ಬಿಲ್ಕಿಸ್ ಪ್ರಕರಣದಲ್ಲಿ ಅತ್ಯಾಚಾರಿಗಳ ಬಿಡುಗಡೆ ಹಿಂದಿನ ಸೀಕ್ರೆಟ್?
ನವದೆಹಲಿ, ಆಗಸ್ಟ್ 18: ಗುಜರಾತಿನಲ್ಲಿ ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದಲ್ಲಿ ಜೈಲುಶಿಕ್ಷೆಗೆ ಗುರಿಯಾದವರು ಬಿಡುಗಡೆಯಾಗಿದ್ದು ಹೇಗೆ ಎಂಬುದರ ಹಿಂದಿನ ಸೀಕ್ರೆಟ್ ಬಗ್ಗೆ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಪಿ ಚಿದಂಬರಂ ಪರೋಕ್ಷವಾಗಿ ಟೀಕಿಸಿದ್ದಾರೆ. ಅತ್ಯಾಚಾರಿಗಳು ಬಿಡುಗಡೆ ಮಾಡುವುದಕ್ಕೆ ಯಾರು ಕಾರಣ ಎಂಬ ಬಗ್ಗೆ ಟ್ವೀಟ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ: ಬಿಜೆಪಿ ವಿರುದ್ಧ ರಾಹುಲ್ ಟ್ವೀಟಾಸ್ತ್ರ
ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳಿಗೆ ಜೈಲುಶಿಕ್ಷೆಯನ್ನು ವಿಧಿಸಲಾಗಿತ್ತು. ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಈ ಅಪರಾಧಿಗಳಿಗೆ ಬಿಡುಗಡೆ ಭಾಗ್ಯವನ್ನು ನೀಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಈ ಕುರಿತು ಚಿದಂಬರಂ ಮಾಡಿರುವ ಟ್ವೀಟ್ ನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳೋಣ.
ಈ ಪರಿಶೀಲನಾ ತಂಡಲ್ಲಿ ಬಿಜೆಪಿ ಶಾಸಕರು
"ಗುಜರಾತಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ 11 ಮಂದಿಗೆ ಅಪರಾಧಿಗಳಿಗೆ ಕ್ಷಮಾದಾನ ನೀಡಲಾಗಿದೆ. ಈ ವಿಚಾರದಲ್ಲಿ ಕುತೂಹಲಕಾರಿ ಸೈಡ್ ಸ್ಟೋರಿ ಇದೆ. ಕ್ಷಮಾಪಣೆಗೆ ಸಂಬಂಧಿಸಿದಂತೆ ಪರಿಶೀಲನಾ ಸಮಿತಿಯಲ್ಲಿ ಇಬ್ಬರು ಬಿಜೆಪಿ ಶಾಸಕರಾದ ಸಿ.ಕೆ. ರಾವೊಲ್ಜಿ ಮತ್ತು ಸುಮನ್ ಚೌಹಾಣ್ ಕೂಡ ಭಾಗಿಯಾಗಿದ್ದರು," ಎಂದು ಪಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ರಾಹುಲ್ ಗಾಂಧಿ ಟೀಕೆ
ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅತ್ಯಾಚಾರ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಅಪರಾಧಿಗಳಿಗೆ ಬಿಡುಗಡೆ ನೀಡಿದ್ದು ಆಗಿದೆ. ಸರ್ಕಾರವು ಇಂಥ ನಿರ್ಧಾರಗಳ ಮೂಲಕ ದೇಶದ ಮಹಿಳೆಯರಿಗೆ ಯಾವ ಸಂದೇಶ ರವಾನೆಯಾಗುತ್ತಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಮಹಿಳಾ ಶಕ್ತಿಯ ಬಗ್ಗೆ ಮಾತನಾಡುವ ದೇಶದ ಮಹಿಳೆಯರಿಗೆ ನೀಡುವ ಸಂದೇಶವೇನು ಎಂದಿರುವ ಅವರು, ಪ್ರಧಾನಿಯವರೇ, ನಿಮ್ಮ ಮಾತು ಮತ್ತು ನಡತೆಯ ನಡುವಿನ ವ್ಯತ್ಯಾಸವನ್ನು ಇಡೀ ದೇಶವೇ ನೋಡುತ್ತಿದೆ," ಎಂದು ಬರೆದುಕೊಂಡಿದ್ದಾರೆ.
ಅಪರಾಧಿಗಳ ಸಮರ್ಥನೆಯಲ್ಲಿ ಬಿಜೆಪಿ ಬ್ಯುಸಿ
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವು ಮಹಿಳೆಯರ ಬಗ್ಗೆ ಎಷ್ಟರ ಮಟ್ಟಿಗೆ ಕೀಳು ಮನೋಭಾವವನ್ನು ಹೊಂದಿದೆ ಎಂದು ರಾಹುಲ್ ಗಾಂಧಿ ಎರಡನೇ ದಿನವೂ ಟೀಟ್ ಚಾಟಿ ಬೀಸಿದ್ದಾರೆ. ಗುರುವಾರ ಮತ್ತದೇ ಗುಜರಾತ್ ಪ್ರಕರಣವನ್ನು ಉಲ್ಲೇಖಿಸಿ, ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. "ಉನ್ನಾವೋ ಪ್ರಕರಣದಲ್ಲಿ ಶಾಸಕನನ್ನು ಕಾಪಾಡಿದ್ದು ಆಯಿತು. ಕಥುವಾದಲ್ಲಿ ಬಲತ್ಕಾರಿಗಳನ್ನು ಸಮರ್ಥಿಸಿಕೊಳ್ಳಲು ಮೆರವಣಿಗೆ ನಡೆಸಿದ್ದು ಆಯಿತು. ಹಾಥರಸ್ ನೆಲದಲ್ಲಿ ಬಲತ್ಕಾರಿಗಳದ್ದೇ ಸರ್ಕಾರವಿದೆ. ಗುಜರಾತಿನಲ್ಲಿ ಅತ್ಯಾಚಾರಿಗಳಿಗೆ ಸನ್ಮಾನ ಮಾಡಿದ್ದೀರಿ. ಅಪರಾಧಿಗಳ ಬಗ್ಗೆ ನೀವು ತೋರುತ್ತಿರುವ ಸಮರ್ಥನೆಯು ಮಹಿಳೆಯರ ಕುರಿತು ನಿಮ್ಮ ಕೀಳು ಮನೋಭಾವನೆಯನ್ನು ತೋರಿಸುತ್ತದೆ," ಎಂದು ಟೀಕಿಸಿದ್ದಾರೆ.
ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ ಹಿನ್ನೆಲೆ
ಕಳೆದ 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಗರ್ಭಿಣಿ ಆಗಿದ್ದ ಬಿಲ್ಕಿಸ್ ಬಾನೋ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಇದರ ಜೊತೆ ಆಕೆಯ ಕುಟುಂಬದ ಏಳು ಸದಸ್ಯರನ್ನು ಕೊಂದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಎಲ್ಲಾ 11 ಜನರನ್ನು ಗುಜರಾತ್ನ ಬಿಜೆಪಿ ಸರ್ಕಾರವು ಬಿಡುಗಡೆ ಮಾಡಿತು. 15 ವರ್ಷಗಳ ಬಳಿಕ ಸೋಮವಾರ ಗುಜರಾತ್ನ ಗೋಧ್ರಾ ಉಪ ಕಾರಾಗೃಹದಿಂದ ಹೊರಬಂದ ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳಿಗೆ ಹೂವಿನ ಹಾರವನ್ನು ಹಾಕಿ ಸಿಹಿತಿಂಡಿ ನೀಡುವ ಮೂಲಕ ಸ್ವಾಗತಿಸಲಾಯಿತು.