೊಟ್ಟ ಸಿಬ್ಬಂದಿ
10 ತಿಂಗಳವರೆಗೂ ಸೋಂಕು ಮತ್ತೆ ತಗುಲುವುದಿಲ್ಲ
ಮೊದಲ ಬಾರಿ ಕೊರೊನಾ ಸೋಂಕು ತಗುಲಿದ ನಂತರ ಹತ್ತು ತಿಂಗಳವರೆಗೂ ಮರು ಸೋಂಕು ತಗುಲುವ ಅಪಾಯ ತೀರಾ ಕಡಿಮೆ ಇರುತ್ತದೆ ಎಂದು ಲ್ಯಾನ್ಸೆಟ್ನ ಅಧ್ಯಯನ ತಿಳಿಸಿದೆ. ಯೂನಿವರ್ಸಿಟಿ ಲಂಡನ್ ಸಂಶೋಧಕರು ಅಧ್ಯಯನ ನಡೆಸಿದ್ದು, ಈ ಹಿಂದೆ ಸೋಂಕಿಗೆ ತುತ್ತಾದವರಲ್ಲಿ ಹಾಗೂ ತುತ್ತಾಗದವರಲ್ಲಿ ಪ್ರತಿಕಾಯ ಪ್ರಮಾಣದ ಕುರಿತು ಅಧ್ಯಯನ ನಡೆಸಿ ಈ ಫಲಿತಾಂಶ ಕಂಡುಕೊಳ್ಳಲಾಗಿದೆ ಎಂದು ತಿಳಿಸಿದೆ.
ಗುಣಮುಖರಾದವರು ಸದ್ಯದ ಆದ್ಯತೆಯಲ್ಲ
ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಲಸಿಕೆ ನೀಡಿದರೆ ಪ್ರಯೋಜನಕಾರಿಯಾಗುತ್ತದೆ ಎಂಬುದನ್ನು ಸಮರ್ಥಿಸುವ ಪುರಾವೆಗಳಿಲ್ಲ. ಕೊರೊನಾ ಸೋಂಕು ತಗುಲಿದ ಜನರಿಗೆ ಲಸಿಕೆ ನೀಡುವ ಅಗತ್ಯವಿಲ್ಲ. ಸೋಂಕು ಬಂದವರಿಗೆ ಲಸಿಕೆ ನೀಡಿದರೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂಬುದಕ್ಕೆ ಪುರಾವೆಗಳು ದೊರೆತ ನಂತರ ಜನರಿಗೆ ಲಸಿಕೆ ನೀಡಬಹುದು ಎಂದು ಹೇಳಲಾಗಿದೆ.
ಲಸಿಕಾ ಅಭಿಯಾನದ ಉದ್ದೇಶ ಕೊರೊನಾ ಹರಡುವಿಕೆ ನಿಯಂತ್ರಣವಾಗಿರುವುದರಿಂದ ಈಗಾಗಲೇ ಕೊರೊನಾ ತಗುಲಿರುವವರನ್ನು ಆದ್ಯತೆಯಾಗಿ ಪರಿಗಣಿಸಬೇಕಿಲ್ಲ. ಅವರಿಗೆ ಈ ಹಿಂದಿನ ಚಿಕಿತ್ಸೆಯಿಂದಾಗಿ ನೈಸರ್ಗಿಕವಾಗಿ ಸೋಂಕಿನ ವಿರುದ್ಧ ರಕ್ಷಣೆ ದೊರೆತಿರುವುದರಿಂದ ಲಸಿಕೆ ನೀಡುವ ಅಗತ್ಯವಿಲ್ಲ. ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಾದ ನಂತರ ಗುಣಮುಖರಾದವರಿಗೂ ಲಸಿಕೆ ನೀಡುವ ಕುರಿತು ಆಲೋಚನೆ ಮಾಡಿದರೆ ಒಳಿತು ಎಂದು ಭಾರತೀಯ ತಜ್ಞರ ವರದಿ ಹೇಳಿದೆ.ಆದ್ಯತೆ ಮೇರೆಗೆ ಲಸಿಕೆ ನೀಡಲು ಸಲಹೆ
"ಕೊರೊನಾ ಲಸಿಕೆಗೆ ದೇಶದಲ್ಲಿ ಅಭಾವವಿರುವ ಈ ಸಂದರ್ಭದಲ್ಲಿ ಈಗಾಗಲೇ ಸೋಂಕು ತಗುಲಿರುವವರನ್ನು ಲಸಿಕಾ ಅಭಿಯಾನದಿಂದ ಹೊರಗಿಡುವುದು ಸೂಕ್ತ" ಎಂದು ಏಮ್ಸ್ ಅಧ್ಯಯನದಲ್ಲಿ ಹೇಳಲಾಗಿದೆ. "ಎಲ್ಲರಿಗೂ ಲಸಿಕೆ ನೀಡುವುದರ ಬದಲು ಆದ್ಯತೆ ಮೇರೆಗೆ ಲಸಿಕೆ ನೀಡುವುದು ಒಳಿತು ಎಂದು ತಂಡ ಸಲಹೆ ನೀಡಿದೆ. ಎಲ್ಲರಿಗೂ ಲಸಿಕೆ ನೀಡುವ ಬದಲು ಆದ್ಯತೆಯಲ್ಲಿರುವವರಿಗೆ ನೀಡುವ ಮೂಲಕ ಲಭ್ಯವಿರುವ ಸಂಪನ್ಮೂಲವನ್ನು ಕಾಯ್ದುಕೊಳ್ಳುವುದು ಈಗಿನ ತುರ್ತಾಗಿದೆ" ಎಂದು ಹೇಳಿದೆ.
ಜಿಲ್ಲೆಗಳ ಮಟ್ಟದಲ್ಲಿ ಸೆರೊಸರ್ವೆ ಅವಲಂಬಿತವಾಗಿ ಕೊರೊನಾ ಲಸಿಕೆ ಕಾರ್ಯಸೂಚಿ ರೂಪಿಸಬೇಕು. ಲಸಿಕೆ ಪಡೆದವರಲ್ಲಿ ಮರು ಸೋಂಕಿನ ಕುರಿತು ಅಧ್ಯಯನ ನಡೆಯಬೇಕು. ನಿಯೋಜಿತವಲ್ಲದ ಲಸಿಕಾ ಕಾರ್ಯಕ್ರಮವನ್ನು ಬಿಡಬೇಕು ಎಂದು ಸಲಹೆಗಳನ್ನು ನೀಡಿದೆ.