ರೈತರಷ್ಟೇ ಅಲ್ಲ, ಶಾಸಕರೂ ಸಾಯುತ್ತಾರೆ: ಗೋಪಾಲ್ ಭಾರ್ಗವ್
ಸಗರ(ಮಧ್ಯ ಪ್ರದೇಶ), ಫೆಬ್ರವರಿ 23: "ರೈತರಷ್ಟೇ ಅಲ್ಲ, ಎಂಎಲ್ ಎ ಗಳೂ ಸಾಯುತ್ತಾರೆ, ವ್ಯಾಪಾರಿಗಳೂ ಸಾಯುತ್ತಾರೆ" ಎನ್ನುವ ಮೂಲಕ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ ಮಧ್ಯಪ್ರದೇಶದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಗೋಪಾಲ್ ಭಾರ್ಗವ್!
ಮಧ್ಯಪ್ರದೇಶದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚುತ್ತಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಕೇವಲ ರೈತರಷ್ಟೇ ಅಲ್ಲ, ಶಾಸಕರು, ಸಂಸದರೂ ಸಾಯುತ್ತಾರೆ. ವ್ಯಾಪಾರದಲ್ಲಿ ನಷ್ಟವಾದರೆ ವ್ಯಾಪಾರಸ್ಥರೂ ಸಾಯುವುದಿಲ್ಲವೇ? ಪರೀಕ್ಷೆಯಲ್ಲಿ ಫೇಲಾದರೆ ವಿದ್ಯಾರ್ಥಿಗಳು ಸಾಯುವುದಿಲ್ಲವೇ? ಕಳೆದ ನಾಲ್ಕು ವರ್ಷದಲ್ಲಿ ಹತ್ತು ಶಾಸಕರು ಸತ್ತಿದ್ದಾರೆ, ಸಾವನ್ನು ಯಾವತ್ತಾದರೂ ನಿಯಂತ್ರಿಸೋಕೆ ಸಾಧ್ಯವೇ?" ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
5 ಎಕರೆ ಜಮೀನಿಗೆ 4 ಲಕ್ಷ ರೂ ಪರಿಹಾರ! ಕಂಗೆಟ್ಟ ರೈತ ಆತ್ಮಹತ್ಯೆ
ಸಾವು ಯಾರನ್ನೂ ಬಿಟ್ಟಿಲ್ಲ. ಸಾಲದಿಂದ ಪರಿತಪಿಸುತ್ತಿರುವ ರೈತರ ಬಗ್ಗೆ, ಆತ್ಮಹತ್ಯೆ ಮಾಡಿಕೊಂಡ ರೈತರ ಬಗ್ಗೆ ನನಗೆ ಖಂಡಿತ ಅನುಕಂಪ ಇದೆ. ಆದರೆ ಸಾವು ಯಾರನ್ನು ಬಿಟ್ಟಿಲ್ಲ ಹೇಳಿ? ಶಾಸಕರೇನು ಅಮರರೇ..? ಎಂದು ಪ್ರಶ್ನಿಸಿದ್ದಾರೆ ಭಾರ್ಗವ್.
ಮಧ್ಯಪ್ರದೇಶದಲ್ಲಿ ವಿವಿಧ ಕಾರಣಕ್ಕೆ ಈ ವರ್ಷವೇ ಸುಮಾರು 984 ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯೊಂದು ಹೇಳಿದೆ. ಈ ವರ್ಷ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಅಲ್ಲಿನ ಬಿಜೆಪಿ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಒಂದು ಸವಾಲಿನ ಸಂಗತಿಯಾಗಿದೆ.