ಪ್ರತಿ ಸ್ಟೇಷನಿನಲ್ಲಿ ಮೂವರು ಮುಸ್ಲಿಂ ಪೊಲೀಸರು ಕಡ್ಡಾಯ
ಲಕ್ನೋ, ಸೆ 30: ರಾಜ್ಯದ ಪ್ರತಿ ಪೊಲೀಸ್ ಸ್ಟೇಷನಿನಲ್ಲಿ ಮೂವರು ಮುಸ್ಲಿಂ ಪೊಲೀಸರು ಕಡ್ಡಾಯವಾಗಿರ ಬೇಕೆಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ನಮ್ಮ ಸರಕಾರದಲ್ಲಿ ಮುಸ್ಲಿಮರಿಗೆ ವಿಶೇಷ ಭದ್ರತೆ ನೀಡುವುದು ನಮ್ಮ ಆದ್ಯತೆ. ಹಾಗಾಗಿ ಪ್ರತಿ ಸ್ಟೇಷನಿನಲ್ಲಿ ಕನಿಷ್ಠ ಪಕ್ಷ ಎರಡರಿಂದ ಮೂವರು ಮುಸ್ಲಿಂ ಯುವ ಪೊಲೀಸರನ್ನು ನಿಯೋಜಿಸಲು ಪೊಲೀಸ್ ಮಹಾ ನಿರ್ದೇಶಕರಿಗೆ ತಿಳಿಸಿದ್ದೇನೆ. ಅದಕ್ಕೆ ಅವರು ಪೂರಕವಾಗಿ ಪ್ರತಿಕ್ರಿಯಿಸಿದ್ದಾರೆಂದು ಮುಲಾಯಂ ಸಿಂಗ್ ಹೇಳಿದ್ದಾರೆ.
ಮೀರತ್ ಮತ್ತು ಮುಜಾಫರ್ ನಗರದಲ್ಲಿ ನಡೆದ ಕೋಮು ಗಲಭೆಗೆ ಬಿಜೆಪಿ ಮತ್ತು ಸಂಘ ಪರಿವಾರದವರನ್ನು ದೂಷಿಸಿದ ಮುಲಾಯಂ, ರಾಜ್ಯದಲ್ಲಿ ಬಿಜೆಪಿ ಮತೀಯ ಗಲಭೆಯನ್ನು ಹುಟ್ಟು ಹಾಕಿ ಅದರ ಲಾಭ ಪಡೆಯುವ ಹುನ್ನಾರದಲ್ಲಿದೆ. ಅಖಿಲೇಶ್ ಸರಕಾರ ಇದಕ್ಕೆ ಅವಕಾಶ ನೀಡುವುದಿಲ್ಲ.
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಬಿಜೆಪಿ ಮತ್ತು ಅದರ ಸಂಘಟನೆಗಳಿಗೆ ಸೂಕ್ತ ಉತ್ತರ ನೀಡುತ್ತೇವೆ. ಮುಸ್ಲಿಂ ಸಮುದಾಯದವರು ಉತ್ತರ ಪ್ರದೇಶದಲ್ಲಿ ನಿರ್ಭೀತಿಯಿಂದ ಬಾಳಲು ಎಲ್ಲಾ ಕ್ರಮಕ್ಕೂ ನಾವು ಮುಂದಾಗುತ್ತೇವೆ ಎಂದು ಮುಲಾಯಂ ಹೇಳಿದ್ದಾರೆ.
ಮೀರತ್ ಮತ್ತು ಮುಜಾಫರ್ ನಗರದಲ್ಲಿ ಕೋಮು ಗಲಭೆ ನಡೆಯ ಬಾರದಾಗಿತ್ತು. ನಮಗೆ ಆ ಬಗ್ಗೆ ವಿಷಾದವಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಮುಂದಿನ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆಂದು ಮುಲಾಯಂ ಎಚ್ಚರಿಸಿದ್ದಾರೆ.
ಮುಜಾಫರ್ ನಗರ ಗಲಭೆಗೆ ಸಂಬಂಧಿಸಿದಂತೆ ಅಖಿಲೇಶ್ ಸರಕಾರ ಬಿಜೆಪಿಯ ಮತ್ತೊಬ್ಬ ಶಾಸಕ ಸಂಗೀತ್ ಸೋಮ್ ಅವರನ್ನು ಭಾನುವಾರ (ಶೆ 29) ಬಂಧಿಸಿದೆ.
ನಾನು ಅಲ್ಪಸಂಖ್ಯಾತ ಪರ ಎನ್ನಲು ಹೆಮ್ಮೆಯಿದೆ. ಸ್ಲೈಡಿನಲ್ಲಿ..
ನಾನು ಅಲ್ಪಸಂಖ್ಯಾತರ ಪರ
ನಮ್ಮ ಪಕ್ಷ ಅಲ್ಪಸಂಖ್ಯಾತರ ಮತ್ತು ರೈತರ ಪರ. ಈ ಬಗ್ಗೆ ನನಗೆ ಅಥವಾ ನಮ್ಮ ಪಕ್ಷದ ನಾಯಕರಿಗೆ ಏನೂ ಮುಜುಗರವಿಲ್ಲ. ಬದಲಾಗಿ ನಾವು ಅಲ್ಪಸಂಖ್ಯಾತರ ಪರ ಎನ್ನುವ ಗರ್ವವಿದೆ.
ಡೋಂಟ್ ಕೇರ್
ಪ್ರತಿ ಬಾರಿಯೂ ಬಿಎಸ್ಪಿ, ಬಿಜೆಪಿ ನಮ್ಮನ್ನು ಅಲ್ಪಸಂಖ್ಯಾತರ ಪರ ಎಂದು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತದೆ. ನಾವು ಅದಕ್ಕೆಲ್ಲಾ ಕ್ಯಾರೇ ಮಾಡುವುದಿಲ್ಲ. ರೈತರು ಮತ್ತು ಅಲ್ಪ ಸಂಖ್ಯಾತ ಸಮುದಾಯವರ ಪರ ನಮ್ಮ ಸರಕಾರ ಯಾವತ್ತೂ ನಿಲ್ಲುತ್ತದೆ.
ಕೋಮು ಗಲಭೆ
ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಕೋಮು ಗಲಭೆ ಹೆಚ್ಚಾಗುತ್ತದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಮುಲಾಯಂ ಉತ್ತರಿಸುತ್ತಾ, ನೀವು ಈ ಪ್ರಶ್ನೆಯನ್ನು ಬಿಜೆಪಿ ಮತ್ತು RSS ಅವರನ್ನು ಕೇಳ ಬೇಕು. ಮೀರತ್ ಮತ್ತು ಮುಜಾಫರ್ ನಗರದಲ್ಲಿನ ಗಲಭೆಗೆ ಯಾರು ನೇರ ಹೊಣೆ ಎನ್ನುವ ವಿಷಯ ಈಗಾಗಲೇ ಜನತೆಗೆ ತಿಳಿದಿದೆ.
ರೈತರೂ ಮತ್ತು ಅಲ್ಪಸಂಖ್ಯಾತರು
ರೈತರು ಈ ದೇಶಕ್ಕೆ ಅನ್ನವನ್ನು ನೀಡುತ್ತಾರೆ. ಮುಸ್ಲಿಮರು ಕಾರ್ಪೆಟ್, ಚಿಕನ್, ಬಟ್ಟೆಗಳನ್ನು ನೀಡುತ್ತಾರೆ. ಕಾಂಗ್ರೆಸ್ ಸರಕಾರ ರಂಗನಾಥ್ ಮಿಶ್ರಾ ಮತ್ತು ಸಾಚಾರ್ ಕಮಿಷನ್ ಆಯೋಗದ ವರದಿಯಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿತ್ತು. ಈಗ ಅದರ ಬಗ್ಗೆ ಚಕಾರವೆತ್ತುತ್ತಿಲ್ಲ.
ಕಡು ಮುಸ್ಲಿಂ ಕುಟುಂಬಕ್ಕೆ ವಿವಾಹ ಭಾಗ್ಯ
ನಮ್ಮ ಸರಕಾರದಲ್ಲಿ ಕಡು ಬಡ ಮುಸ್ಲಿಂ ಕುಟುಂಬದ ಹೆಣ್ಣು ಮಗಳ ಮದುವೆಗೆ ಮೂವತ್ತು ಸಾವಿರ ರೂಪಾಯಿ ನೀಡುತ್ತೇವೆ. ವಿರೋಧ ಪಕ್ಷಗಳು ನಮ್ಮ ಈ ಹೊಸ ಯೋಜನೆಗೆ ಅಪಸ್ವರ ಎತ್ತುತ್ತಿದೆ. ಆದರೂ ನಾವು ಈ ಯೋಜನೆಯನ್ನು ಜಾರಿಗೆ ತರಲಿದ್ದೇವೆ ಎಂದು ಮುಲಾಯಂ ಸಿಂಗ್ ಹೇಳಿದ್ದಾರೆ.