ಸೋನಿಯಾ ಗಾಂಧಿ, ಮಾಯಾವತಿಗೆ ಭಾರತ ರತ್ನ ನೀಡಿ: ಮಾಜಿ ಮುಖ್ಯಮಂತ್ರಿ ಆಗ್ರಹ
ಡೆಹ್ರಾಡೂನ್, ಜನವರಿ 6: ಭಾರತ ರತ್ನ ಪುರಸ್ಕಾರಕ್ಕೆ ಸಂಬಂಧಿಸಿದಂತೆ ಮತ್ತೆ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಹುಜನ ಸಮಾಜಪಕ್ಷದ ಮುಖ್ಯಸ್ಥೆ ಮಾಯಾವತಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
'ಮಹಿಳಾ ಸಬಲೀಕರಣದಲ್ಲಿ ಸೋನಿಯಾ ಗಾಂಧಿ ಮತ್ತು ಮಾಯಾವತಿ ಅವರು ಭಾರಿ ದೊಡ್ಡ ಕೊಡುಗೆ ನೀಡಿದ್ದಾರೆ. ಅವರಿಬ್ಬರೂ ಬಹು ತೀಕ್ಷ್ಣವಾದ ರಾಜಕೀಯ ವ್ಯಕ್ತಿಗಳು. ಹೀಗಾಗಿ ಅವರಿಗೆ ಭಾರತ ರತ್ನ ನೀಡಬೇಕು' ಎಂದು ರಾವತ್ ಅವರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ. ರಾವತ್ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಡಾ ರಾಜ್ಗೆ 'ಭಾರತ ರತ್ನ' ನೀಡುವಂತೆ ಮೋದಿಗೆ ಪತ್ರ ಬರೆದ ಸಂಸದ
'ಸೋನಿಯಾ ಗಾಂಧಿ ಮತ್ತು ಮಾಯಾವತಿ ಇಬ್ಬರೂ ಉತ್ಕೃಷ್ಟ ರಾಜಕಾರಣಿಗಳು. ನೀವು ಸೋನಿಯಾ ಗಾಂಧಿ ಅವರ ರಾಜಕಾರಣವನ್ನು ಒಪ್ಪಬಹುದು ಅಥವಾ ನಿರಾಕರಿಸಬಹುದು. ಆದರೆ ಮಹಿಳಾ ಸಬಲೀಕರಣ ಮತ್ತು ಸಾರ್ವಜನಿಕ ಸೇವೆಗೆ ಅವರು ನೀಡಿದ ಅಪಾರ ಕೊಡುಗೆಯನ್ನು ತಿರಸ್ಕರಿಸಲು ಸಾಧ್ಯವಾಗದು. ಇಂದು ಅವರನ್ನು ಭಾರತದ ಅತ್ಯಂತ ಶ್ಲಾಘನೀಯ ಪ್ರತೀಕವಾಗಿ ಪರಿಗಣಿಸಲಾಗಿದೆ' ಎಂದು ರಾವತ್ ಹೇಳಿದ್ದಾರೆ. ಮುಂದೆ ಓದಿ.
ಮಾಯಾವತಿ ಅವರಿಗೂ ನೀಡಿ
'ಇದೇ ರೀತಿ ಮಾಯಾವತಿ ಅವರು ಶೋಷಿತರು ಹಾಗೂ ದಮನಿತರ ಪರವಾಗಿ ಧ್ವನಿ ಎತ್ತಿದ್ದಾರೆ. ಜತೆಗೆ ಅವರಲ್ಲಿ ತಮ್ಮೊಳಗೆ ನಂಬಿಕೆಯ ಪ್ರಜ್ಞೆಯನ್ನು ಮೂಡಿಸಿದ್ದಾರೆ. ಇವರಿಬ್ಬರಿಗೂ ಈ ವರ್ಷದ ಭಾರತ ರತ್ನ ಪುರಸ್ಕಾರವನ್ನು ನೀಡುವ ಮೂಲಕ ಭಾರತ ಸರ್ಕಾರ ಅವರನ್ನು ಗೌರವಿಸಬೇಕು' ಎಂದು ಒತ್ತಾಯಿಸಿದ್ದಾರೆ.
ಅಂಬೇಡ್ಕರ್ ಅವರಿಗೇ ಕಾಂಗ್ರೆಸ್ ನೀಡಿರಲಿಲ್ಲ
ಆದರೆ ಮಾಯಾವತಿ ಅವರಿಗೆ ಭಾರತ ರತ್ನ ನೀಡಬೇಕು ಎಂಬ ರಾವತ್ ಅವರ ಬೇಡಿಕೆಯು ಸಾರ್ವಜನಿಕರನ್ನು ಮೂರ್ಖರನ್ನಾಗಿಸುವ ತಂತ್ರ ಎಂದು ಬಿಎಸ್ಪಿ ಟೀಕಿಸಿದೆ. 'ಅವರ ಬೇಡಿಕೆಯು ಸಾರ್ವಜನಿಕರನ್ನು ಮರುಳು ಮಾಡುವ ತಂತ್ರವಷ್ಟೇ. ಅದಕ್ಕಿಂತ ಬೇರೇನೂ ಅಲ್ಲ. ದಲಿತ ಐಕಾನ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೇ ಹಿಂದಿನ ಕಾಂಗ್ರೆಸ್ ಸರ್ಕಾರಗಳು ದೇಶದ ಅತ್ಯುನ್ನತ ಗೌರವವನ್ನು ನೀಡುವಲ್ಲಿ ವಿಫಲವಾಗಿದ್ದವು. ಮಾಯಾವತಿ, ಬಿಎಸ್ಪಿ ಸಂಸ್ಥಾಪಕ ಕಾಶೀರಾಮ್ ಸಾಹು ಮತ್ತು ಇತರೆ ಬಿಎಸ್ಪಿ ಮುಖಂಡರು ಒತ್ತಾಯಿಸಿದ ಬಳಿಕವಷ್ಟೇ ನೀಡಲಾಗಿತ್ತು' ಎಂದು ಬಿಎಸ್ಪಿ ಮುಖಂಡ ರಾಮ್ಜಿ ಗೌತಮ್ ಹೇಳಿದ್ದಾರೆ.
'ರತನ್ ಟಾಟಾಗೆ ಭಾರತ ರತ್ನ ನೀಡಬೇಕು': ಟ್ವಿಟ್ಟರ್ ನಲ್ಲಿ ಅಭಿಯಾನ
ಕಾಶಿರಾಮ್ ಸಾಹು ಅವರಿಗೆ ನೀಡಿ
'ಕಾಶಿರಾಮ್ ಸಾಹು ಅವರಿಗೆ ಭಾರತ ರತ್ನ ನೀಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ಆದರೆ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಅದಕ್ಕೆ ಯಾವ ಆಸಕ್ತಿಯನ್ನೂ ತೋರಿಸಿರಲಿಲ್ಲ. ಅವರು ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲಿ ಇಂತಹ ಬೇಡಿಕೆಗಳನ್ನು ಇರಿಸುತ್ತಾರೆ' ಎಂದು ಆರೋಪಿಸಿದ್ದಾರೆ.
ಜಾಮೀನಿನ ಮೇಲಿರುವ ವ್ಯಕ್ತಿಗೆ ಭಾರತ ರತ್ನವೇ?
ಸೋನಿಯಾ ಗಾಂಧಿ ಅವರಿಗೆ ಭಾರತ ರತ್ನ ನೀಡಬೇಕೆಂಬ ಬೇಡಿಕೆಯನ್ನು ಉತ್ತರಾಖಂಡ ರಾಜ್ಯ ಬಿಜೆಪಿ ಉಪಾಧ್ಯಕ್ಷ ದೇವೇಂದ್ರ ಭಾಸಿನ್ ಟೀಕಿಸಿದ್ದಾರೆ. 'ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ, ಜಾಮೀನಿನ ಮೇಲೆ ಹೊರಗಿರುವ ವ್ಯಕ್ತಿಯೊಬ್ಬರಿಗೆ ದೇಶದ ಅತ್ಯುನ್ನತ ಗೌರವ ನೀಡುವ ಕೆಟ್ಟ ಸಂಪ್ರದಾಯ ಆರಂಭಿಸಲು ರಾವತ್ ಬಯಸಿದ್ದಾರೆ. ಅದು ಸಾಧ್ಯವಾಗುವುದಿಲ್ಲ' ಎಂದು ಟೀಕಿಸಿದ್ದಾರೆ.