'ಹುಲಿ ದಾಳಿ ಮಾಡಿದರೆ ಕೊಲ್ಲುತ್ತೀರಾ?' ಮೋದಿ ಕೊಟ್ಟ ಉತ್ತರಕ್ಕೆ ಗ್ರಿಲ್ಸ್ ಸುಸ್ತು!
"ಪ್ರಕೃತಿಯನ್ನು ನಾವೆಂದಿಗೂ ಅಪಾಯಕಾರಿ ಎಂದು ನೋಡಿಯೇ ಇಲ್ಲ, ನಾವು ಯಾವಾಗ ಪ್ರಕೃತಿಗೆ ಅಭಿಮುಖವಾಗಿ ನಡೆಯುತ್ತೇವೋ ಆಗ ಅಪಾಯ ಎದುರಾಗುತ್ತದೆ... ಮನುಷ್ಯ ಸಂಕುಲಕ್ಕೇ ಅದು ಅಪಾಯದ ಗಂಟೆ, ನಿಸರ್ಗವನ್ನು ಪ್ರೀತಿಸಿ, ಅದನ್ನು ಪೊರೆದರೆ ಅದೂ ನಮ್ಮನ್ನು ಪ್ರೀತಿಸುತ್ತದೆ, ಪೊರೆಯುತ್ತದೆ..." ಪ್ರಖ್ಯಾತ ಟಿವಿ ಶೋ 'ಮ್ಯಾನ್ ವರ್ಸಸ್ ವೈಲ್ಡ್' ನಲ್ಲಿ ಬೇರ್ ಗ್ರಿಲ್ಸ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂಭಾಷಣೆಯ ತುಣುಕು ಇದು.
ಪ್ರಧಾನಿ ನರೇಂದ್ರ ಮೊದಿ ಅವರ ರಾಜಕೀಯದಾಚೆಯ ಬದುಕಿನ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನವನ್ನು ಪ್ರಖ್ಯಾತ ವನ್ಯಪ್ರೇಮಿ, ಸಾಹಸಿ, ಬರಹಗಾರ ಬೇರ್ ಗ್ರಿಲ್ಸ್ ತಮ್ಮ 'ಮ್ಯಾನ್ ವರ್ಸಸ್ ವೈಲ್ಡ್' ಸರಣಿಯಲ್ಲಿ ಮಾಡಿದ್ದು, ಅದು ಆಗಸ್ಟ್ 12 ರಂದು ಪ್ರಸಾರವಾಗಲಿದೆ. ಅದಕ್ಕೂ ಮುನ್ನ ಈ ಸಂದರ್ಶನದ ಕೆಲವು ಆಯ್ದ ಭಾಗಗಳ ತುಣುಕುಗಳನ್ನು ಡಿಸ್ಕವರಿ ಪ್ರಸಾರ ಮಾಡಿದೆ.
ಖ್ಯಾತ ಬ್ರಿಟಿಶ್ ಶೋ 'Man vs Wild' ನಲ್ಲಿ ಪ್ರಧಾನಿ ಮೋದಿ
ಉತ್ತರಾಖಂಡದ ಪ್ರಖ್ಯಾತ ಜಿಮ್ ಕಾರ್ಬೆಟ್ ನ್ಯಾಶ್ನಲ್ ಪಾರ್ಕ್ ನಲ್ಲಿ ಈ ಟಿವಿ ಶೋ ಚಿತ್ರೀಕರಿಸಲಾಗಿದ್ದು, ಪ್ರಕೃತಿಯ ಜೊತೆಗಿನ ತಮ್ಮ ಪಯಣದ ಕುರಿತು ಪ್ರಧಾನಿ ಮೋದಿ ಮುಕ್ತವಾಗಿ ಮಾತನಾಡಿದ್ದಾರೆ. ಈ ಎಪಿಸೋಡ್ ಆಗಸ್ಟ್ 12 ರಂದು ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.
ಅಕಸ್ಮಾತ್ ಹುಲಿ ದಾಳಿ ಮಾಡಿದರೆ...?
ಅಕಸ್ಮಾತ್ ಹುಲಿ ನಿಮ್ಮ ಮೇಲೆ ದಾಳಿ ಮಾಡಿದರೆ ಏನು ಮಾಡುತ್ತೀರಾ? ನೀವು ನಿಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆಂದು ನಾನು ನಿಮಗೆ ಈಟಿಯನ್ನು ಕೊಟ್ಟಿದ್ದೇನೆ ಎಂಬ ಬೇರ್ ಗ್ರಿಲ್ಸ್ ಮಾತಿಗೆ ನಗುತ್ತಲೇ ಉತ್ತರಿಸಿದ ಮೋದಿ, 'ನಾನು ಕಲಿತ ಶಿಕ್ಷಣ ನನಗೆ ಕೊಲ್ಲುವುದನ್ನು ಕಲಿಸಿಲ್ಲ. ನೀವು ಇದನ್ನು(ಈಟಿ) ಹಿಡಿದುಕೊಳ್ಳಲು ಹೇಳಿದ್ದಕ್ಕೆ ನಾನು ಹಿಡಿದಿದ್ದೇನೆ ಅಷ್ಟೆ' ಎಂದಿದ್ದಾರೆ!
ಬಾಲ್ಯದಲ್ಲಿ ಪ್ರಕೃತಿ ಮಡಿಲಲ್ಲಿ ಬದುಕು
ಬಾಲ್ಯದಲ್ಲಿ ತಾವು ಪ್ರಕೃತಿಯ ಮಡಿಲಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಕತೆ, ವನ್ಯಬದುಕಿನ ಜೊತೆಗಿನ ತಮ್ಮ ಕಾಳಜಿ, ಮಳೆಯನ್ನೂ ತಾವು ಸಂಭ್ರಮಿಸುತ್ತಿದ್ದ ರೀತಿ, ಮೊದಲ ಮಳೆಯನ್ನು ಸಂಭ್ರಮಿಸಲು ದೇಶದಾದ್ಯಂತ ಪೋಸ್ಟ್ ಕಾರ್ಡ್ ಗಳನ್ನು ಕಳಿಸುತ್ತಿದ್ದ ದಿನಗಳು.... ಯಾರಿಗೂ ತಿಳಿದಿಲ್ಲದ ಮೋದಿ ಅವರ ಇಂಥ ಹಲವು ಮುಖಗಳು ಈ ಕಾರ್ಯಕ್ರಮದಲ್ಲಿ ಅನಾವರಣಗೊಂಡಿವೆ.
ಪ್ರಕೃತಿಯನ್ನು ಗೌರವಿಸುವುದು ನಮ್ಮ ಮೌಲ್ಯ
ತಮಗೆ ವನ್ಯ ಬದುಕು, ಪರಿಸರದ ಬಗ್ಗೆ ಇರುವ ಕಾಳಜಿ ಮತ್ತು ಅದರ ಸಂರಕ್ಷಣೆಯ ಅಗತ್ಯಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಮೋದಿ ಮಾತನಾಡಿದ್ದಾರೆ. ಹಾಗೆಯೇ ಪ್ರಕೃತಿಯನ್ನು ಆರಾಧಿಸುವ, ಅದನ್ನು ಗೌರವಿಸುವ ಹಿಂದೆ ಭಾರತೀಯರ ಮೌಲ್ಯ ಅಡಗಿದೆ ಎಂಬುದನ್ನೂ ಈ ಸಂದರ್ಭದಲ್ಲಿ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಮೋದಿ ಮಾತಲ್ಲಿ ಇಣುಕಿದ ಗಾಂಧಿ
ಭಾರತ ಸ್ವಚ್ಛತೆ ಮತ್ತು ಶುಚಿತ್ವದ ಬಗ್ಗೆ ಏನೆಲ್ಲ ಪ್ರಯತ್ನ ನಡೆಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಗ್ರಿಲ್ಸ್, "ಭಾರತವನ್ನು ಸ್ವಚ್ಛಗೊಳಿಸಲು ಹೊರಗಿನವರಿಗೆ ಸಾಧ್ಯವಿಲ್ಲ. ನಮ್ಮ ದೇಶವನ್ನು ನಾವೇ ಸ್ವಚ್ಛಗೊಳಿಸಬೇಕು. ಭಾರತೀಯರು ಎಂದಿಗೂ ವೈಯಕ್ತಿಕ ಶುಚಿತ್ವಕ್ಕೆ ಸಾಕಷ್ಟು ಬೆಲೆ ನೀಡುತ್ತ ಬಂದಿದ್ದಾರೆ. ನಾವು ಸಾಮಾಜಿಕ ಶುಚಿತ್ವಕ್ಕೆ ಬೆಲೆ ನೀಡಬೇಕಿದೆ. ಮಹಾತ್ಮಾ ಗಾಂಧಿ ಅವರು ಈ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ನಾವೂ ಇದೇ ಹಾದಿಯಲ್ಲಿ ನಡೆಯುತ್ತಿದ್ದೇವೆ. ಅದು ಫಲ ನೀಡಿದೆ ಸಹ. ಭಾರತ ಈ ದಿಶೆಯಲ್ಲಿ ಸಧ್ಯದಲ್ಲೇ ಯಶಸ್ವಿಯಾಗಲಿದೆ ಎಂದು ನಾನು ಭಾವಿಸಿದ್ದೇನೆ" ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು.