ಹಾರ್ದಿಕ್ ಪಟೇಲ್ ಗೆ ದೇವೇಗೌಡರ ಕಾಳಜಿ ತುಂಬಿದ ಪತ್ರ
ಅಹ್ಮದಾಬಾದ್, ಸೆಪ್ಟೆಂಬರ್ 04: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹ ಆರಂಭಿಸಿರುವ ಗುಜರಾತಿನ ಪಾಟೀದಾರ್ ಅನಾಮತ್ ಆಂದೋಲನ ಸಮಿತಿ(PAAS) ಮುಖಂಡ ಹಾರ್ದಿಕ್ ಪಟೇಲ್ ಅವರಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಪತ್ರ ಬರೆದು ಕಾಳಜಿ ವ್ಯಕ್ತಪಡಿಸಿದ್ದಾರೆ.
ದೇವೇಗೌಡರು ಬರೆದ ಪತ್ರವನ್ನು ನಿನ್ನೆ ಮಾಧ್ಯಮಗಳಿಗೆ ಹಾರ್ದಿಕ್ ಪಟೇಲ್ ಬಿಡುಗಡೆ ಮಾಡಿದ್ದು, 'ಪಟೇಲ್ ಅವರು ತಮ್ಮ ಆರೋಗ್ಯದ ದೃಷ್ಟಿಯಿಂದ ಉಪವಾಸ ಸತ್ಯಾಗ್ರಹ ಕೈಬಿಡಬೇಕು' ಎಂದು ಗೌಡರು ಮನವಿ ಮಾಡಿದ್ದಾರೆ.
ಯಾವ ಕ್ಷಣವೂ ಪ್ರಾಣ ಹೋಗಬಹುದೆಂದು 'ವಿಲ್' ಘೋಷಿಸಿದ ಹಾರ್ದಿಕ್ ಪಟೇಲ್
ಆಗಸ್ಟ್ 24 ರ ಸಂಜೆಯಿಂದ ಉಪವಾಸ ಆರಂಭಿಸಿರುವ 25 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್, ಈ ಉಪವಾಸ ಹೋರಾಟದ ನಡುವಲ್ಲೇ ನನ್ನ ಪ್ರಾಣ ಹೋದರೆ ಮುಂದೇನು ಮಾಡಬೇಕು ಎಂಬುದನ್ನು ಸಹ ಬರೆದು, ಒಂದು 'ವಿಲ್'(ಮರಣ ಪತ್ರ)ರಚಿಸಿದ್ದಾರೆ.
ದೇವೇಗೌಡ್ರು ಬರೆದ ಪತ್ರದಲ್ಲೇನಿದೆ?
"ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ದಯವಿಟ್ಟು ಈ ಉಪವಾಸ ಸತ್ಯಾಗ್ರಹವನ್ನು ಕೈಬಿಡಿ. ನೀವಿನ್ನೂ ಯುವಕರು ಮತ್ತು ಬಿಸಿರಕ್ತದವರು. ಈ ದೇಶದ ಒಳಿತಿಗಾಗಿ, ಭವಿಷ್ಯಕ್ಕಾಗಿ ನಿಮ್ಮಂಥವರ ಸೇವೆ ಅಗತ್ಯವಿದೆ. ನಿಮ್ಮ ಬೇಡಿಕೆಗಳು ಈಡೇರುವುದಕ್ಕೆ ಉಳಿದೆಲ್ಲ ನಾಯಕರೊಂದಿಗೆ ನಾವೂ ಬೆಂಬಲ ನೀಡುತ್ತೇವೆ. ಆದರೆ ದಯವಿಟ್ಟು ಉಪವಾಸ ಕೈಬಿಡಿ" ಎಂದು ಗೌಡರು ಕಾಳಜಿ ತುಂಬಿದ ಈ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹಾರ್ದಿಕ್ ಗೆ ಗೌಡರ ಸಲಾಂ!
"ನಿಮ್ಮ ಧೈರ್ಯ ಮತ್ತು ಹೋರಾಟದ ಬಗೆಗಿನ ನಿಶ್ಚಲ ಮನಸ್ಸಿನ ಬಗ್ಗೆ ನನಗೆ ಹೆಮ್ಮೆಯಿದೆ. ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ಒದಗಿಸುವ ಸಲುವಾಗಿ ನೀವು ಆರಂಭಿಸಿರುವ ಹೋರಾಟ ನಿಮ್ಮ ಸಮುದಾಯದ ಜನತೆ ಬಗೆಗಿನ ನಿಮ್ಮ ಕಾಳಜಿಯನ್ನು ತೋರಿಸುತ್ತದೆ. ಆದರೆ ಈ ಉಪವಾಸ ಸತ್ಯಾಗ್ರಹದಿಂದ ನಿಮ್ಮ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದೆ ಎಂಬುದು ತಿಳಿದು ಬಹಳ ನೋವಾಯಿತು. ದಯವಿಟ್ಟು ಉಪವಾಸ ಸತ್ಯಾಗ್ರಹ ಹಿಂಪಡೆಯಿರಿ" ಎಂದು ಪತ್ರದಲ್ಲಿ ಗೌಡರು ಬರೆದಿದ್ದಾರೆ.
ಮೋದಿ ಮಧ್ಯಸ್ಥಿಕೆಗೆ ಆಗ್ರಹ
ಹಾರ್ದಿಕ್ ಉಪವಾಸ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಬೇಕು ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಸಹ ಹಾರ್ದಿಕ್ ಪಟೇಲ್ ಉಪವಾಸ ಸತ್ಯಾಗ್ರಹ ವಾಪಸ್ ಪಡೆಯಲು ಒತ್ತಾಯಿಸಬೇಕು ಎಂದು ಸಹ ದೇವೇಗೌಡರು ಆಗ್ರಹಿಸಿದ್ದಾರೆ.
ಪಟೇಲ್ ಸಮುದಾಯದ ಕಣ್ಮಣಿ ಹಾರ್ದಿಕ್ ಪಟೇಲ್ ಗೆ 2 ವರ್ಷ ಜೈಲು ಶಿಕ್ಷೆ
ಉಪವಾಸ ಹಿಂಪಡೆಯಲು ಅಖಿಲೇಶ್ ಮನವಿ
ಹಾರ್ದಿಕ್ ಉಪವಾಸದ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, "ನೀವು ಒಂದು ಉತ್ತಮ ಕಾರಣಕ್ಕಾಗಿ ಹೋರಾಟ ಆರಂಭಿಸಿದ್ದೀರಿ. ಆದರೆ ಉಪವಾಸ ಸತ್ಯಾಗ್ರಹ ನಿಲ್ಲಿಸಿ. ಇದರಿಂದ ನಿಮ್ಮ ಆರೋಗ್ಯ ಹದಗೆಡುತ್ತಿದೆ. ನಿಮ್ಮ ಬೆಂಬಲಿಗರಿಗೆ ನಿಮ್ಮ ನಾಯಕತ್ವದ ಅಗತ್ಯವಿದೆ" ಎಂದಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, 'ಹಾರ್ದಿಕ್ ಪಟೇಲ್ ಪರವಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರಿಗೆ ಹೋರಾಡುವ ಧೈರ್ಯ ಮತ್ತು ಶಕ್ತಿಯನ್ನು ದೇವರು ಮತ್ತಷ್ಟು ಕರುಣಿಸಲಿ' ಎಂದಿದ್ದಾರೆ.
ಯಾಕೆ ಉಪವಾಸ ಸತ್ಯಾಗ್ರಹ?
ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ, ರೈತರ ಸಾಲ ಮನ್ನಾ, ದೇಶದ್ರೋಹದ ಆರೋಪದಲ್ಲಿ ಜೈಲಿನಲ್ಲಿರುವ ಅಲ್ಪೇಶ್ ಕಠಾರಿಯಾ ಬಿಡುಗಡೆಗಾಗಿ ಒತ್ತಾಯಿಸಿ ಹಾರ್ದಿಕ್ ಪಟೇಲ್ ಆ.24 ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಆರೋಗ್ಯ ದಿನೇ ದಿನೇ ಹದಗೆಡುತ್ತಿದ್ದು, ಹಲವು ನಾಯಕರು ಅವರನ್ನು ಭೇಟಿಮಾಡಿ ಉಪವಾಸ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ತಮ್ಮ ಪ್ರಾಣ ಯಾವಾಗ ಬೇಕಾದರೂ ಹೋಗಬಹುದು ಎಂದಿರುವ ಪಟೇಲ್, ಒಂದು 'ಮರಣಪತ್ರ' ಸಹ ಬರೆದು, ತಾನು ಅಕಸ್ಮಾತ್ ಹೋರಾಟದ ನಡುವೆ ಮರಣವನ್ನಪ್ಪಿದರೆ ನಂತರ ಏನು ಮಾಡಬೇಕು ಎಂಬುದನ್ನು ವಿಲ್ ನಲ್ಲಿ ಬರೆದಿದ್ದಾರೆ.