ಕೃಷಿ ಕಾಯ್ದೆಗಳ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತು
ನವದೆಹಲಿ, ಜನವರಿ.25: ವಿಶಾಲ ಭಾರತದಲ್ಲಿ ಕೋಟ್ಯಂತರ ಜನರಿಗೆ ಆಹಾರ ಭದ್ರತೆ ಒದಗಿಸುವ ಅನ್ನದಾತರಿಗೆ ಪ್ರತಿಯೊಬ್ಬ ಭಾರತೀಯರು ಕೂಡಾ ಕೃತಜ್ಞರಾಗಿರಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಭಾರತದ 72ನೇ ಗಣರಾಜ್ಯೋತ್ಸವದ ಅಂಗವಾಗಿ ಸೋಮವಾರ ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡಿದರು. ಕೊವಿಡ್-19 ಸಾಂಕ್ರಾಮಿಕ ಪಿಡುಗು, ಭಾರತ ಲಾಕ್ ಡೌನ್ ರೀತಿಯ ಸಂದಿಗ್ಘ ಸ್ಥಿತಿಯಲ್ಲೂ ದೇಶದ ಜನರಿಗೆ ಆಹಾರವನ್ನು ಪೂರೈಸಿದ ರೈತರಿಗೆ ಅಭಿನಂದನೆ ಸಲ್ಲಿಸಿದರು.
ಟ್ರ್ಯಾಕ್ಟರ್ ಮೆರವಣಿಗೆ: ರೈತರಿಗೆ ಡೀಸೆಲ್ ನೀಡದಂತೆ ಪೊಲೀಸರ ಸೂಚನೆ
"ಒಂದು ಶ್ರೇಷ್ಠ ದೇಶವು ರೈತರ ಕಲ್ಯಾಣಕ್ಕೆ ಆದ್ಯತೆ ನೀಡುತ್ತದೆ. ದೇಶದೊಳಗಿನ ಜನರಿಗೆ ಆಹಾರ ಭದ್ರತೆ ಒದಗಿಸುವ ರೈತರಿಗೆ ಮತ್ತು ಗಡಿಯಲ್ಲಿ ನಿಂತು ದೇಶದ ರಕ್ಷಣೆ ಮಾಡುತ್ತಿರುವ ವೀರ ಯೋಧರ ಸುರಕ್ಷತೆಗೆ ಸರ್ಕಾರವು ಬದ್ಧವಾಗಿದೆ" ಎಂದು ರಾಮನಾಥ್ ಕೋವಿಂದ್ ಅವರು ತಮ್ಮ ಭಾಷಣದಲ್ಲಿ ತಿಳಿಸಿದರು.
"ಸರ್ಕಾರದ ಸುಧಾರಣೆ ಬಗ್ಗೆ ತಪ್ಪು ಗ್ರಹಿಕೆ":
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ "ಸಾಮಾನ್ಯವಾಗಿ ಆರಂಭಿಕ ಹಂತಗಳಲ್ಲಿ ಸುಧಾರಣೆಗಳ ಹಾದಿಯು ತಪ್ಪು ಗ್ರಹಿಕೆಗಳಿಗೆ ಕಾರಣವಾಗಬಹುದು. ಆದರೆ ಸರ್ಕಾರ ರೈತರ ಕಲ್ಯಾಣಕ್ಕೆ ಮೀಸಲಾಗಿದೆ" ಎಂದು ರಾಷ್ಟ್ರಪತಿ ಹೇಳಿದ್ದಾರೆ.
"ಬಾಕಿ ಉಳಿದ ಸುಧಾರಣೆಗಳಿಗೆ ಶಾಸನ ಪೂರಕ":
"ಆರ್ಥಿಕ ಸುಧಾರಣೆಗಳು ಶೀಘ್ರವಾಗಿ ಮುಂದುವರೆದಿದೆ. ಕಾರ್ಮಿಕರು ಮತ್ತು ಕೃಷಿಯ ಕ್ಷೇತ್ರಗಳಲ್ಲಿ ದೀರ್ಘಕಾಲದವರೆಗೆ ಬಾಕಿ ಉಳಿದಿರುವ ಸುಧಾರಣೆಗಳಿಗೆ ಶಾಸನವು ಪೂರಕವಾಗಿದೆ. ಆರಂಭಿಕ ಹಂತಗಳಲ್ಲಿ ಸುಧಾರಣೆಗಳು ತಪ್ಪು ಗ್ರಹಿಕೆಗಳಿಗೆ ಎಡೆಮಾಡಿಕೊಟ್ಟರೂ ಕೂಡಾ ಸರ್ಕಾರವು ಏಕಮಾತ್ರವಾಗಿ ದೃಷ್ಟಿಕೋನದಲ್ಲಿ ಯೋಚಿಸುತ್ತಿರುವುದರಲ್ಲಿ ಸಂದೇಹವಿಲ್ಲ" ಎಂದಿದ್ದಾರೆ.
ವೈದ್ಯರು, ಸಂಶೋಧಕರ ಬಗ್ಗೆ ರಾಷ್ಟ್ರಪತಿ ಶ್ಲಾಘನೆ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಲಸಿಕೆ ಸಂಶೋಧನೆಗಾಗಿ ನಮ್ಮ ದೇಶದ ಸಂಶೋಧಕರು, ವಿಜ್ಞಾನಿಗಳು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಮಹಾಮಾರಿಯಿಂದ ದೇಶವನ್ನು ರಕ್ಷಿಸುವುದರಲ್ಲಿ ವೈದ್ಯರು ಮತ್ತು ಕೊರೊನಾ ವಾರಿಯರ್ಸ್ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅಂತಿಮವಾಗಿ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯನ್ನು ಸಂಶೋಧಿಸುವ ಮೂಲದ ಹೊಸ ಅಧ್ಯಾಯವನ್ನೇ ಬರೆದಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.