ಲಸಿಕೆ ಸ್ವಯಂಸೇವಕನ ವಿರುದ್ಧ 100 ಕೋಟಿ ಮಾನಹಾನಿ: ಸೆರಮ್ ನಡೆ ಬಗ್ಗೆ ತಜ್ಞರ ಅಸಮಾಧಾನ
ನವದೆಹಲಿ, ಡಿಸೆಂಬರ್ 1: ಕೊರೊನಾ ವೈರಸ್ಗೆ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿಶೀಲ್ಡ್ ಲಸಿಕೆಯ ಪ್ರಯೋಗಕ್ಕೆ ಒಳಪಟ್ಟ ಸ್ವಯಂಸೇವಕರೊಬ್ಬರು ಲಸಿಕೆಯಿಂದಾಗಿ ಅಡ್ಡಪರಿಣಾಮ ಉಂಟಾಗಿರುವುದಾಗಿ ಆರೋಪಿಸಿ ಪರಿಹಾರಕ್ಕೆ ಆಗ್ರಹಿಸಿದ್ದ ಘಟನೆ ಮತ್ತಷ್ಟು ವಿವಾದದ ರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.
ಲಸಿಕೆ ತೆಗೆದುಕೊಂಡ ಹತ್ತು ದಿನಗಳ ಬಳಿಕ ತಮ್ಮ ಆರೋಗ್ಯದಲ್ಲಿ ಭಾರಿ ಏರುಪೇರು ಉಂಟಾಗಿದ್ದು, ಸ್ಮರಣಶಕ್ತಿ ನಾಶ, ಮಾನಸಿಕ ಸಮಸ್ಯೆ ಮತ್ತು ನರದೌರ್ಬಲ್ಯದಂತಹ ಆರೋಗ್ಯ ಸಮಸ್ಯೆಗಳು ಕಂಡುಬಂದಿದೆ. ಹೀಗಾಗಿ ಸೆರಮ್ ಇನ್ಸ್ಟಿಟ್ಯೂಟ್ ಸಂಸ್ಥೆ ತಮಗೆ ಐದು ಕೋಟಿ ರೂ ಪರಿಹಾರ ನೀಡಬೇಕು ಎಂದು ಚೆನ್ನೈ ಮೂಲದ ವ್ಯಕ್ತಿ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಸೆರಮ್ ಸಂಸ್ಥೆಯು ಆ ವ್ಯಕ್ತಿ ವಿರುದ್ಧ 100 ಕೋಟಿ ರೂ. ಮಾನಹಾನಿ ಪ್ರಕರಣ ದಾಖಲಿಸಿದೆ. ಸಂಸ್ಥೆಯ ಈ ನಡೆ ಸ್ವಯಂಸೇವಕರನ್ನು ಬೆದರಿಸುವ ಕೆಟ್ಟಮಟ್ಟದ ಪ್ರಯತ್ನ ಎಂದು ಅನೇಕ ಪರಿಣತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
5 ಕೋಟಿ ಪರಿಹಾರ ಕೋರಿಕೆ ಹಿಂದೆ ದೋಷಪೂರಿತ ಉದ್ದೇಶ: ಸೆರಮ್ ಸಂಸ್ಥೆ
ಸೆರಮ್ ಸಂಸ್ಥೆಯು ಅವರ ಕಳವಳಗಳು, ಅಡ್ಡಪಡಿಣಾಮದ ಸಮಸ್ಯೆಗಳಂತಹ ವಿಚಾರಗಳ ಕುರಿತು ಕೊರೊನಾ ವೈರಸ್ ಲಸಿಕೆ ಸ್ವಯಂಸೇವಕರೊಂದಿಗೆ ಮಾತುಕತೆ ನಡೆಸಬೇಕಿತ್ತು ಎಂದು ತಜ್ಞರು ಹೇಳಿದ್ದಾರೆ. ಮುಂದೆ ಓದಿ.
ಸೆರಮ್ ನಡೆ ಸರಿಯಲ್ಲ
'ದೂರು ನೀಡಿದ ವ್ಯಕ್ತಿಗೆ ಪ್ರತಿಯಾಗಿ ಸೆರಮ್ ತೆಗೆದುಕೊಂಡ ನಡೆ ಕೆಟ್ಟದಾಗಿದೆ. ಹೆಚ್ಚಿನ ಸ್ವಯಂ ಸೇವಕರು ಪರರ ಹಿತದ ಆಲೋಚನೆಯೊಂದಿಗೆ ಲಸಿಕೆಯ ಪ್ರಯೋಗದಲ್ಲಿ ಭಾಗಿಯಾಗುತ್ತಾರೆ. ಯಾವುದೇ ಗಂಭೀರ ಅಡ್ಡಪರಿಣಾಮದ ಸಮಸ್ಯೆಗಳಿದ್ದಾಗ ಸಂಸ್ಥೆಯು ಅವರ ಕಳವಳಗಳನ್ನು ಬಗೆಹರಿಸಲು ಮುಂದಾಗಬೇಕು. ಅದರ ಬದಲು ಅವರನ್ನೇ ಬೆದರಿಸಿ ಆಕ್ರಮಣ ಮಾಡುವುದು ಸರಿಯಲ್ಲ' ಎಂದು ಪ್ರೊಫೆಸರ್ ಅನಂತ್ ಭಾನ್ ಹೇಳಿದ್ದಾರೆ.
ಜನರ ಗಮನ ತಿರುಗಿಸುವ ಪ್ರಯತ್ನ
ಅಖಿಲ ಭಾರತ ಔಷಧ ಕ್ರಿಯಾ ಜಾಲ (ಎಐಡಿಎಎನ್) ಕೂಡ ಸೆರಮ್ ಸಂಸ್ಥೆಯ ನಡೆಯ ಬಗ್ಗೆ ಆಘಾತ ವ್ಯಕ್ತಪಡಿಸಿದೆ. 'ಇದು ಜನರನ್ನು ಬೆದರಿಸುವ ನಾಚಿಗೆಗೇಡಿನ ಪ್ರಯತ್ನ' ಎಂದು ಅದು ಟೀಕಿಸಿದೆ.
"ಕೊವಿಡ್-19 ಲಸಿಕೆ ತೆಗೆದುಕೊಂಡಿದ್ದಕ್ಕೆ 5 ಕೋಟಿ ಪರಿಹಾರ ಕೊಡಿ"
'ಎಸ್ಎಇದ ವರದಿಯ ಕುರಿತು ತಾವು ಮೌನವಾಗಿರುವುದೇಕೆ ಎಂಬುದನ್ನು ವಿವರಿಸುವ ಬದಲು ಅವರು ತನ್ನ ಪ್ರಯೋಗದಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ. ಸೆರಮ್ನ 2/3ನೇ ಹಂತದ ಪ್ರಯೋಗದಲ್ಲಿ ಸ್ವಯಂಸೇವಕರ ಪ್ರತಿರಕ್ಷಕ ಸಾಮರ್ಥ್ಯ ಹೆಚ್ಚಿಸುವುದರ ಜತೆಗೆ ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು' ಎಂದು ಎಐಡಿಎಎನ್ ಹೇಳಿದೆ.
ಆರೋಪ-ಪ್ರತ್ಯಾರೋಪ
ಕೋವಿಶೀಲ್ಡ್ ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದ ಚೆನ್ನೈನ 40 ವರ್ಷದ ಉದ್ಯಮ ಸಲಹೆಗಾರರೊಬ್ಬರು ಲಸಿಕೆಯಿಂದಾಗಿ ತಮ್ಮಲ್ಲಿ ತೀವ್ರ ಆರೋಗ್ಯ ಸಮಸ್ಯೆಗಳು ಉಂಟಾಗಿವೆ ಎಂದು ಆರೋಪಿಸಿದ್ದರು. ಕಂಪೆನಿ ತಮಗೆ ಐದು ಕೋಟಿ ರೂ ಪರಿಹಾರ ನೀಡಬೇಕು ಎಂದಿದ್ದ ಅವರ, ಲಸಿಕೆಯ ಪರೀಕ್ಷೆ, ಉತ್ಪಾದನೆ ಮತ್ತು ಹಂಚಿಕೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದರು. ಆದರೆ ಇದು ಹಣ ಸಂಪಾದನೆಯ ಕಳ್ಳಮಾರ್ಗ. ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಸುಲಿಗೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದ ಸೆರಮ್ ಸಂಸ್ಥೆ ಅ ಅವರ ವಿರುದ್ಧ 100 ಕೋಟಿ ರೂ ಮಾನಹಾನಿ ಮೊಕದ್ದಮೆ ಹೂಡಿದೆ.
ಲಸಿಕೆಗೂ ಸಮಸ್ಯೆಗೂ ಸಂಬಂಧವಿಲ್ಲ
ಆ ವ್ಯಕ್ತಿ ಆರೋಪಿಸಿರುವ ಅಡ್ಡಪರಿಣಾಮಗಳ ಸಮಸ್ಯೆಗೂ ಸೆರಮ್ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಗೂ ಯಾವುದೇ ಸಾಮಾನ್ಯ ನಂಟು ಪ್ರಾಥಮಿಕ ತನಿಖೆ ವೇಳೆ ಕಂಡುಬಂದಿಲ್ಲ ಎಂದು ಐಸಿಎಂಆರ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧ ತಯಾರಕಾ ಸಂಸ್ಥೆ ಆಸ್ಟ್ರಾಜೆನಿಕಾಗಳು ಸೇರಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆಗೆ ಭಾರತದಲ್ಲಿ ಕೋವಿಶೀಲ್ಡ್ ಎಂದು ಹೆಸರಿಡಲಾಗಿದ್ದು, ದೇಶದಲ್ಲಿ ಅದರ ತಯಾರಿಕೆ ಮತ್ತು ಪ್ರಯೋಗದ ಜವಾಬ್ದಾರಿಯನ್ನು ಸೆರಮ್ ನಿರ್ವಹಿಸುತ್ತಿದೆ.
Recommended Video