ಸಾಮೂಹಿಕ ಅತ್ಯಾಚಾರಿಗಳಿಗೂ ಕ್ಷಮಾಪಣೆ ನೀಡಬಹುದೇ?
ನವದೆಹಲಿ, ಆಗಸ್ಟ್ 18: ಗುಜರಾತಿನಲ್ಲಿ ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಕ್ಷಮಾಪಣೆ ನೀತಿ ಅಡಿಯಲ್ಲಿ ಬಿಡುಗಡೆ ಮಾಡಿರುವ ಕ್ರಮವನ್ನು ವಕೀಲೆ ಶೋಭಾ ಗುಪ್ತಾ ಟೀಕಿಸಿದ್ದಾರೆ.
ದೇಶದಲ್ಲಿ ಇನ್ನು ಪ್ರತಿ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳು ಕ್ಷಮಾಪಣೆ ಕೋರಿ ಅರ್ಜಿ ಸಲ್ಲಿಸುತ್ತಾರೆ ಎಂದು ಅವರು ಹೇಳಿದ್ದಾರೆ. 'ಅಪರಾಧದ ಘೋರತೆಯ ಮೇಲೆ ಮನಸ್ಸಿಗೆ ತೆಗೆದುಕೊಳ್ಳದೇ ಬಿಡುಗಡೆ ಮಾಡಿರುವ ನಿರ್ಧಾರವನ್ನು ಖಂಡಿಸಿದ್ದಾರೆ.
ಗುಜರಾತಿನಲ್ಲಿ ಅತ್ಯಾಚಾರಿಗಳಿಗೆ ಬಿಡುಗಡೆ ಭಾಗ್ಯ ಪ್ರಶ್ನಿಸಿದ ರಾಹುಲ್ ಗಾಂಧಿ
"ಪ್ರತಿಯೊಬ್ಬ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳು 14 ವರ್ಷಗಳ ನಂತರ ಉಪಶಮನಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಈ ಪ್ರಕರಣದಲ್ಲಿ ಕ್ಷಮಾಪಣೆ ನೀಡಬಹುದಾದರೆ, ಪ್ರತಿಯೊಬ್ಬ ಅತ್ಯಾಚಾರ ಅಪರಾಧಿಯು ಏಕೆ ಉಪಶಮನವನ್ನು ಕೇಳುವುದಿಲ್ಲ?,"ಎಂದು ಪ್ರಶ್ನಿಸಿದ್ದಾರೆ.
1992ರ ನೀತಿಯ ಅಡಿಯಲ್ಲಿ ಅತ್ಯಾಚಾರಿಗಳಿಗೆ ಬಿಡುಗಡೆ
ಗುಜರಾತಿನಲ್ಲಿ ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಿಗೆ ಬಿಡುಗಡೆ ನೀಡಿದ್ದು ಆಗಿದೆ. ಆದರೆ ಸಾಮಾನ್ಯವಾಗಿ ಉಪಶಮನ ಕಾನೂನಿನಲ್ಲಿ ಇದು ಕೆಟ್ಟದ್ದು ಮತ್ತು ಇದು ಒಳ್ಳೆಯದ್ದು ಎಂಬ ವಿಷಯವಲ್ಲ. 1992ರ ನೀತಿಯ ಅಡಿಯಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ, ಆದರೆ ಸದ್ಯ ಹಳೆಯದಾಗಿರುವ ನೀತಿಯು ಅಸ್ತಿತ್ವದಲ್ಲೇ ಇಲ್ಲ ಎಂದು ಶೋಭಾ ಗುಪ್ತಾ ಉಲ್ಲೇಖಿಸಿದ್ದಾರೆ.
ಗರ್ಭಿಣಿ ಮೇಲೆ ಕ್ರೌರ್ಯ ತೋರಿದ್ದ ಕಾಮುಕರು
2002ರಲ್ಲಿ ಬಿಲ್ಕಿಸ್ ಬಾನೊ 20 ವರ್ಷದವರಿದ್ದು, ಅಂದು ಕೆಲವು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯ ಮೇಲೆ ಕ್ರೌರ್ಯ ತೋರಲಾಗಿತ್ತು. ಆಕೆಗೆ ಪರಿಚಯವಿದ್ದ ಕಾಮುಕರಿಂದಲೇ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಈ ಅಪರಾಧಿಗಳ ಪೈಕಿ ಒಬ್ಬ ಆಕೆಯ ಚಿಕ್ಕಪ್ಪನೇ ಆಗಿದ್ದು, ಉಳಿದವರು ಸಹೋದರರಾಗಿದ್ದರು. ಅವಳು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದು, ಬಹುತೇಕ ನಿರ್ಜೀವವಾಗಿ ಬಿಟ್ಟಿದ್ದರು. ಮಾರ್ಚ್ 3, 2002ರಂದು ಮೂರು ವರ್ಷದ ಮಗಳನ್ನು ಕೊಲೆ ಮಾಡಲಾಗಿತ್ತು.
ಲಿಮ್ಖೇಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಅತ್ಯಾಚಾರದ ನಂತರದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಮಹಿಳೆಗೆ ಎಚ್ಚರಗೊಂಡ ನಂತರದಲ್ಲಿ ಬಿಲ್ಕಿಸ್ ಬುಡಕಟ್ಟು ಮಹಿಳೆಯಿಂದ ಬಟ್ಟೆ ಅನ್ನು ಪಡೆದುಕೊಂಡರು. ದಾಹೋದ್ ಜಿಲ್ಲೆಯ ಲಿಮ್ಖೇಡಾ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದರು. ಆದರೆ ಅಂದು ಅಲ್ಲಿನ ಹೆಡ್ ಕಾನ್ಸ್ಟೆಬಲ್ ಸತ್ಯವನ್ನು ಮುಚ್ಚಿಟ್ಟು ದೂರಿನ್ನೇ ಮೊಟಕುಗೊಳಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ನ್ಯಾಯಕ್ಕಾಗಿ ಪರಿತಪಿಸುತ್ತಿದ್ದ ಮಹಿಳೆಯ ಅಗ್ನಿ ಪರೀಕ್ಷೆಯಲ್ಲಿ ಅದು ಆರಂಭಿಕ ಅಧ್ಯಾಯವಾಗಿತ್ತು. ನಂತರದಲ್ಲಿ ಆಕೆಗೆ ಕೊಲೆ ಬೆದರಿಕೆಗಳು ಬಂದವು. 2004ರಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಗುಜರಾತ್ನಿಂದ ಮುಂಬೈಗೆ ಸ್ಥಳಾಂತರಿಸಿತು.
2008ರಲ್ಲಿ ತೀರ್ಪು ಪ್ರಕಟಿಸಿದ ಮುಂಬೈ ಸಿಬಿಐ ಕೋರ್ಟ್
ಕಳೆದ 2008ರ ಜನವರಿ ತಿಂಗಳಿನಲ್ಲಿ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ 20 ಆರೋಪಿಗಳಲ್ಲಿ 11 ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ನೀಡಿತು. ಮಹಿಳೆಯ ಮೇಲೆ ಅತ್ಯಾಚಾರದ ಸಂಚು, ಕೊಲೆ, ಕಾನೂನುಬಾಹಿರ ಸಭೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಇತರ ಆರೋಪಗಳ ಮೇಲೆ ದೋಷಿ ಎಂದು ತೀರ್ಪು ನೀಡಿತ್ತು. ಈ ಅಪರಾಧಿಗಳನ್ನು ರಕ್ಷಿಸಲು "ತಪ್ಪಾದ ದಾಖಲೆಗಳನ್ನು" ಮಾಡಿದ್ದಕ್ಕಾಗಿ ಹೆಡ್ ಕಾನ್ಸ್ಟೆಬಲ್ಗೆ ಶಿಕ್ಷೆ ವಿಧಿಸಲಾಯಿತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 20 ಆರೋಪಿಗಳ ಪೈಕಿ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ವಿಚಾರಣೆ ವೇಳೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದನು.