ಸಂಸತ್ ನಲ್ಲಿ ಕಾಂಗ್ರೆಸ್ ನ ಕಂಡಾಪಟ್ಟೆ ತರಾಟೆಗೆ ತೆಗೆದುಕೊಂಡ ಮೋದಿ
ನವದೆಹಲಿ, ಫೆಬ್ರವರಿ 7: ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ಬಸವೇಶ್ವರರು ಅನುಭವ ಮಂಟಪ ಅಂತ ಮಾಡಿದ್ದರು. ಪ್ರಜಾಪ್ರಭುತ್ವ ಆಗಲೇ ಇತ್ತು. ಮಲ್ಲಿಕಾರ್ಜುನ ಖರ್ಗೆ ಅವರೇ ಕರ್ನಾಟಕದಿಂದ ಬಂದ ನಿಮಗೆ ಇದು ಗೊತ್ತಿಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ ನಲ್ಲಿ ಬುಧವಾರ ತಿವಿದರು.
ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳ ಘೋಷಣೆ ಮಧ್ಯೆ ಮಾತನಾಡಿದ ಅವರು, ಭಾರತವು 1947ರಲ್ಲಿ ಸ್ವಾತಂತ್ರ್ಯ ಪಡೆದ ನಂತರವೇ ಉದಯಿಸಿದ್ದು ಎಂದು ಕಾಂಗ್ರೆಸ್ ಭಾವಿಸಿದಂತಿದೆ. ಈ ದೇಶದಲ್ಲಿ ಪ್ರಜಾತಂತ್ರ ಬಂದಿದ್ದು ನೆಹರೂ ಹಾಗೂ ಕಾಂಗ್ರೆಸ್ ನಿಂದ ಎಂದು ಹೇಳಿಕೊಂಡು ಬಂದಿದ್ದಾರೆ ಎಂದರು.
ರಾಜೀವ್ ಗಾಂಧಿ ಅವರು ಹೈದರಾಬಾದ್ ಗೆ ಹೋದಾಗ ಅಲ್ಲಿನ ಮುಖ್ಯಮಂತ್ರಿ -ದಲಿತ ಸಮುದಾಯದ ಟಿ.ಆಂಜಯ್ಯ ಅವರ ಜತೆ ಕೆಟ್ಟದಾಗಿ ನಡೆದುಕೊಂಡರು. ಅವರ ಸ್ವಾಭಿಮಾನಕ್ಕೆ ಧಕ್ಕೆಯಾಯಿತು. ಆ ಅವಮಾನದ ಬೆಂಕಿಯಲ್ಲಿ ಹುಟ್ಟಿದ್ದೇ ಎನ್.ಟಿ.ರಾಮಾ ರಾವ್ ಅವರ ತೆಲುಗು ದೇಶ ಪಕ್ಷಂ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮೋದಿ : ಮೋದಿಯ ಟಾಪ್ 10 ಹೇಳಿಕೆಗಳು!
ಕಾಂಗ್ರೆಸ್ ನವರು ಪಂಜಾಬ್ ನಲ್ಲಿ ಅಕಾಲಿ ದಳದ ಜತೆಗೆ ಏನು ಮಾಡಿದಿರಿ? ಕೇರಳದಲ್ಲಿ, ತಮಿಳು ನಾಡಿನಲ್ಲಿ ಏನು ಮಾಡಿದಿರಿ? ತಮ್ಮ ಮನಸಿಗೆ ಬಂದಂತೆ ಎಷ್ಟು ರಾಜ್ಯ ಸರಕಾರಗಳನ್ನು ವಜಾ ಮಾಡಿದ್ದೀರಿ. ಪ್ರಜಾಪ್ರಭುತ್ವದ ಬಗ್ಗೆ ಬದ್ಧತೆ ಇಲ್ಲದ್ದನ್ನು ಇದು ತೋರಿಸುತ್ತದೆ. ಆದರೆ ನೀವು ಪ್ರಜಾತಂತ್ರದ ಬಗ್ಗೆ ಮಾತನಾಡುತ್ತೀರಿ ಎಂದರು.
ವಲಭಭಾಯಿ ಪಟೇಲ್ ಪ್ರಧಾನಿ ಆಗಬೇಕಿತ್ತು
ಆಂಧ್ರಪ್ರದೇಶದ ಹೆಮ್ಮೆಯ ಮಗ ನೀಲಂ ಸಂಜೀವ ರೆಡ್ಡಿ ಅವರನ್ನು ಕಾಂಗ್ರೆಸ್ ಹೇಗೆ ಅವಮಾನ ಮಾಡಿತು ಅನ್ನೋದನ್ನು ನಾವು ಮರೆಯಲು ಸಾಧ್ಯವಿಲ್ಲ. ಭಾರತದಲ್ಲಿ ಯಾರೂ ಪ್ರಜಾತಂತ್ರದ ಪಾಠವನ್ನು ಕಾಂಗ್ರೆಸ್ ನಿಂದ ಕಲಿಯುವ ಅಗತ್ಯ ಇಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ಮೊದಲ ಪ್ರಧಾನಿ ಆಗಿದ್ದರೆ ಜಮ್ಮು- ಕಾಶ್ಮೀರ ಈ ದಿನ ಇಬ್ಭಾಗ ಆಗುತ್ತಿರಲಿಲ್ಲ.
ಯಾರು ಶಾಸಕರು, ಸಂಸದರು ಎಂದು ನೋಡಿ ಭೇದ ಮಾಡಲ್ಲ
ಬೀದರ್- ಕಲಬುರ್ಗಿ ನೂರಾ ಹತ್ತು ಕಿಲೋಮೀಟರ್ ರೈಲ್ವೆ ಯೋಜನೆಯನ್ನು ಮಂಜೂರು ಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರ. ಅದನ್ನು ಪೂರ್ತಿ ಮಾಡಲು ಹಣಕಾಸು ಬಿಡುಗಡೆ ಮಾಡಿದ್ದು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ. ಯಾವ ಯೋಜನೆ, ಅಲ್ಲಿ ಯಾರು ಶಾಸಕರು, ಸಂಸದರು ಅಂತ ನೋಡಲ್ಲ. ಅಂದ ಹಾಗೆ ಆ ಯೋಜನೆ ಪೂರ್ಣ ಆದ ಮೇಲೆ ಉದ್ಘಾಟನೆ ಮಾಡಿದ್ದು ನಾನು ಎಂಬುದನ್ನು ಖರ್ಗೆಯವರಿಗೆ ನೆನಪಿಸಲು ಇಷ್ಟಪಡ್ತೀನಿ.
ವಿವಿಧ ರಾಜ್ಯ ಸರಕಾರಗಳನ್ನು 90 ಸಲ ಕಿತ್ತೊಗೆದಿದ್ದೀರಿ
ಹಿಂದಿನ ಸರಕಾರಗಳಿಗಿಂತ ಈಗಿನ ಎನ್ ಡಿಎ ಸರಕಾರ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದೆ. ದೇಶದಾದ್ಯಂತ ಎಲ್ಲ ವಲಯಗಳ ಮೂಲಸೌಕರ್ಯ ಯೋಜನೆಗಳಿಗೆ ಉತ್ತೇಜನ ನೀಡಿದ್ದೇವೆ. ಪ್ರಜಾಪ್ರಭುತ್ವದ ಅಡಿ ಆಯ್ಕೆಯಾದ ವಿವಿಧ ರಾಜ್ಯ ಸರಕಾರಗಳನ್ನು 90 ಸಲ ಕಿತ್ತೊಗೆದಿದ್ದೀರಿ. ಆದರೂ ಪ್ರಜಾತಂತ್ರದ ಬಗ್ಗೆ ಮಾತನಾಡುತ್ತೀರಿ.
ವಿಷವೂಡಿಸಿದ ಕಾಂಗ್ರೆಸ್
ವಿಷವೂಡಿಸಿದ ಕಾಂಗ್ರೆಸ್ ನ ಕೃತ್ಯಕ್ಕೆ ಪ್ರತಿ ಭಾರತೀಯ ಬೆಲೆ ತೆರಬೇಕಾಗಿದೆ. ನನ್ನ ಧ್ವನಿಯನ್ನು ಅಡಗಿಸಲು ಅವರು ಪ್ರಯತ್ನ ಪಡುತ್ತಿದ್ದಾರೆ. ಆದರೆ ಅದರಲ್ಲಿ ಅವರು ವಿಫಲರಾಗುತ್ತಾರೆ. ರೋಜ್ ಗಾರ್ ಯೋಜನೆಯಲ್ಲಿ ಯಾವ ರಾಜ್ಯಗಳು ಮುಂದಿವೆ ನೋಡಿ. ಕರ್ನಾಟಕ, ಕೇರಳ, ಒಡಿಶಾ.. ಇವೆಲ್ಲ ಮುಂಚೂಣಿಯಲ್ಲಿವೆ. ಅಲ್ಲೆಲ್ಲಾ ಬಿಜೆಪಿ ಅಥವಾ ಎನ್ ಡಿಎ ಇದೆಯಾ ಎಂದು ಪ್ರಶ್ನೆ ಮಾಡಿದರು.