ಕಾಲೇಜಿನಲ್ಲೇ ಪ್ರೇಯಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ
ಕೊಟ್ಟಾಯಂ, ಫೆಬ್ರವರಿ 2: ಇಲ್ಲಿನ ಮೆಡಿಕಲ್ ಕಾಲೇಜಿನ ತರಗತಿಯಲ್ಲಿ ಕ್ಲಾಸ್ ಆರಂಭಕ್ಕೂ ಮುನ್ನ ಕುಳಿತಿದ್ದ ಲಕ್ಷ್ಮೀ (20) ಎಂಬ ಯುವತಿಯ ಮೇಲೆ ಇದ್ದಕ್ಕಿದ್ದಂತೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆದರ್ಶ್ (26) ಯುವಕನೊಬ್ಬ ಆನಂತರ ಆತನೂ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಲಕ್ಷ್ಮೀ ಹಾಗೂ ಆದರ್ಶ್ ಎಂದು ಗುರುತಿಸಲಾಗಿದೆ. ಬುಧವಾರ ಇಡೀ ದೇಶವೇ ಬಜೆಟ್ ಸಾಗರದಲ್ಲಿ ಮುಳುಗಿ ಹೋಗಿದ್ದರಿಂದಾಗಿ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಏನಾಯ್ತು?: ಎಂದಿನಂತೆ ಲಕ್ಷ್ಮೀ ಕಾಲೇಜಿಗೆ ಬಂದಿದ್ದಳು. ತನ್ನ ತರಗತಿಯಲ್ಲಿ ಕೆಲವು ಸ್ನೇಹಿತೆಯರೊಂದಿಗೆ ಕುಳಿತು ಮಾತಾಡುತ್ತಿದ್ದಳು. ಇದ್ದಕ್ಕಿದ್ದಂತೆ ಕೈಯ್ಯಲ್ಲಿ ಪೆಟ್ರೋಲ್ ಕ್ಯಾನ್ ಹಿಡಿದು ತರಗತಿ ಪ್ರವೇಶಿಸಿದ ಆದರ್ಶ, ಆಕೆಯ ಬಳಿ ವೇಗವಾಗಿ ಸಾಗಿ ಆಕೆಯ ಮೇಲೆ ಪೆಟ್ರೋಲ್ ಸುರಿದು ತನ್ನ ಮೇಲೂ ಪೆಟ್ರೋಲ್ ಸುರಿದುಕೊಂಡಿದ್ದಾನೆ.
ಇನ್ನೇನು ತನ್ನ ಜೇಬಿನಿಂದ ಲೈಟರ್ ಹೊರತೆಗೆದು ಬೆಂಕಿಯಿಡಬೇಕು ಎನ್ನುವಷ್ಟರಲ್ಲಿ ಲಕ್ಷ್ಮೀ ಅಲ್ಲಿಂದ ಓಡಿಹೋಗಿದ್ದಾಳೆ. ತಕ್ಷಣವೇ ಆಕೆಯನ್ನು ಬೆನ್ನಟ್ಟಿದ ಆದರ್ಶ್, ಆಕೆಯನ್ನು ಹಿಡಿಯುವಲ್ಲಿ ಸಫಲನಾಗಿದ್ದಲ್ಲದೆ ಲೈಟರ್ ನಿಂದ ಆಕೆಗೆ ಅಗ್ನಿ ಸ್ಪರ್ಶ ಮಾಡಿ ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ.
ಈ ಸಂದರ್ಭದಲ್ಲಿ ಅವರಿಬ್ಬರನ್ನೂ ಬೆಂಕಿಯಿಂದ ಕಾಪಾಡಲು ಕೆಲವಾರು ವಿದ್ಯಾರ್ಥಿಗಳು ಪ್ರಯತ್ನಿಸಿದರೂ ಬೆಂಕಿಯನ್ನು ಬೇಗನೇ ನಂದಿಸಲು ಸಾಧ್ಯವಾಗಿಲ್ಲ.ಹಾಗಾಗಿ, ಕೆಲವೇ ನಿಮಿಷಗಳಲ್ಲಿ ಈ ಇಬ್ಬರೂ ಗಂಭೀರ ಸ್ವರೂಪದ ಗಾಯಗಳಿಗೊಳಗಾಗಿದ್ದಾರೆ.
ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ತೀವ್ರ ಸುಟ್ಟಗಾಯಗಳಿಂದಾಗಿ ಅವರಿಬ್ಬರೂ ಬುಧವಾರ ರಾತ್ರಿ ವೇಳೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ಹೇಳಿವೆ.
ಕಾರಣವೇನು?: ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಈ ಇಬ್ಬರೂ ಪ್ರೇಮಿಗಳಾಗಿದ್ದರೆಂದು ಹೇಳಿದ್ದಾರೆ. ಲಕ್ಷ್ಮೀ ಅವರು, ನಗರದ ಸ್ಕೂಲ್ ಆಫ್ ಮೆಡಿಕಲ್ ಎಜುಕೇಷನ್ ಕಾಲೇಜಿನಲ್ಲಿ ಫಿಸಿಯೋಥೆರಪಿ ವಿದ್ಯಾರ್ಥಿನಿಯಾಗಿದ್ದರು. ಆದರ್ಶ್ ಅದೇ ಕಾಲೇಜಿನ ಮಾಜಿ ವಿದ್ಯಾರ್ಥಿ. ಈ ಇಬ್ಬರೂ ಹಿಂದೆ ಪ್ರೇಮಿಗಳಾಗಿದ್ದು ಇತ್ತೀಚೆಗಷ್ಟೇ ಲಕ್ಷ್ಮೀ ಅವರು ಸಂಬಂಧವನ್ನು ಮುರಿದುಕೊಂಡಿದ್ದರು. ಇದೇ ಈ ಘಟನೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.