ಮಾಜಿ ಸಿಬಿಐ ಮುಖ್ಯಸ್ಥ ಅಶ್ವನಿ ಕುಮಾರ್ ದೇಹದ ಬಳಿ ಡೆತ್ ನೋಟ್ ಪತ್ತೆ
ಶಿಮ್ಲಾ, ಅಕ್ಟೋಬರ್ 8: ಸಿಬಿಐನ ನಿವೃತ್ತ ಮುಖ್ಯಸ್ಥ ಹಾಗೂ ನಾಗಾಲ್ಯಾಂಡ್ನ ಮಾಜಿ ರಾಜ್ಯಪಾಲ ಅಶ್ವನಿ ಕುಮಾರ್ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿನ ತಮ್ಮ ನಿವಾಸದಲ್ಲಿ ಬುಧವಾರ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಗುಜರಾತ್ನಲ್ಲಿ ನಡೆದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಸಿಬಿಐ ಬಂಧಿಸಿದ ಸಂದರ್ಭದಲ್ಲಿ ತನಿಖಾ ಸಂಸ್ಥೆಯ ಮುಖ್ಯಸ್ಥರಾಗಿದ್ದ ಅಶ್ವನಿ ಕುಮಾರ್ ಅವರ ಸಾವಿನ ಬಗ್ಗೆ ಅನೇಕ ಸಂದೇಹಗಳು ವ್ಯಕ್ತವಾಗಿವೆ. ಆದರೆ ಅಶ್ವನಿ ಕುಮಾರ್ ಮೃತದೇಹದ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಅನೇಕ ವಿವರಗಳನ್ನು ಹಂಚಿಕೊಂಡಿದ್ದಾರೆ.
ಶಿಮ್ಲಾದ ಬ್ರಖ್ತಸ್ಟ್ನಲ್ಲಿನ ತಮ್ಮ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ 70 ವರ್ಷದ ಅಶ್ವನಿ ಕುಮಾರ್ ಪತ್ತೆಯಾಗಿದ್ದರು. ಅವರು ಸಾಯುವ ಮೊದಲು ಬರೆದಿಟ್ಟ ಪತ್ರದಲ್ಲಿ ಬುದಕಿನ ಹೊಸ ಪಯಣದ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ವೃತ್ತಿಜೀವನ ಹಾಗೂ ನಿವೃತ್ತಿಯ ಬಳಿಕವೂ ಉನ್ನತ ಸ್ಥಾನಗಳನ್ನು ಪಡೆದುಕೊಂಡಿದ್ದ ಅವರು 'ಜೀವನದ ಮೇಲೆ ಜಿಗುಪ್ಸೆ' ಬಂದಿದ್ದಾಗಿ ಹೇಳಿಕೊಂಡಿದ್ದಾರೆ.
ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ಆತ್ಮಹತ್ಯೆ
ಅಶ್ವನಿ ಕುಮಾರ್ ಅವರು ತಮ್ಮನ್ನು ಕಾಡುತ್ತಿದ್ದ ಅನಾರೋಗ್ಯದ ಬಗ್ಗೆ ತುಂಬಾ ಚಿಂತೆಗೀಡಾಗಿದ್ದರು ಎಂಬ ಸುಳಿವನ್ನು ಈ ಡೆತ್ ನೋಟ್ ನೀಡುತ್ತದೆ ಎಂದು ಪೊಲೀಸರು ಹೇಳಿದ್ದಾರೆ. 'ನನಗೆ ಜೀವನದ ಮೇಲೆ ಜಿಗುಪ್ಸೆ ಬಂದಿದೆ. ನನ್ನ ಮುಂದಿನ ಪಯಣಕ್ಕೆ ತೆರಳಲಿದ್ದೇನೆ' ಎಂದು ಅಶ್ವನಿ ಕುಮಾರ್ ಬರೆದಿದ್ದಾರೆ. ಮುಂದೆ ಓದಿ.
ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ವ್ಯಕ್ತಿಚಿತ್ರ
ಜೀವ ತೆಗೆದುಕೊಳ್ಳುವ ಈ ಕೆಲಸಕ್ಕೆ ಮುಂದಾಗುವ ಮುನ್ನ ಬುಧವಾರ ಸಂಜೆ ಅಶ್ವನಿ ಕುಮಾರ್ ವಾಯುವಿಹಾರಕ್ಕೆ ತೆರಳಿದ್ದರು. ಅವರ ಮನೆಯ ಪ್ರಾರ್ಥನಾ ಕೊಠಡಿ ಬಳಿ ಮೃತದೇಹ ಪತ್ತೆಯಾಗಿದೆ. ಅವರ ಪತ್ನಿ, ಮಗ ಮತ್ತು ಮಗಳು ಮನೆಯ ಕೆಳಮಹಡಿಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮುಂದೆ ಓದಿ.
ಖಿನ್ನತೆಯಿಂದ ಬಳಲುತ್ತಿದ್ದರೇ?
ಈ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಆತ್ಮಹತ್ಯೆ ಎಂಬ ಬಗ್ಗೆ ಅಂತಿಮ ಅಭಿಪ್ರಾಯಕ್ಕೆ ಬರಬಹುದು ಎಂದು ಶಿಮ್ಲಾದ ಎಸ್ಪಿ ಮೋಹಿತ್ ಚಾವ್ಲಾ ತಿಳಿಸಿದ್ದಾರೆ.
ಅಶ್ವನಿ ಕುಮಾರ್ ಅವರು ಕೆಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಅಂತಹ ವರದಿಗಳನ್ನು ಅವರ ಕುಟುಂಬದವರು ಖಚಿತಪಡಿಸಿಲ್ಲ ಎಂದು ಹಿಮಾಚಲ ಡಿಜಿಪಿ ಸಂಜಯ್ ಕುಂದ್ರು ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.
ಮಹಡಿಗೆ ತೆರಳಿದ್ದರು
'ಅಶ್ವನಿ ಕುಮಾರ್ ಎಂದಿನಂತೆ ಸಂಜೆ ವಾಯು ವಿಹಾರಕ್ಕೆ ತೆರಳಿದ್ದರು. ಬಳಿಕ ಮನೆಗೆ ಮರಳಿ, ದೈನಂದಿನ ಪ್ರಾರ್ಥನೆ ಸಲ್ಲಿಸಲು ಮೇಲಿನ ಮಹಡಿಗೆ ತೆರಳಿದ್ದರು. ತುಂಬಾ ಸಮಯ ಕಳೆದರೂ ಅವರು ವಾಪಸ್ ಬಾರದೆ ಇರುವುದನ್ನು ಕಂಡು ಕುಟುಂಬದವರು ಮಹಡಿಗೆ ಹೋಗಿ ನೋಡಿದಾಗ ಅವರು ನೇಣು ಹಾಕಿಕೊಂಡಿರುವುದು ಗೊತ್ತಾಯಿತು' ಎಂದು ಡಿಜಿಪಿ ತಿಳಿಸಿದರು.
ಗಾಂಧಿ ಕುಟುಂಬಕ್ಕೆ ಹತ್ತಿರವಿದ್ದರು
ಅಶ್ವನಿ ಕುಮಾರ್ 1973ರ ಬ್ಯಾಚ್ನ ಐಪಿಎಸ್ ಅಧಿಕಾರಿ. ಅವರು ಹಿಮಾಚಲ ಪ್ರದೇಶ ಪೊಲೀಸ್ ಇಲಾಖೆಯ ವಿವಿಧ ಅತ್ಯುನ್ನತ ಶ್ರೇಣಿಯ ಹುದ್ದೆಗಳನ್ನು ನಿಭಾಯಿಸಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಭದ್ರತೆಗಾಗಿ ಹೊಸದಾಗಿ ಸೃಷ್ಟಿಸಲಾಗಿದ್ದ ಎಸ್ಪಿಜಿಯಲ್ಲಿ 1985-1990ರ ಅವಧಿಯಲ್ಲಿ ಸಹಾಯಕ ನಿರ್ದೇಶಕ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. 2008ರ ಆಗಸ್ಟ್ನಿಂದ 2010ರ ನವೆಂಬರ್ ಅವಧಿಯಲ್ಲಿ ಅವರು ಸಿಬಿಐ ನಿರ್ದೇಶಕರಾಗಿದ್ದರು. ಈ ಸಂದರ್ಭಗಳಲ್ಲಿ ಅವರು ಗಾಂಧಿ ಕುಟುಂಬದೊಂದಿಗೆ ಹತ್ತಿರದ ಸಂಪರ್ಕ ಹೊಂದಿದ್ದರು.
ಬಿಜೆಪಿ ಸರ್ಕಾರದ ವಿರೋಧ
ಮನಮೋಹನ್ ಸಿಂಗ್ ಸರ್ಕಾರವು ಅವರನ್ನು 2013ರ ಮಾರ್ಚ್ನಲ್ಲಿ ನಾಗಾಲ್ಯಾಂಡ್ ರಾಜ್ಯಪಾಲರಾಗಿ ನೇಮಿಸಿತ್ತು. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅದೇ ವರ್ಷ ಕೆಲವು ತಿಂಗಳು ಮಣಿಪುರದ ರಾಜ್ಯಪಾಲರಾಗಿ ಸಹ ಕೆಲಸ ಮಾಡಿದ್ದರು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರು ತಮ್ಮ ಹುದ್ದೆಯನ್ನು ತ್ಯಜಿಸಿದ್ದರು. ಶಿಮ್ಲಾದ ಖಾಸಗಿ ವಿಶ್ವವಿದ್ಯಾಲಯದ ಉಪ ಕುಲಪತಿ ಮತ್ತು ಹಿಮಾಚಲ ಪ್ರದೇಶದ ಡಿಜಿಪಿಯಾಗಿ ಸಹ ಅವರು ಕರ್ತವ್ಯ ನಿರ್ವಹಿಸಿದ್ದರು.
ಅಮಿತ್ ಶಾ ಬಂಧನ
ಸಿಬಿಐ ನಿರ್ದೇಶಕರಾಗಿದ್ದ ಅವಧಿಯಲ್ಲಿ ದೇಶದಾದ್ಯಂತ ಚರ್ಚೆಯಾಗಿದ್ದ ಆರುಷಿ-ಹೇಮರಾಜ್ ಕೊಲೆ ಪ್ರಕರಣವನ್ನು ನಿಭಾಯಿಸಿದ್ದರು. ಗುಜರಾತ್ನಲ್ಲಿ ನಡೆದಿದ್ದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಅವರನ್ನು 2010ರ ಜುಲೈನಲ್ಲಿ ಬಂಧಿಸಿದಾಗ ಕೂಡ ಅವರು ಸಿಬಿಐ ಮುಖ್ಯಸ್ಥರಾಗಿದ್ದರು.